×
Ad

ಉಡುಪಿ: ಶೆಲ್ಟರ್ ರೂಮ್ ನಿರ್ವಹಣೆಗೆ ಸಂಪನ್ಮೂಲ ಕ್ರೂಢೀಕರಣ ಸಭೆ

Update: 2020-04-17 19:27 IST

ಉಡುಪಿ, ಎ.17: ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ಬಂಧ  ಕಾಜ್ಞೆಯನ್ನು ಹೊರಡಿಸಿ ಹೊರಗೆ ಜನರ ಸಂಚಾರವನ್ನು ನಿಷೇಧಿಸಲಾಗಿದ್ದು, ಇದರಿಂದ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕೂಲಿ ಕಾರ್ಮಿಕರು, ನಿರಾಶ್ರಿತರು ಹಾಗೂ ವಲಸೆ ಕಾರ್ಮಿಕರಿಗೆ ಈಗಾಗಲೇ 12 ಆಶ್ರಯ ಕೊಠಡಿ (ಶೆಲ್ಟರ್ ರೂಮ್)ಗಳನ್ನು ತೆರೆದು ಒಟ್ಟು 658 ಕೂಲಿ ಕಾರ್ಮಿಕರಿಗೆ ವಸತಿ/ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಪ್ರಸ್ತುತ ದೇಶದಾದ್ಯಂತ ಲಾಕ್‌ಡೌನ್ ಆದೇಶವನ್ನು ಮೇ 3ರವರೆಗೆ ಮುಂದುವರಿಸಿರುವುದರಿಂದ, ಈ ಶೆಲ್ಟರ್ ರೂಮ್‌ಗಳಲ್ಲಿ ಆಶ್ರಯ ಪಡೆದಿರು ವವರ ಹಾಗೂ ಜಿಲ್ಲೆಯಾದ್ಯಂತ ಇರುವ ಬಡವರ ಯೋಗಕ್ಷೇಮಕ್ಕಾಗಿ ಹೆಚ್ಚಿನ ಮುತುವರ್ಜಿ ತೋರಿಸುವ ಅನಿವಾರ್ಯತೆ ಜಿಲ್ಲಾಡಳಿತಕ್ಕೆ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಇವರಿಗಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂಪನ್ಮೂಲ ಕ್ರೋಢೀಕರಣ ಗೊಳಿಸುವ ಬಗ್ಗೆ ಚರ್ಚಿಸಲು ಗುರುವಾರ ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅಧ್ಯಕ್ಷತೆಯಲ್ಲಿ ಸಭೆಯೊಂದನ್ನು ನಡೆಸಲಾಯಿತು.

ಸಭೆಯಲ್ಲಿ ಜಿಲ್ಲೆಯ ಸಂಘ ಸಂಸ್ಥೆಗಳ, ಸಂಘಟನೆಗಳ ಅಧ್ಯಕ್ಷರು/ಪದಾಧಿಕಾರಿಗಳು ಹಾಜರಿದ್ದು ಜಿಲ್ಲಾಡಳಿತದ ಜೊತೆಗೆ ಕೈಜೋಡಿಸಿ ಜಿಲ್ಲಾ ವ್ಯಾಪ್ತಿಯಲ್ಲಿ ಬಡವರಿಗೆ ಹಾಗೂ ಶೆಲ್ಟರ್ ರೂಮ್‌ನಲ್ಲಿ ಆಶ್ರಯ ಪಡೆದಿರುವ ಕಾರ್ಮಿಕರಿಗೆ ಊಟೋಪಚಾರಕ್ಕೆ ಅಗತ್ಯವಿರುವ ಕಿಟ್‌ಗಳನ್ನು ಒದಗಿಸಲು ನೆರವನ್ನು ವಸ್ತು ರೂಪದಲ್ಲಿ ಒದಗಿಸುವ ಬಗ್ಗೆ ಸಭೆಯಲ್ಲಿ ಭರವಸೆ ನೀಡಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಸಹಾಯಕ ಕಮಿಷನರ್ ರಾಜು ಮುಂತಾದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಅಲ್ಲದೇ ಸಭೆಯಲ್ಲಿ ಜಿಲ್ಲಾ ಮರಳು ಮಾಲಕರ, ಜಿಲ್ಲಾ ಕ್ರಷರ್ ಘಟಕಗಳ ಮತ್ತು ಕಲ್ಲು ಗಣಿ ಗುತ್ತಿಗೆ, ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘ, ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಅಸೋಸಿಯೇಶನ್,ವೈನ್ ಮಚೆರ್ಂಟ್ ಅಸೋಸಿಯೇಶನ್. ರೈಸ್‌ಮಿಲ್ ಅಸೋಸಿಯೇಶನ್, ಆಯಿಲ್ ಮಿಲ್ ಅಸೋಸಿಯೇಶನ್,ದ.ಕ.ಹಾಗೂ ಉಡುಪಿ ಜಿಲ್ಲೆಯ ಸಹಕಾರಿ ಮೀನುಗಾರರ ಫೆಡರೇಷನ್, ಐಸ್‌ಪ್ಲಾಂಟ್ ಮಾಲಕರ ಅಸೋಸಿಯೇಶನ್, ಮೀನು ರಫ್ತುಗಾರರ ಸಂಘ, ದ.ಕ. ಜಿಲ್ಲಾ ಕೋಳಿ ಸಾಕಣೆದಾರರ ಸಹಕಾರ ಸಂಘ, ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟಿಂಗ್ ಅಸೋಸಿಯೇಶನ್, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್, ಜಿಲ್ಲಾ ಸಣ್ಣ ಕೈಗಾರಿಕಾ ಸಂಘ, ಜಿಲ್ಲಾ ಜ್ಯುವೆಲ್ಲರ್ಸ್ ಅಸೋಸಿಯೇಶನ್‌ಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಸಂಘಟನೆಗಳ ಮಾಲಕರು, ಜಿಲ್ಲಾಡಳಿತದ ವತಿಯಿಂದ ಕೊರೋನ ಸಂತ್ರಸ್ಥರಿಗೆ ನೀಡಲಾಗುತ್ತಿರುವ ಉಚಿತ ವಸತಿ ಹಾಗೂ ಊಟೋಪಚಾರದ ಸೇವೆಗೆ ನೆರವು ನೀಡುವ ಘೋಷಣೆ ಮಾಡಿದರು. ಮಂದಾರ್ತಿಯ ಲಕ್ಷ್ಮೀ ಫಾರ್ಮ್ಸ್ ಎಂಡ್ ಫೀಡ್ಸ್ ಒಂದೂವರೆ ಲಕ್ಷ ರೂ. ಮೊತ್ತದ ಆಹಾರ ಕಿಟ್ ಒದಗಿಸಲು ಮುಂದೆ ಬಂದರೆ, ಸಿವಿಲ್ ಇಂಜಿನಿಯರ್ಸ್‌ ಮತ್ತು ಆರ್ಕಿಟೆಕ್ಟ್ ಅಸೋಸಿಯೇಷನ್ ಒಂದು ಲಕ್ಷ ರೂ.ಮೊತ್ತದ ಆಹಾರ ಕಿಟ್ ನೀಡುವ ಘೋಷಣೆ ಮಾಡಿತು.

ಬಾಕ್ಸ್ ಮಾಡಿ
ಶೆಲ್ಟರ್ ರೂಮ್ ನಿರ್ವಹಣೆ ಸಭೆ
 ಶೆಲ್ಟರ್ ರೂಮ್‌ಗಳ ನಿರ್ವಹಣೆಯ ಕುರಿತಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
 ಸಭೆಯಲ್ಲಿ ವಲಸೆ ಕಾರ್ಮಿಕರು, ನಿರಾಶ್ರಿತರು ಹಾಗೂ ಕೂಲಿ ಕಾರ್ಮಿಕರಿಗಾಗಿ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿರುವ 15 ಶೆಲ್ಟರ್ ರೂಮ್‌ಗಳಲ್ಲಿ ಆಶ್ರಯ ಪಡೆದವರಿಗೆ ಉಟೋಪಚಾರ ವ್ಯವಸ್ಥೆ ಕಲ್ಪಿಸುವ ಬಗ್ಗೆ ಜಿಲ್ಲೆಯ ವಿವಿಧ ದೇವಸ್ಥಾನಗಳ, ಸಂಘಸಂಸ್ಥೆಗಳ ಮತ್ತು ಸ್ವಯಂಸೇವಾ ಸಂಸ್ಥೆಗಳ ಪದಾಧಿಕಾರಿ ಗಳೊಂದಿಗೆ ಚರ್ಚಿಸಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯಲ್ಲಿರುವ ಶೆಲ್ಟರ್ ರೂಮ್‌ಗಳ ಕುರಿತು ವಿವರಗಳನ್ನು ನೀಡಿದರು. ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಶಿಬಿರದಲ್ಲಿರುವ ಎಲ್ಲರಿಗೂ ನೆರವು ಸಿಗುವಂತೆ ನೋಡಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಎಂ.ಜೋಷಿ ಅವರು ಮಾತನಾಡಿ, ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಕೂಲಿ, ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದ ವತಿಯಿಂದ ಮಾಡಲಾಗಿರುವ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಈ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ ಎಂದು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News