6 ದಿನಗಳಲ್ಲಿ ಹೊಸ ಪ್ರಕರಣ ಪತ್ತೆಯಾಗದಿದ್ದರೆ ಉಡುಪಿ ಜಿಲ್ಲೆ ಹಸಿರು ವಲಯಕ್ಕೆ: ಡಿಸಿ ಜಗದೀಶ್
ಉಡುಪಿ, ಎ. 20: ಕಳೆದ 22 ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಯಾವುದೇ ಕೊರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಪ್ರಸ್ತುತ ಕಿತ್ತಲೆ ವಲಯ ದಲ್ಲಿರುವ ಜಿಲ್ಲೆಯು ಮುಂದಿನ 6 ದಿನಗಳಲ್ಲಿ ಹೊಸ ಸೋಂಕಿತರು ಪತ್ತೆಯಾಗದಿದ್ದರೆ ಹಸಿರು ವಲಯಕ್ಕೆ ಸೇರ್ಪಡೆಯಾಗಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯದ 169 ಮಂದಿ ಆಶಾ ಕಾರ್ಯಕರ್ತರಿಗೆ ತಲಾ 2 ಸಾವಿರ ರೂ. ಪ್ರೋತ್ಸಾಹ ಧನವನ್ನು ಉಡುಪಿ ಶಾರದಾ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ಈವರೆಗೆ ಮೂರು ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆ ಯಾಗಿದ್ದು, ಮಾ.29ರಂದು ಕೊನೆಯ ಪ್ರಕರಣ ದಾಖಲಾಗಿದೆ. ಅದರ ನಂತರ ಜನತೆಯ ತಾಳ್ಮೆ, ಅಧಿಕಾರಿಗಳು-ಜನಪ್ರತಿನಿಧಿಗಳ ಸಹಕಾರದಿಂದಾಗಿ ಕಳೆದ 22 ದಿನಗಳಿಂದ ಯಾವುದೇ ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಒಟ್ಟು 28 ದಿನಗಳವರೆಗೆ ಯಾವುದೇ ಪ್ರಕರಣಗಳು ಪತ್ತೆಯಾಗದಿದ್ದರೆ ಹಸಿರು ವಲಯಕ್ಕೆ ನಾವು ಬರುತ್ತೇವೆ. ಇದಕ್ಕಾಗಿ ಕಾಯುತ್ತಿದ್ದು, ಎಲ್ಲರ ಸಹಾರ ಅಗತ್ಯವಾಗಿಬೇಕಾಗಿದೆ ಎಂದರು.
ಕೊರೋನ ವೈರಸ್ ಹರಡುವಿಕೆ ನಿಯಂತ್ರಣಕ್ಕಾಗಿ ಜಿಲ್ಲೆಯ ಎಲ್ಲಾ ಗಡಿ ಗಳನ್ನು ಬಂದ್ ಮಾಡಲಾಗಿದ್ದು, ಹೊರ ಜಿಲ್ಲೆಯಿಂದ ಯಾರನ್ನು ಜಿಲ್ಲೆಗೆ ಸೇರಿಸಿಕೊಳ್ಳುತ್ತಿಲ್ಲ. ಈವರೆಗೆ ಪ್ರಕರಣ ಪತ್ತೆಯಾಗದ ಜಿಲ್ಲೆಯಲ್ಲೂ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿರುವುದರಿಂದ ನಮ್ಮ ಜಿಲ್ಲೆಯಲ್ಲಿ ಕೊರೋನ ನಿಯಂತ್ರಣಕ್ಕೆ ಬಂದಿದೆ ಎಂದು ಮೈ ಮರೆಯುವಂತಿಲ್ಲ. ನಾವೆಲ್ಲ ಜಾಗೃತರಾಗಿ ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕಾಗಿದೆ ಎಂದರು.
ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನದ ಚೆಕ್ನ್ನು ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ ಅವರಿಗೆ ಹಸ್ತಾಂತರಿಸಲಾ ಯಿತು. ಈ ಸಂದರ್ಭ ಜಿಲ್ಲಾ ಅಂಗವಿಕಲರ ಒಕ್ಕೂಟದ ಉಪಾಧ್ಯಕ್ಷ ಜಗದೀಶ್ ಭಟ್ ಮೂಲಕ 100 ಆಹಾರ ಕಿಟ್ಗಳನ್ನು ಅಂಗವಿಕಲರ ಒಕ್ಕೂಟಕ್ಕೆ ಹಾಗೂ ಸ್ಥಳೀಯ ಗ್ರಾಮಸ್ಥರಿಗೆ 200 ಕಿಟ್ಗಳನ್ನು ನೀಡಲಾಯಿತು.
ಉಡುಪಿ ಶಾಸಕ ಕೆ.ರಘುಪತಿ ಭಟ್ ಆಶಾ ಕಾರ್ಯಕರ್ತರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಎಸ್ಪಿ ವಿಷ್ಣುವರ್ಧನ್, ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ.ವಸಂತ ಭಟ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ಪ್ರೊ.ನಾರಾಯಣ ಶೆಣೈ, ದಾನಿಗಳಾದ ನಿವೃತ ಶಿಕ್ಷಕ ಪಿ.ಕೆ.ಸದಾನಂದ ಶರ್ಮಾ ಉಪಸ್ಥಿತರಿದ್ದರು.
ಎಸ್ಪಿ ವತಿಯಿಂದ 4500 ಮಂದಿಗೆ ಸಿಹಿ !
ಶ್ರೀಗಣೇಶೋತ್ಸವ ಸಮಿತಿಯಿಂದ ಪ್ರತಿದಿನ ಬಡವರಿಗೆ ಹಾಗೂ ಕಾರ್ಮಿಕ ರಿಗೆ ಊಟ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಸೋಮವಾರದ ಊಟದಲ್ಲಿ 4500 ಮಂದಿಗೆ ಎಸ್ಪಿ ಎನ್.ವಿಷ್ಣುವರ್ಧನ್ ವತಿಯಿಂದ ಸಿಹಿ ನೀಡಲು ವ್ಯವಸ್ಥೆ ಕಲ್ಪಿಸಲಾಯಿತು.
ಲಾಕ್ಡೌನ್ ಹಿನ್ನೆಲೆಯಲ್ಲಿ ಎ.19ರ ಮಧ್ಯಾಹ್ನದವರೆಗೆ ಒಟ್ಟು 81,300 ಮಂದಿಗೆ ಊಟವನ್ನು ವಿತರಿಸಲಾಗಿದೆ. ಅದೇ ರೀತಿ ಒಟ್ಟು 10.13 ಲಕ್ಷ ರೂ. ಮೌಲ್ಯದ 1087 ಆಹಾರ ಕಿಟ್ (ತಲಾ 1000 ಮೌಲ್ಯದ)ಗಳನ್ನು ಅರ್ಹ ರಿಗೆ ವಿತರಿಸಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ತಿಳಿಸಿದರು.