ಬಿಎಲ್ಓಗಳ ಮೂಲಕ ಮನೆ ಮನೆ ತಪಾಸಣೆ: ಮಹೇಶ್ವರ ರಾವ್
ಉಡುಪಿ, ಎ.25: ಜಿಲ್ಲೆಯಲ್ಲಿರುವ ಪ್ರತಿ ಮನೆಗೆ ಭೇಟಿ ನೀಡಿ, ಶೀತ ಜ್ವರ ಇರುವವರ ವಿವರಗಳನ್ನು ಬಿಎಲ್ಓಗಳ ಮೂಲಕ ಸಂಗ್ರಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಸಲಹೆ ನೀಡಿದ್ದಾರೆ.
ಶನಿವಾರ ಮಣಿಪಾಲದಲ್ಲಿರುವ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಯಲ್ಲಿ ಕೊರೋನ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ಪ್ರಸ್ತುತ ಕೊರೋನಾ ಪ್ರಕರಣ ಇಲ್ಲವಾದರೂ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಶೀತಜ್ವರ ಇರುವವರ ಕುರಿತು ಮನೆ ಮನೆಗಳ ವ್ಯಾಪಕ ತಪಾಸಣೆ ನಡೆಸುವಂತೆ ಸೂಚಿಸಿದ ಮಹೇಶ್ವರ ರಾವ್, ಈ ಕುರಿತಂತೆ ಜಿಲ್ಲೆಯ ಎಲ್ಲಾ ಬಿಎಲ್ಓಗಳನ್ನು ಬಳಸಿಕೊಳ್ಳು ವಂತೆ ಹಾಗೂ ತಪಾಸಣೆ ನಡೆಸಲು ಅವರಿಗೆ ಅಗತ್ಯವಿರುವ ತರಬೇತಿ ನೀಡುವಂತೆ ತಿಳಿಸಿದರು. ಅಲ್ಲದೇ ಮಾಹಿತಿ ದಾಖಲಿಸಲು ಅಗತ್ಯ ನಮೂನೆಯನ್ನು ಸಿದ್ದಪಡಿಸಿ ನೀಡಿ, ಮುಂದಿನ 3 ದಿನದಲ್ಲಿ ಎಲ್ಲಾ ಬಿಎಲ್ಓಗಳಿಗೆ ತರಬೇತಿ ನೀಡುವ ಕಾರ್ಯಕ್ರವು ಮುಗಿಸುವಂತೆಯೂ ಸೂಚಿಸಿದರು.
ಜಿಲ್ಲೆಯ ಜನತೆ ತಮಗೆ ತೀವ್ರತರ ಜ್ವರ ಮತ್ತು ಶೀತ, ಉಸಿರಾಟದ ತೊಂದರೆ ಯಿದ್ದಲ್ಲಿ ಸ್ವಯಂ ಪ್ರೇರಿತವಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಅಗತ್ಯ ಚಿಕಿತ್ಸೆ ಪಡೆಯಬೇಕು. ಇದರಿಂದ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಸಮಾಜದ ಇತರೆ ವ್ಯಕ್ತಿಗಳ ಆರೋಗ್ಯವನ್ನು ರಕ್ಷಿಸಲು ಸಾಧ್ಯವಾಗಲಿದೆ ಎಂದರು
ಜಿಲ್ಲೆಯಲ್ಲಿ ಕಳ್ಳಬಟ್ಟಿ ತಯಾರಿಕೆ, ಸರಬರಾಜು ಕುರಿತಂತೆ ಹೆಚ್ಚಿನ ನಿಗಾ ಇರಿಸುವಂತೆಯೂ ಮಹೇಶ್ವರ ರಾವ್ ಸೂಚಿಸಿದರು. ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣ ಕಂಡು ಬಂದ ಕೂಡಲೆ, ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ವವರನ್ನು ಅತ್ಯಂತ ಕ್ಷಿಪ್ರವಾಗಿ ಗುರುತಿಸಿ, ಅವರನ್ನು ಕ್ವಾರಂಟೈನ್ ಮಾಡುವುದರ ಮೂಲಕ ರೋಗ ಹರಡುವುದನ್ನು ನಿಯಂತ್ರಿಸಲು ಜಿಲ್ಲಾಡಳಿತ ಕೈಗೊಂಡಕ್ರಮಗಳಿಗೆ ಮಹೇಶ್ವರ ರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಗೆ ಹೊರ ಜಿಲ್ಲೆಯಿಂದ ಪಾಸ್ ಪಡೆದು ಬರುವವರನ್ನು ಹೋಮ್ ಕ್ವಾರಂಟೈನ್ನಲ್ಲಿ ಮತ್ತು ಅನಧಿಕೃತವಾಗಿ ಬರುವವರನ್ನು ಪೊಲೀಸ್ ಕ್ವಾರಂಟೈನ್ ನಲ್ಲಿಡಲಾಗುತ್ತಿದೆ. ಉತ್ತರಕನ್ನಡ ಜಿಲ್ಲೆಯಿಂದ ಮಣಿಪಾಲದಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಯಾವುದೇ ನಿರ್ಬಂದ ಇಲ್ಲ. ಕಳೆದ 28 ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಕೊರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಜಿಲ್ಲೆ ಯಲ್ಲಿ ವಿವಿಧ ಶೆಲ್ಟರ್ ರೂಮ್ಗಳಲ್ಲಿದ್ದ 560 ವಲಸೆ ಕಾರ್ಮಿಕರನ್ನು ಶನಿವಾರ ಅವರ ಸ್ವಂತ ಸ್ಥಳಗಳಿಗೆ ಕಳುಸಲಾಗಿದೆ. ಉಳಿದವರನ್ನು ಸಹ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗಿನ ಕೊರೋನ ಪ್ರಕರಣಳು, ಶಂಕಿತರ ತಪಾಸಣೆ ಮುಂತಾದ ವಿಷಯಗಳ ಕುರಿತು ಸಮಗ್ರ ಮಾಹಿತಿಯನ್ನು ಜಿಲ್ಲಾ ಕೊರೋನ ನಿಯಂತ್ರಣದ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ನೀಡಿದರು.
ಸಭೆಯಲ್ಲಿ ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಎಸ್ಪಿ ವಿಷ್ಣುವರ್ಧನ್, ಕರಾವಳಿ ಕಾವಲು ಪಡೆಯ ಎಸ್ಪಿ ಚೇತನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್ಓ ಡಾ.ಸುಧೀರ್ಚಂದ್ರ ಸೂಡ, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಜಿಲ್ಲೆಯ ಎಲ್ಲಾ ತಹಶೀಲ್ದಾರ್ಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.