ಕೊರೋನ ಪರೀಕ್ಷೆ ತಪ್ಪಿಸಿಕೊಳ್ಳುವವರ ಬಗ್ಗೆ ಮಾಹಿತಿ ನೀಡಿದರೆ ನಗದು: ಬಿಜೆಪಿ ಸಂಸದನ ಘೋಷಣೆ
ಲಕ್ನೊ, ಎ.25: ಕೊರೋನ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದರೂ ಕೊರೋನ ಸೋಂಕು ಪರೀಕ್ಷೆಯನ್ನು ತಪ್ಪಿಸಿಕೊಳ್ಳುತ್ತಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 11,000 ನಗದು ಪುರಸ್ಕಾರ ನೀಡುವುದಾಗಿ ಬಿಜೆಪಿ ಸಂಸದ ರವೀಂದ್ರ ಕುಶ್ವಾಹಾ ಹೇಳಿದ್ದಾರೆ.
ದಿಲ್ಲಿಯಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಥವಾ ವಿದೇಶ ಪ್ರವಾಸ ನಡೆಸಿದ್ದ ಹಲವರು ಇನ್ನೂ ಅಧಿಕಾರಿಗಳ ಎದುರು ಹಾಜರಾಗದೆ ಮತ್ತು ಅಗತ್ಯದ ಪರೀಕ್ಷೆಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಇಂತಹ ವ್ಯಕ್ತಿಗಳು ತಮ್ಮ ಪ್ರಯಾಣದ ಇತಿಹಾಸದ ಮಾಹಿತಿ ನೀಡಿ ಕೊರೋನ ಸೋಂಕು ಪರೀಕ್ಷೆಗೆ ಹಾಜರಾಗಬೇಕು. ಇಂತಹ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಪುರಸ್ಕಾರ ನೀಡಲಾಗುವುದು ಎಂದವರು ಹೇಳಿದ್ದಾರೆ.
ಕಳೆದ ತಿಂಗಳು ದಿಲ್ಲಿಯಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ ಸಮಾವೇಶ ಅತ್ಯಂತ ಪ್ರಮುಖ ಕೊರೋನ ವೈರಸ್ ಹಾಟ್ಸ್ಪಾಟ್ ಆಗಿ ಪರಿಣಮಿಸಿದ್ದು ಇದರಲ್ಲಿ ಪಾಲ್ಗೊಂಡಿದ್ದ ಹಲವರು ದೇಶದ ವಿವಿಧೆಡೆ ಸಂಚರಿಸಿ ಸೋಂಕು ಹೆಚ್ಚಲು ಕಾರಣರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಮಾವೇಶದಲ್ಲಿ ಪಾಲ್ಗೊಂಡವರು ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ ಸೋಂಕು ಪರೀಕ್ಷೆಗೆ ಒಳಗಾಗಬೇಕು ಎಂದು ಸರಕಾರ ಸೂಚಿಸಿತ್ತು. ಆದರೆ ಯಾರೊಬ್ಬರೂ ಪರೀಕ್ಷೆಗೆ ಮುಂದಾಗಿರಲಿಲ್ಲ.