ವಾಟ್ಸ್ಆ್ಯಪ್ನಲ್ಲಿ ಕೋಮುಪ್ರಚೋದಕ ಸಂದೇಶ ರವಾನೆ: ದೂರು ದಾಖಲು
ಮಂಗಳೂರು, ಎ.20: ವಾಟ್ಸ್ಆ್ಯಪ್ನಲ್ಲಿ ಒಂದು ಸಮುದಾಯದ ವಿರುದ್ಧ ಕೋಮುಪ್ರಚೋದಕ ಸಂದೇಶ ರವಾನಿಸಿದ ಆರೋಪಿಯ ವಿರುದ್ಧ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಸುರತ್ಕಲ್ನ ರವಿ ಎಂಬಾತನು ಬೆಂಗರೆಯ ಕಾರ್ಪೊರೇಟರ್ ಮುನೀಬ್ ಬೆಂಗರೆಯ ವಾಟ್ಸ್ಆ್ಯಪ್ಗೆ ‘ನಾವು ಇಂದಿನಿಂದ ಮುಸ್ಲಿಮರ ಕಡೆ ಯಾವ ವಸ್ತುಗಳನ್ನು ಖರೀದಿಸುದಿಲ್ಲ, ನೀವು’ ಎಂಬ ಕೋಮು ಪ್ರಚೋದಕ ಬರಹ ಹೊಂದಿರುವ ಚಿತ್ರವನ್ನು ವಾಟ್ಸ್ಆ್ಯಪ್ ಜಾಲತಾಣದ ಮೂಲಕ ಕಳುಹಿಸಿದ್ದ. ಆ ಮೂಲಕ ಆರೋಪಿಯು ಹಿಂದೂ ಮುಸ್ಲಿಮರ ನಡುವೆ ಕೋಮು ಪ್ರಚೋದನೆಯ ಉದ್ದೇಶಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ನಿಟ್ಟಿನಲ್ಲಿ ಕರೆ ಮಾಡಿ ವಿಚಾಸಿದಾಗ ಆರೋಪಿಯು ತನ್ನ ಹೆಸರು ರವಿ ಮತ್ತು ತಾನು ಸುರತ್ಕಲ್ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ಕೋಮುಪ್ರಚೋದಕ ಸಂದೇಶದ ಬಗ್ಗೆ ವಿಚಾರಿಸಿದಾಗ ‘ಸಂದೇಶ ಕಳುಹಿಸಿರುವುದು ಹೌದು, ಏನು ಸಮಸ್ಯೆ? ನಿಮ್ಮನ್ನು (ಮುಸ್ಲಿಮರು) ಗುರಿಪಡಿಸಿಯೇ ಹೇಳಿರುವುದು’ ಎಂಬರ್ಥ ಬರುವ ರೀತಿಯಲ್ಲಿ ತುಳುವಿನಲ್ಲಿ ಹೇಳಿರುತ್ತಾನೆ. ಹಾಗಾಗಿ ಇತನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಮುನೀಬ್ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.