×
Ad

ಉಡುಪಿ: ಜಿಲ್ಲೆಯಲ್ಲಿ ಒಟ್ಟು 409 ಸ್ಯಾಂಪಲ್‌ಗಳ ವರದಿ ಬಾಕಿ

Update: 2020-04-16 20:01 IST

ಉಡುಪಿ, ಎ.16: ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನ ಪರೀಕ್ಷೆಗಾಗಿ ಗುರುವಾರ ಕಳುಹಿಸಿದ 178 ಸ್ಯಾಂಪಲ್ ಸೇರಿದಂತೆ ಕಳೆದ ಮೂರು ದಿನಗಳ ಒಟ್ಟು 409 ಸ್ಯಾಂಪಲ್‌ಗಳ ವರದಿ ಬರಲು ಇನ್ನೂ ಬಾಕಿ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಬುಧವಾರದವರೆಗೆ ಒಟ್ಟು 231 ಸ್ಯಾಂಪಲ್‌ಗಳ ವರದಿ ಬಾಕಿ ಇದ್ದರೆ, ಗುರುವಾರ ಹೊಸದಾಗಿ ಇನ್ನೂ 178 ಮಂದಿಯ ಗಂಟಲು ದ್ರವದ ಮಾದರಿ ಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇವುಗಳಲ್ಲಿ 150 ಮಂದಿ ಕೊರೋನ ಶಂಕಿತರ ಸಂಪರ್ಕಕ್ಕೆ ಬಂದವರಾದರೆ, 8 ಮಂದಿ ತೀವ್ರ ಉಸಿರಾಟದ ತೊಂದರೆ ಗಾಗಿ ಹಾಗೂ ಒಬ್ಬರು ಶೀತಜ್ವರದ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ 19 ಮಂದಿ ವಿವಿಧ ಕೊರೋನ ಹಾಟ್‌ಸ್ಪಾಟ್‌ನಿಂದ ಮರಳಿದವರು ಎಂದು ಅವರು ವಿವರಿಸಿದರು.

ನಿನ್ನೆಯಂತೆ ಇಂದೂ ಸಹ ಮಂಗಳೂರು ಪ್ರಯೋಗಾಲಯದಿಂದ ಯಾರೊಬ್ಬರ ಸ್ಯಾಂಪಲ್‌ನ ವರದಿ ಬಂದಿಲ್ಲ. ಹೀಗಾಗಿ ಕಳೆದ ಮೂರು ದಿನಗಳ ಒಟ್ಟು 409 ಮಾದರಿಗಳ ಪರೀಕ್ಷೆ ಫಲಿತಾಂಶಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದರು.

ಗುರುವಾರ ಇನ್ನೂ ಎಂಟು ಮಂದಿ ಹೊಸದಾಗಿ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ಐವರು ಪುರುಷರು ಹಾಗೂ ಮೂವರು ಮಹಿಳೆಯರು. ನಾಲ್ವರು ತೀವ್ರ ಉಸಿರಾಟದ ತೊಂದರೆಗಾಗಿ ಬಂದಿದ್ದರೆ, ನಾಲ್ವರು ಶಂಕಿತ ಕೋವಿಡ್ ಸೋಂಕಿನ ಪರೀಕ್ಷೆಗೆ ಬಂದಿದ್ದಾರೆ. ಇಂದು ಯಾರೊಬ್ಬರೂ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿಲ್ಲ ಎಂದು ಡಿಎಚ್‌ಓ ತಿಳಿಸಿದರು.

ಜಿಲ್ಲೆಯಿಂದ ಇದುವರೆಗೆ ಒಟ್ಟು 821 ಮಂದಿಯ ಸ್ಯಾಂಪಲ್‌ಗಳನ್ನು ಸೋಂಕಿನ ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ ಈವರೆಗೆ 412ಮಂದಿಯ ವರದಿ ಮಾತ್ರ ಬಂದಿವೆ. 409 ಸ್ಯಾಂಪಲ್ ನೆಗೆಟಿವ್ ಆಗಿದ್ದರೆ, ಮೂವರದ್ದು ಮಾತ್ರ ಪಾಸಿಟಿವ್ ಆಗಿವೆ ಎಂದವರು ತಿಳಿಸಿದರು.

ಜಿಲ್ಲೆಯಲ್ಲಿ ಉಸಿರಾಟದ ತೊಂದರೆ, ಪ್ರಯಾಣದಿಂದ ಬಂದವರು ಹಾಗೂ ಕೋವಿಡ್ ಶಂಕಿತರ ಸಂಪರ್ಕಕ್ಕೆ ಬಂದವರು ಸೇರಿ ಗುರುವಾರ ಮತ್ತೆ 145 ಮಂದಿ ಹೊಸದಾಗಿ ತಪಾಸಣೆಗಾಗಿ ನೋಂದಣಿಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 2,292 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 1479 (ಇಂದು 108) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 2,050 (34) ಮಂದಿ 14 ದಿನಗಳ ನಿಗಾವನ್ನು ಪೂರ್ಣ ಗೊಳಿಸಿದ್ದಾರೆ. ಒಟ್ಟು 152 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 38 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ. ಇಂದು ಯಾರೊಬ್ಬರೂ ಆಸ್ಪತ್ರೆ ಕ್ವಾರಂಟೈನ್‌ನಿಂದ ಬಿಡುಗಡೆಗೊಂಡಿಲ್ಲ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News