ಖಾಸಗಿ ಬಸ್ ನೌಕರರು ವೇತನವಿಲ್ಲದೆ ಕಂಗಾಲು: ಸಿಐಟಿಯು
Update: 2020-04-20 21:57 IST
ಮಂಗಳೂರು, ಎ.20: ಜಿಲ್ಲೆಯ ಸಾರಿಗೆ ಸಂಪರ್ಕ ಕ್ಷೇತ್ರದಲ್ಲಿ ಖಾಸಗಿ ಬಸ್ಸುಗಳು ಪ್ರಮುಖ ಪಾತ್ರ ವಹಿಸುತ್ತಿದೆ. ಕೊರೋನ ಹಿನ್ನೆಲೆಯಲ್ಲಿ ಲಾಕ್ಡೌನ್ ಆಗಿ ತಿಂಗಳಾಗುತ್ತಾ ಬಂದಿದ್ದು, ಜಿಲ್ಲೆಯ ಸಿಟಿ ಮತ್ತು ಸರ್ವಿಸ್ ಬಸ್ಸುಗಳಲ್ಲಿ ದುಡಿಯುತ್ತಿರುವ ಚಾಲಕರು, ನಿರ್ವಾಹಕರು ಮತ್ತು ಕ್ಲೀನರ್ಗೆ ವೇತನವನ್ನು ಈವರೆಗೂ ಬಸ್ ಮಾಲಕರು ಕೊಟ್ಟಿಲ್ಲ. ಇದರಿಂದ ಬಸ್ ನೌಕರರು ಕಂಗಾಲಾಗಿದ್ದಾರೆ. ಹಾಗಾಗಿ ಎಲ್ಲಾ ಬಸ್ಸು ಮಾಲಕರು ನೌಕರರಿಗೆ ವೇತನವನ್ನು ಪಾವತಿಸಬೇಕು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಬಸ್ ಮಾಲಕರಿಗೆ ನಿರ್ದೇಶನ ನೀಡಬೇಕು ಎಂದು ಮೋಟಾರ್ ಟ್ರಾನ್ಸ್ಪೋರ್ಟ್ ಆ್ಯಂಡ್ ಇಂಜಿನಿಯರಿಂಗ್ ವರ್ಕರ್ಸ್ ಯೂನಿಯನ್ (ಸಿಐಟಿಯು)ನ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಒತ್ತಾಯಿಸಿದ್ದಾರೆ.