ಬ್ಯಾರಿ ಅಕಾಡಮಿಯಿಂದ ಬ್ಯಾರಿ ಕಲಾವಿದರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

Update: 2020-04-17 09:13 GMT

ಮಂಗಳೂರು, ಎ.17: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಮಾರ್ಗದರ್ಶನದಂತೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ 100 ಅರ್ಹ ಕವಿ, ಸಾಹಿತಿ ಹಾಗೂ ಕಲಾವಿದರ ಕುಟುಂಬಕ್ಕೆ ಅಗತ್ಯ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅಕಾಡಮಿಯ ಕಚೇರಿಯಲ್ಲಿ‌ ಶುಕ್ರವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ವಿತರಿಸಿದರು.  

ಬಳಿಕ ಮಾತನಾಡಿದ ಅವರು, ಕೊರೋನ ಸಮಸ್ಯೆಯಿಂದ ಉಂಟಾದ ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಸಾಮಾಜಿಕ ಅಂತರವನ್ನು ಕಾಪಾಡಿ ಮನೆ ಮನೆ ತೆರಳಿ ಆಹಾರ ಕಿಟ್‌ಗಳನ್ನು ನೀಡುತ್ತಿರುವ ಅಕಾಡಮಿಯ ಸೇವೆ ಶ್ಲಾಘನೀಯ. ಉಳಿದ ಎಲ್ಲಾ ಅಕಾಡಮಿ, ನಿಗಮ, ಪ್ರಾಧಿಕಾರಗಳು ಕೂಡ ಅವರವರ ವ್ಯಾಪ್ತಿಗೆ ಬರುವ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಇಂತಹ ಕಾರ್ಯಕ್ರಮಗಳನ್ನು ಎಲ್ಲಾ ಕಡೆ ಹಮ್ಮಿಕೊಳ್ಳಬೇಕೆಂದು ಹೇಳಿದರು.

 ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು  ಮಾತನಾಡಿ, ಕೇವಲ ಕಾಟಾಚಾರಕ್ಕೆ ಆಹಾರ ಕಿಟ್ ವಿತರಿಸದೆ ಒಂದು ಸಣ್ಣ ಕುಟುಂಬವು ಒಂದು ತಿಂಗಳಿಗೆ ಉಪಯೋಗಿಸಲು ಅನುಕೂಲವಾಗುವಂತೆ ಗುಣಮಟ್ಟದ ಆಹಾರವನ್ನು ಪೂರೈಸುತ್ತಿರುವ ಅಕಾಡಮಿಯ ಕಾರ್ಯವನ್ನು ಶ್ಲಾಘಿಸಿದರು.

ಮಂಗಳೂರು ಮೇಯರ್  ದಿವಾಕರ್ ಪಾಂಡೇಶ್ವರ ಮಾತನಾಡಿ, ಅರ್ಹ ಕುಟುಂಬಕ್ಕೆ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಬ್ಯಾರಿ ಅಕಾಡಮಿಯು ಮಾಡುತ್ತಿರುವ ಈ ಕಾರ್ಯಕ್ರಮ ಎಲ್ಲಾ ಕಾರ್ಯಕ್ರಮಗಳಿಗಿಂತಲು ಅತ್ಯಂತ ಶ್ರೇಷ್ಠವಾಗಿದ್ದು, ಬ್ಯಾರಿ ಅಕಾಡಮಿಯು ಇಂತಹ ಸಾಮಾಜಿಕ ಕಾರ್ಯಕ್ರಮವನ್ನು ಮಾಡುವ ಮೂಲಕ ತಾವು ಇತರರಿಗಿಂತ ಭಿನ್ನವೆಂದು ತೋರಿಸಿಕೊಟ್ಟಿದ್ದಾರೆ. ಹಾಗೂ ಉಳಿದ ಅಕಾಡಮಿಗಳು ಕೂಡ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೇಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬ್ಯಾರಿ ಅಕಾಡಮಿಯ ಅಧ್ಯಕ್ಷ  ರಹೀಂ ಉಚ್ಚಿಲ್ ಮಾತನಾಡಿ ಕವಿ, ಸಾಹಿತಿ ಮತ್ತು ಕಲಾವಿದರು ಕಷ್ಟಗಳಿಂದ ದೂರವಾಗಿ ಸಂತೃಪ್ತಿಯಿಂದ ಇದ್ದರೆ ಮಾತ್ರ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಜೀವಂತವಾಗಿರಲು ಸಾದ್ಯ. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಸಾಹಿತಿ ಕಲಾವಿದರಿಗೆ ಯಾವುದೇ ಆದಾಯ ಇರುವುದಿಲ್ಲ. ಹಾಗೆಯೇ ಸಾಂಸ್ಕೃತಿಕ ಲೋಕದ ವ್ಯಕ್ತಿಗಳು ಯಾವತ್ತು ಯಾರ ಮುಂದೆಯು ಕೈಚಾಚದೆ ಸ್ವಾಭಿಮಾನದಿಂದ ಬದುಕುವವರು, ಇಂತಹವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಆಹಾರದ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯ ಅಬ್ದುಲ್ ರಝಾಕ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿ,  ವಂದಿಸಿದರು.

 ಸದಸ್ಯರಾದ ಮುರಳಿರಾಜ್ ಹಾಗೂ ರೂಪೇಶ್, ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರಾದ ರಾಶ್ ಬ್ಯಾರಿ, ಮುನ್ನ ಕಮ್ಮರಡಿ, ಸಿದ್ದೀಕ್ ಮಂಜೇಶ್ವರ, ಫಾರೂಕ್ ಆತೂರು, ಇಮ್ರಾನ್ ಉಪ್ಪಿನಂಗಡಿ, ಖಾಲಿದ್ ನಂದಾವರ, ಅಝೀಝ್ ಲೊರಟ್ಟೊಪದವು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News