ಕೊರೋನದಿಂದ ಗುಣಮುಖ : ಕೊರೋನ ವಾರಿಯರ್ಗಳ ಸೇವೆಗೆ ಶ್ಲಾಘನೆ
ಮಂಗಳೂರು : ಕೋವಿಡ್-19 ಸೋಂಕಿನಿಂದ ಗುಣಮುಕ್ತರಾಗಿ ಮನೆ ಸೇರಿರುವ ತೊಕ್ಕೊಟ್ಟಿನ ವ್ಯಕ್ತಿ ಕೊರೋನ ವಾರಿಯರ್ಗಳ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಸಿದ್ದಾರೆ. ಆ ವ್ಯಕ್ತಿಯ ಮಾತನಾಡಿರುವ ವೀಡಿಯೋ ಸಾವಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
‘ಆಸ್ಪತ್ರೆಯಲ್ಲಿ ನನಗೆ ಅತ್ಯುತ್ತಮ ಚಿಕಿತ್ಸೆ ದೊರೆಯಿತು. ವೈದ್ಯರು ತಮ್ಮ ಪ್ರಾಣದ ಹಂಗು ತೊರೆದು ಸೇವೆ ನೀಡಿದ್ದಾರೆ. ವೈದ್ಯರು, ನರ್ಸ್ಗಳು, ಪೊಲೀಸರು ತಮ್ಮ ಪ್ರಾಣವನ್ನೇ ಪಣವಾಗಿಟ್ಟಿದ್ದರು. ನನಗೆ ಬೇಕಾದ ಆರೈಕೆಯನ್ನು ಅತ್ಯಂತ ಪ್ರೀತಿಯಿಂದ ಮಾಡಿದರು. ಇದನ್ನು ನೋಡಿದ ನನ್ನ ಕಣ್ಣು ತುಂಬಿ ಬಂತು’ ಎಂದು ಹೇಳುತ್ತಾ ಅವರು ಗದ್ಗದಿತರಾಗಿದ್ದಾರೆ.
ಕೊರೋನ ಸೋಂಕಿನಿಂದ ಕೋವಿಡ್ ಆಸ್ಪತ್ರೆಯಾದ ವೆನ್ಲಾಕ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೂರು ದಿನಗಳ ಹಿಂದೆಯಷ್ಟೇ ಗುಣಮುಖರಾಗಿ ಬಿಡುಗಡೆಯಾಗಿದ್ದರು. ತೊಕ್ಕೊಟ್ಟು ಪ್ರವೇಶಿಸುತ್ತಿದ್ದಂತೆ ಊರಿನ ಜನತೆ ಚಪ್ಪಾಳೆಯ ಮೂಲಕ ಸ್ವಾಗತಿಸಿದ್ದರು.
ಕೊರೋನ ವಾರಿಯರ್ಗಳ ನೈಜ ಚಿತ್ರಣವನ್ನು, ಅವರ ತ್ಯಾಗಮಯ ಸೇವೆಯನ್ನು ಮುಕ್ತಕಂಠದಿಂದ ಹೊಗಳಿರುವ ತೊಕ್ಕೊಟ್ಟಿನ ಆ ವ್ಯಕ್ತಿ, ‘‘ಪಿಪಿಇ ಧರಿಸಿ ಬೆವರಿಳಿಯುತ್ತಿದ್ದರೂ ವೈದ್ಯರು ಹಾಗೂ ಸಿಬ್ಬಂದಿ ಕೊರೋನ ಸೋಂಕಿತರಿಗೆ ಯಾವುದೇ ಸಮಸ್ಯೆಯಾಗದಂತೆ ಸೇವೆ ಮಾಡುತ್ತಿದ್ದಾರೆ. ನನ್ನ ಜೀವ ಉಳಿಸಿದವರನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ’’ ಎಂದು ಹೇಳಿದ್ದಾರೆ.