×
Ad

ಉಡುಪಿ: ಭಟ್ಕಳದ ಗರ್ಭಿಣಿಯ ಕೊರೋನ ವೈರಸ್ ವರದಿ ನೆಗೆಟಿವ್

Update: 2020-04-20 19:18 IST
ಸಾಂದರ್ಭಿಕ ಚಿತ್ರ

ಉಡುಪಿ, ಎ.20: ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿನೊಂದಿಗೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತಿದ್ದ ಭಟ್ಕಳದ 26ರ ಹರೆಯದ ಗರ್ಭಿಣಿ ಮಹಿಳೆ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತಿದ್ದು, ಶನಿವಾರ ಪರೀಕ್ಷೆಗಾಗಿ ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾದ ಇವರ ಗಂಟಲು ದ್ರವದ ಮೊದಲ ಸ್ಯಾಂಪಲ್‌ನ ವರದಿ ಇಂದು ನೆಗೆಟಿವ್ ಆಗಿ ಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಅವರ ಎರಡನೇ ಸ್ಯಾಂಪಲ್‌ನ್ನು ಇಂದು ಪಡೆದು ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ. ಇದರ ವರದಿ ನಾಳೆ ಬರುವ ನಿರೀಕ್ಷೆ ಇದೆ. ಅವರ ಎರಡು ಮಾದರಿ ಪರೀಕ್ಷೆಗಳೂ ನೆಗೆಟಿವ್ ಬಂದ ಬಳಿಕ ಅವರನ್ನೂ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ಡಾ. ಸೂಡ ತಿಳಿಸಿದರು.

ಪರೀಕ್ಷೆಗಾಗಿ ಉಡುಪಿ ಜಿಲ್ಲೆಯಿಂದ ಬಾಕಿ ಇದ್ದ ಒಟ್ಟು 95 ಗಂಟಲು ದ್ರವದ ಸ್ಯಾಂಪಲ್‌ಗಳಲ್ಲಿ ಇಂದು 81ರ ವರದಿ ನೆಗೆಟಿವ್ ಆಗಿ ಬಂದಿವೆ. ಹೀಗಾಗಿ ಸೋಮವಾರ ಪರೀಕ್ಷೆಗೆ ಕಳುಹಿಸಿದ 10 ಸ್ಯಾಂಪಲ್‌ಗಳು ಸೇರಿದಂತೆ ಇನ್ನು ಒಟ್ಟು 24ರ ವರದಿ ಬರಬೇಕಾಗಿದೆ ಎಂದವರು ಹೇಳಿದರು.

ಇಂದು ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ 10 ಗಂಟಲು ದ್ರವ ಸ್ಯಾಂಪಲ್‌ಗಳಲ್ಲಿ ಮೂರು ಕೊರೋನ ಶಂಕಿತರ ಸಂಪರ್ಕಕ್ಕೆ ಬಂದವರದ್ದಾದರೆ, ಮೂರು ತೀವ್ರ ಉಸಿರಾಟದ ತೊಂದರೆಯಿಂದ ಬಾಧಿತರಾದವರದ್ದು. ನಾಲ್ಕು ಮಂದಿಯ ಸ್ಯಾಂಪಲ್‌ನ್ನು ಶೀತಜ್ವರದ ಕಾರಣಕ್ಕಾಗಿ ಕಳುಹಿಸಲಾಗಿದೆ ಎಂದು ತಿಳಿಸಿದರು.

ಸೋಮವಾರ ಐವರು ಕೋವಿಡ್-19 ರೋಗಲಕ್ಷಣದೊಂದಿಗೆ ಹೊಸದಾಗಿ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ನಾಲ್ವರು ಪುರುಷರು ಹಾಗೂ ಒಬ್ಬರು ಮಹಿಳೆಯಾಗಿದ್ದಾರೆ. ಈ ಐದು ಮಂದಿಯಲ್ಲಿ ನಾಲ್ವರು ತೀವ್ರ ಉಸಿರಾಟದ ತೊಂದರೆಗಾಗಿ ಬಂದಿದ್ದರೆ, ಒಬ್ಬ ಶೀತಜ್ವರ ಬಾಧೆಗೆ ದಾಖಲಾಗಿದ್ದಾರೆ. ಇಂದು 29 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದು, ಒಟ್ಟಾರೆಯಾಗಿ 246 ಮಂದಿ ಈವರೆಗೆ ಬಿಡುಗಡೆ ಗೊಂಡಿದ್ದಾರೆ. ಈಗ 33 ಮಂದಿ ಐಸೋಲೇಷನ್ ವಾರ್ಡಿನಲ್ಲಿ ನಿಗಾದಲ್ಲಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.

ಜಿಲ್ಲೆಯಿಂದ ಇದುವರೆಗೆ ಒಟ್ಟು 904 ಮಂದಿಯ ಸ್ಯಾಂಪಲ್‌ಗಳನ್ನು ಸೋಂಕಿನ ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 877 ಸ್ಯಾಂಪಲ್ ನೆಗೆಟಿವ್ ಆಗಿದ್ದರೆ, ಮೂವರದ್ದು ಮಾತ್ರ ಪಾಸಿಟಿವ್ ಆಗಿವೆ. ಪಾಸಿಟಿವ್ ಬಂದ ಮೂವರೂ ಈಗಾಗಲೇ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗೆಗೊಂಡಿದ್ದಾರೆ ಎಂದವರು ತಿಳಿಸಿದರು.

ಜಿಲ್ಲೆಯಲ್ಲಿ ಉಸಿರಾಟದ ತೊಂದರೆ, ಹೊರಜಿಲ್ಲೆ, ಹೊರರಾಜ್ಯಗಳಿಂದ ಬಂದವರು ಹಾಗೂ ಕೋವಿಡ್ ಶಂಕಿತರ ಸಂಪರ್ಕಕ್ಕೆ ಬಂದವರು ಸೇರಿ ಇಂದು ಮತ್ತೆ 102 ಮಂದಿ ನೋಂದಣಿಗೊಂಡಿದ್ದಾರೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 2928 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿ ಕೊಂಡಂತಾಗಿದೆ. ಇವರಲ್ಲಿ 1841 (ಇಂದು 16) ಮಂದಿ 28 ದಿನಗಳ ನಿಗಾ ಪೂರೈಸಿದ್ದರೆ, 2207 (45) ಮಂದಿ 14 ದಿನಗಳ ನಿಗಾವನ್ನು ಪೂರ್ಣ ಗೊಳಿಸಿ ದ್ದಾರೆ. ಒಟ್ಟು 649 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 39 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News