ಮಾಧ್ಯಮಗಳ ಧ್ವನಿ ಉಡುಗಿಸುವ ಪ್ರಯತ್ನ: Thewire.in ವಿರುದ್ಧ ಎಫ್‌ಐಆರ್‌ಗೆ 200ಕ್ಕೂ ಅಧಿಕ ಪತ್ರಕರ್ತರ ಖಂಡನೆ

Update: 2020-04-12 16:07 GMT

ಹೊಸದಿಲ್ಲಿ, ಎ.12: ಸುದ್ದಿ ಜಾಲತಾಣ ‘Thewire.in’ನ ಸ್ಥಾಪಕ ಸಂಪಾದಕ ಸಿದ್ಧಾರ್ಥ ವರದರಾಜನ್ ಅವರ ವಿರುದ್ಧ ಉತ್ತರ ಪ್ರದೇಶ ಸರಕಾರವು ಎಫ್‌ಐಆರ್ ದಾಖಲಿಸಿರುವುದನ್ನು 200ಕ್ಕೂ ಅಧಿಕ ಪತ್ರಕರ್ತರು ಖಂಡಿಸಿದ್ದಾರೆ. ಎ.10ರಂದು ‘Thewire.in’ಗೆ ನೋಟಿಸನ್ನು ಜಾರಿಗೊಳಿಸಿದ್ದ ಉತ್ತರ ಪ್ರದೇಶ ಪೊಲೀಸರು ದೇಶವ್ಯಾಪಿ 21 ದಿನಗಳ ಲಾಕ್‌ಡೌನ್ ಜಾರಿಯಲ್ಲಿದ್ದರೂ ಎ.14ರಂದು ಅಯೋಧ್ಯೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ವರದರಾಜನ್‌ಗೆ ಸಮನ್ಸ್ ನೀಡಿದ್ದರು.

ಉ.ಪ್ರದೇಶ ಸರಕಾರ ಮತ್ತು ಅದರ ಪೊಲೀಸರು ಈ ವಿಷಯವನ್ನು ಬೆಂಬತ್ತಿರುವ ರೀತಿಯು ಪ್ರತೀಕಾರ ಭಾವನೆಯ ಏಕೈಕ ಉದ್ದೇಶದ ಅಜೆಂಡಾವನ್ನು ಸೂಚಿಸುತ್ತಿದೆ. ಸರಕಾರವು ತನ್ನ ಅಧಿಕಾರಗಳ ಬಳಕೆಯ ಕುರಿತು ಸಂಯಮವನ್ನು ವಹಿಸುವ ಹೆಚ್ಚುವರಿ ಹೊಣೆಗಾರಿಕೆಯನ್ನು ಹೊಂದಿದ್ದರೆ ನಾಗರಿಕರು ತಮ್ಮ ಹಲವಾರು ಸಾಮಾನ್ಯ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸಲೂ ನಿರ್ಬಂಧಿಸಲ್ಪಟ್ಟಿದ್ದಾರೆ ಎಂದು 200ಕ್ಕೂ ಅಧಿಕ ಪತ್ರಕರ್ತರು ಸಹಿ ಹಾಕಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

‘Thewire.in’ನಲ್ಲಿ ಪ್ರಕಟಗೊಂಡಿದ್ದ ಲೇಖನವೊಂದರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಧಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳಿವೆ ಎಂದು ಆರೋಪಿಸಿ ಪೊಲೀಸರು ಅದರ ಮತ್ತು ಸಂಪಾದಕರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಈ ಎಫ್‌ಐಆರ್ ಮಾಧ್ಯಮಗಳ ಧ್ವನಿಯನ್ನಡಗಿಸುವ ಪ್ರಯತ್ನವಾಗಿದೆ. ಲೇಖನದಲ್ಲಿ ಆಚಾರ್ಯ ಪರಮಹಂಸರು ಹೇಳಿದ್ದ ಒಂದು ವಾಕ್ಯವನ್ನು ಆದಿತ್ಯನಾಥರು ಹೇಳಿದ್ದೆಂದು ತಪ್ಪಾಗಿ ಬಿಂಬಿಸಲಾಗಿತ್ತು. ಬಳಿಕ ‘Thewire.in’ ಇದನ್ನು ಹಿಂದೆಗೆದುಕೊಂಡು ತಿದ್ದುಪಡಿಯನ್ನೂ ಪ್ರಕಟಿಸಿತ್ತು. ವಿಷಯವನ್ನು ಅಲ್ಲಿಗೇ ಅಂತ್ಯಗೊಳಿಸುವ ಬದಲು ಫೈಝಾಬಾದ್ ಜಿಲ್ಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬೆಟ್ಟು ಮಾಡಿರುವ ಹೇಳಿಕೆಯು,ಜನರು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.

ಇಂತಹ ಸಂದರ್ಭದಲ್ಲಿ ಅವರೇ ಸುದ್ದಿಗಳನ್ನು ಮಾಡಲು ಸಾಧ್ಯವಿಲ್ಲ,ಹೀಗಾಗಿ ಪತ್ರಿಕಾ ಸ್ವಾತಂತ್ರವು ಇಮ್ಮಡಿ ಮಹತ್ವನ್ನು ಹೊಂದಿದೆ ಮತ್ತು ಅವರು ತಮ್ಮ ಕಳವಳಗಳನ್ನು ವ್ಯಕ್ತಪಡಿಸಲು ಸ್ವತಂತ್ರ ಪ್ರತಿಕೋದ್ಯಮವು ಅವರ ಪಾಲಿಗೆ ಮುಖ್ಯವಾದ ಮಾಧ್ಯಮವಾಗಿದೆ. ಮಾಧ್ಯಮ ವ್ಯಕ್ತಿಗಳಿಗೆ ಇಂತಹ ರಾಜಕೀಯ ಪ್ರೇರಿತ ಕಿರುಕುಳಗಳು ನಿಲ್ಲಬೇಕು ಎಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News