ಕೊರೋನ ವೈರಸ್ ಹಿನ್ನೆಲೆ: ಜುಮಾ ನಮಾಝ್ ಇಲ್ಲದ 4ನೆ ‘ಶುಕ್ರವಾರ’
ಮಂಗಳೂರು, ಎ.17: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ವಿಧಿಸಲಾದ ಲಾಕ್ಡೌನ್ಗೆ ಪೂರಕವಾಗಿ ಮಸೀದಿಗಳಲ್ಲಿ ಸಾಮೂಹಿಕವಾಗಿ ನಮಾಝ್ ನಿರ್ವಹಿಸದಂತೆ ರಾಜ್ಯ ಸರಕಾರ, ಜಿಲ್ಲಾಡಳಿತ ಮನವಿಗೆ ಸ್ಪಂದಿಸಿ ಖಾಝಿಯ ನಿರ್ದೇಶನದಂತೆ ಎ.17ರ ‘ಶುಕ್ರವಾರ’ ಮಧ್ಯಾಹ್ನವೂ ಜುಮಾ ನಮಾಝ್ ನಿರ್ವಹಿಸಲಾಗದೆ ಮುಸ್ಲಿಮರು ತಮ್ಮ ಮನೆಗಳಲ್ಲೇ ಲುಹರ್ ನಮಾಝ್ ಮಾಡಿದರು.
ಮಾ.27 ಮತ್ತು ಎ.3 ಹಾಗೂ ಎ.10ರ ‘ಶುಕ್ರವಾರ’ವನ್ನು ಜುಮಾ ನಮಾಝ್ ಇಲ್ಲದೆ ಕಳೆದಿದ್ದ ಮುಸ್ಲಿಮರು ಎ.17ರ ನಾಲ್ಕನೇ ಶುಕ್ರವಾರ ಕೂಡ ಜುಮಾ ನಮಾಝ್ ನಿರ್ವಹಿಸದೆ ಸರಕಾರದ ನಿಯಮಾವಳಿಯನ್ನು ಪಾಲಿಸುವುದು ಅನಿವಾರ್ಯವಾಯಿತು.
ದ.ಕ.ಜಿಲ್ಲೆಯ ಮಸೀದಿಗಳಲ್ಲಿ ಶುಕ್ರವಾರ ಜುಮಾ ನಮಾಝ್ ಇರಲಿಲ್ಲ. ಮಸೀದಿಗಳ ಇಮಾಮ್ ಮತ್ತು ಮುಅದ್ಸಿನ್ ಹಾಗೂ ಇತರ ಸಿಬ್ಬಂದಿ ವರ್ಗವು ಮಸೀದಿಯಲ್ಲಿ ಮತ್ತು ಇತರರು ಮನೆಯಲ್ಲಿ ಲುಹರ್ ನಮಾಝ್ ನಿರ್ವಹಿಸಿ ಸಮಾಜದ ಸರ್ವರ ಹಿತ ಕಾಪಾಡುವುದರೊಂದಿಗೆ ಕಾನೂನಿಗೆ ಗೌರವ ನೀಡಿ ಗಮನ ಸೆಳೆದರು.
ಈಗಾಗಲೆ ನಗರದ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಶುಕ್ರವಾರವು ನಗರ ಮತ್ತು ಗ್ರಾಮೀಣ ಎಂಬ ವ್ಯತ್ಯಾಸವಿಲ್ಲದೆ ಸಾಮೂಹಿಕ ನಮಾಝ್ಗೆ ಹೇರಲಾದ ನಿರ್ಬಂಧವನ್ನು ಪಾಲಿಸಿದರು.