ಕೊರೋನ ನಿಯಂತ್ರಣಕ್ಕೆ ಕಂಟೈನ್ಮೆಂಟ್ ಯೋಜನೆ ಸಿದ್ಧ : ಜಿಲ್ಲಾಧಿಕಾರಿ ಜಗದೀಶ್
ಉಡುಪಿ, ಎ.12: ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಪತ್ತೆಯಾಗಿರುವ ಮೂರು ಕೊರೋನ ಪ್ರಕರಣಗಳು ಜಿಲ್ಲೆಯ ಹೊರಗಿನಿಂದ ಬಂದ ಪ್ರಕರಣ ಗಳಾಗಿದ್ದು, ಜಿಲ್ಲೆಯ ಒಳಗೆ ಯಾವುದೇ ಕೊರೋನಾ ಪ್ರಕರಣಗಳು ಕಂಡು ಬರುವ ಸಾಧ್ಯತೆಗಳು ಇಲ್ಲವಾಗಿದೆ. ಒಂದು ವೇಳೆ ಕಂಡು ಬಂದಲ್ಲಿ, ಅದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಕಂಟೈನ್ಮೆಂಟ್ ಪ್ಲಾನ್ ಸಿದ್ದಪಡಿಸ ಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರವಿವಾರ ಜಿಲ್ಲೆಯ ಕಂಟೈನ್ಮೆಂಟ್ ಪ್ಲಾನ್ ರಚನೆ ಕುರಿತು ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತಿದ್ದರು.
ಮೂರು ಕೋರೊನಾ ಪ್ರಕರಣಗಳ ಪೈಕಿ ಒಬ್ಬರು ಸಂಪೂರ್ಣ ಗುಣಮುಖ ರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಉಳಿದ ಇಬ್ಬರ ಕೂಡ ಆರೋಗ್ಯದಿಂದ ಇದ್ದಾರೆ. ಅವರ ವೈದ್ಯಕೀಯ ವರದಿ ನಿರೀಕ್ಷೆಯಲ್ಲಿದೆ. ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಹೊರ ಜಿಲ್ಲೆಗಳಿಂದ ಬರುವ ವಾಹನಗಳು ಮತ್ತು ಪ್ರಯಾಣಿ ಕರನ್ನು ನಿರ್ಬಂಧಿಸಲಾಗಿದೆ ಎಂದರು.
ಹೊರ ಜಿಲ್ಲೆಗಳಿಂದ ಕೊರೋನ ಕಾಣಿಸಿಕೊಳ್ಳುವ ಭೀತಿ ಇಲ್ಲ. ಆದರೆ ಒಂದು ವೇಳೆ ಜಿಲ್ಲೆಯಲ್ಲಿ ಸ್ಥಳೀಯವಾಗಿ ಪಾಸಿಟಿವ್ ಪ್ರಕರಣ ಕಂಡು ಬಂದಲ್ಲಿ, ಪ್ರಕರಣ ಕಂಡು ಬಂದ ಸ್ಥಳದ 3 ಕಿಮೀ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ರೆನ್ ವ್ಯಾಪ್ತಿಗೆ ಹಾಗೂ ನಂತರದ 2 ಕಿಮೀ ವ್ಯಾಪ್ತಿಯಲ್ಲಿ ಬಪರ್ ರೆನ್ ನಿರ್ಮಾಣ ಮಾಡಲಾಗುುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಕಂಟೈನ್ಮೆಂಟ್ ರೆನ್ ನಿರ್ಮಾಣ ಮಾಡಿದಲ್ಲಿ, ಆ ಸ್ಥಳದಲ್ಲಿ ಕೈಗೊಳ್ಳ ಬೇಕಾದ ಕ್ರಮಗಳು ಹಾಗೂ ಅಗತ್ಯ ಸಿಬ್ಬಂದಿಯ ನಿಯೋಜನೆ ಹಾಗೂ ಅವರು ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಜಿಲ್ಲಾಧಿಕಾರಿಗಳು, ವೈದ್ಯಕೀಯ, ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳಿಗೆ ವಿವರಿಸಿದರು.
ಕೇವಲ 2 ಗಂಟೆಗಳಲ್ಲಿ ಕಂಟೈನ್ಮೆಂಟ್ ರೆನ್ ನಿರ್ಮಾಣ ಮಾಡಲು ಮತ್ತು ನಂತರದ 4 ಗಂಟೆಗಳ ಅವಧಿಯಲ್ಲಿ ವೈದ್ಯಕೀಯ, ಅಗತ್ಯ ವಸ್ತುಗಳ ಸೇವೆ, ಕಂಟ್ರೋಲ್ ರೂಂ ಸೇರಿದಂತೆ ಎಲ್ಲಾ ಅಗತ್ಯತೆಗಳನ್ನು ಆ ಪ್ರದೇಶದಲ್ಲಿ ಒದಗಿಸಲು ಯೋಜನೆ ಸಿದ್ಧಪಡಿಸಿದ್ದು, ಇದಕ್ಕೆ ಅಗತ್ಯವಾದ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು ಮತ್ತು ಸೇವೆಗೆ ಲಭ್ಯವಾಗಲು ಸದಾ ಸಿದ್ದವಾಗಿರುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಕೊರೋನಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಕಂಟೈನ್ ಮೆಂಟ್ ಪ್ಲಾನ್ ಬಗ್ಗೆ ವಿವರಿಸಿದರು. ಸಭೆಯಲ್ಲಿ ಜಿಪಂ ಸಿಇಓ ಪ್ರೀತಿ ಗೆಹಲೋತ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಎಲ್ಲಾ ತಹಸೀಲ್ದಾರ್ಗಳು ಮತ್ತು ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.
ಚೆಕ್ಪೋಸ್ಟ್ಗಳಲ್ಲಿ ಸಿಸಿಟಿವಿ ಆಳವಡಿಕೆ: ಡಿಸಿ
ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ಸಂಬಂಧಪಟ್ಟ ತಹಸೀಲ್ದಾರ್ಗಳು ಮತ್ತು ಪೊಲೀಸ್ ಇಲಾಖೆ ಅತ್ಯಂತ ಕಟ್ಟುನಿಟ್ಟಾಗಿ ತಪಾಸಣೆ ನಡೆಸಬೇಕು. ಇತರೆ ಜಿಲ್ಲೆಗಳಿಂದ ನೀಡಿದ ಪಾಸ್ಗಳನ್ನು ನಮ್ಮಲ್ಲಿ ಮಾನ್ಯ ಮಾಡಬಾರದು. ಎಲ್ಲಾ ಚೆಕ್ ಪೋಸ್ಟ್ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು ಎಂದು ಜಿಲ್ಲಾ ಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದರು.