‘ವರ್ತನೆಯ ಸಮಸ್ಯೆ’ ಇದೆ ಎಂದ ಅಫ್ರಿದಿಗೆ ಗಂಭೀರ್ ತಿರುಗೇಟು

Update: 2020-04-19 06:30 GMT

ಹೊಸದಿಲ್ಲಿ, ಎ.18: ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಪಾಕ್‌ನ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ವಿರುದ್ಧ ತನ್ನ ವಾಗ್ವಾದವನ್ನು ಮತ್ತೆ ಮುಂದುವರಿಸಿದ್ದಾರೆ. ಅಫ್ರಿದಿ ಓರ್ವ ಸುಳ್ಳುಗಾರ, ದೇಶದ್ರೋಹಿ ಹಾಗೂ ಅವಕಾಶವಾದಿ ಎಂದು ದೂಷಿಸಿದ್ದಾರೆ. 2019ರ ಎಪ್ರಿಲ್‌ನಲ್ಲಿ ಪ್ರಕಟವಾದ ಅಫ್ರಿದಿ ಅವರ ಆತ್ಮಚರಿತ್ರೆಯಲ್ಲಿ ತನ್ನ ಕುರಿತು ಪ್ರಸ್ತಾವವಾದ ಮತ್ತೊಂದು ಕೆಟ್ಟ ಹೇಳಿಕೆಗೆ ಟ್ವಿಟರ್‌ನ ಮೂಲಕ ಗಂಭೀರ್ ತಿರುಗೇಟು ನೀಡಿದ್ದಾರೆ.

ಕ್ರಿಕೆಟ್ ಆಡುತ್ತಿದ್ದ ಸಮಯದಲ್ಲಿ ಮೈದಾನ ದೊಳಗೆ ಈ ಇಬ್ಬರು ಮಾಜಿ ಕ್ರಿಕೆಟಿಗರು ಸಾಕಷ್ಟು ಬಾರಿ ಮಾತಿನ ಚಕಮಕಿಯಲ್ಲಿ ತೊಡಗಿದ್ದರು. ಗಂಭೀರ್ ಕುರಿತು ಅಫ್ರಿದಿ ಮಾಡಿರುವ ಆರೋಪ ಆತ್ಮಚರಿತ್ರೆ ಪುಸ್ತಕ ಬಿಡುಗಡೆಯ ಮೊದಲೇ ಭಾರೀ ಸುದ್ದಿಯಾಗಿತ್ತು.

  

ಅಫ್ರಿದಿ ತನ್ನ ಆತ್ಮಚರಿತ್ರೆಯಲ್ಲಿ, ‘‘ಗೌತಮ್ ಗಂಭೀರ್‌ಗೆ ವರ್ತನೆಯ ಸಮಸ್ಯೆ ಇದೆ. ಅವರಲ್ಲಿ ವ್ಯಕ್ತಿತ್ವವೇ ಇಲ್ಲ. ಕ್ರಿಕೆಟ್ ಎಂಬ ಮಹಾ ಜಗತ್ತಿನಲ್ಲಿ ಗಂಭೀರ್ ಒಂದು ಪಾತ್ರ ಮಾತ್ರ. ತಾನು ಡಾನ್ ಬ್ರಾಡ್ಮನ್ ಹಾಗೂ ಜೇಮ್ಸ್ ಬಾಂಡ್‌ನ ಸಂಗಮ ಎಂಬ ರೀತಿ ಅವರು ವರ್ತಿಸುತ್ತಾರೆ. ಗಂಭೀರ್ ಅವರ ಕ್ರಿಕೆಟ್ ದಾಖಲೆ ಶ್ರೇಷ್ಠಮಟ್ಟದ್ದಲ್ಲ’’ಎಂದು ಉಲ್ಲೇಖಿಸಿದ್ದರು. ಅಫ್ರಿದಿಗೆ ಟ್ವಿಟರ್‌ನಲ್ಲಿ ತಿರುಗೇಟು ನೀಡಿರುವ ಗಂಭೀರ್, ತನ್ನ ವಯಸ್ಸು ಎಷ್ಟೆಂದು ನೆನಪಿಲ್ಲದ ವ್ಯಕ್ತಿಗೆ ನನ್ನ ದಾಖಲೆಯು ಹೇಗೆ ತಾನೆ ನೆನಪಿರಲು ಸಾಧ್ಯ. ಶಾಹಿದ್ ಅಫ್ರಿದಿ ನಿಮಗೆ ಒಂದು ಘಟನೆ ನೆನಪಿಸುವೆ: 2007ರ ಟ್ವೆಂಟಿ-20 ವಿಶ್ವಕಪ್ ಫೈನಲ್‌ನಲ್ಲಿ ಭಾರತ-ಪಾಕ್ ನಡುವಿನ ಪಂದ್ಯದಲ್ಲಿ ನಾನು 54 ಎಸೆತಗ ಳಲ್ಲಿ 75 ರನ್ ಗಳಿಸಿದ್ದರೆ, ನೀವು 1 ಎಸೆತಕ್ಕೆ ಸೊನ್ನೆ ಸುತ್ತಿದ್ದೀರಿ. ಅತ್ಯಂತ ಮುಖ್ಯವಾಗಿ ನಾವು ವಿಶ್ವ ಕಪ್‌ನ್ನು ಗೆದ್ದುಕೊಂಡಿದ್ದೆವು. ಹೌದು, ಸುಳ್ಳುಗಾರರು, ದೇಶದ್ರೋಹಿಗಳು ಹಾಗೂ ಅವಕಾಶವಾದಿಗಳ ಬಳಿನಾನು ಸರಿಯಾಗಿಯೇ ವರ್ತಿಸುವೆ ಎಂದು ಬರೆದಿದ್ದಾರೆ.

ಧೋನಿ ನಾಯಕತ್ವದಲ್ಲಿ ಚೊಚ್ಚಲ ಟಿ-20 ವಿಶ್ವಕಪ್‌ನ್ನು ಎತ್ತಿಹಿಡಿದಿದ್ದ ಫೈನಲ್ ಪಂದ್ಯದಲ್ಲಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರೂ 75 ರನ್ ಸಿಡಿಸಿದ್ದ ಗಂಭೀರ್ ನೆರವಿನಿಂದ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಸ್ಪರ್ಧಾತ್ಮಕ ಸ್ಕೋರ್ ಗಳಿಸಿತ್ತು. ಪಾಕ್ ನಾಯಕ ಮಿಸ್ಬಾವುಲ್ ಹಕ್ ಕೊನೆಯ ಓವರ್ ತನಕ ಹೋರಾಡಿದರೂ ಗೆಲುವು ಮರೀಚಿಕೆ ಯಾಗಿತ್ತು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಬಿಗಿ ಬೌಲಿಂಗ್ ಮಾಡಿದ್ದ ಜೋಗಿಂದರ್ ಶರ್ಮಾ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News