ಲಾಕ್ಡೌನ್ : ಶಾಲೆಯಲ್ಲಿ ಆಶ್ರಯ ಪಡೆದಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ
ಜೈಪುರ: ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಯಾಣ ನಿರ್ಬಂಧ ಇದ್ದ ಕಾರಣ ದವೂಸಾದಿಂದ ಜೈಪುರದಲ್ಲಿರುವ ತಮ್ಮ ಮನೆಗೆ ಹೋಗಲಾಗದೇ ಸಿಕ್ಕಿಹಾಕಿಕೊಂಡ ಮಹಿಳೆಯ ಮೇಲೆ ಆಕೆ ಆಶ್ರಯ ಪಡೆದಿದ್ದ ಶಾಲೆಯಲ್ಲಿ ಮೂವರು ಅತ್ಯಾಚಾರ ಎಸಗಿದ ಘಟನೆ ಮಾಧೋಪುರ ಜಿಲ್ಲೆಯಿಂದ ವರದಿಯಾಗಿದೆ.
ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಲಾಲ್ ಚಂದ್ ಎಂಬ ಮುಖ್ಯಪೇದೆಯನ್ನು ಘಟನೆ ಸಂಬಂಧ ಬಂಧಿಸಲಾಗಿದೆ. ಲಾಕ್ಡೌನ್ ವೇಳೆ ಹೊರಗೆ ಸಿಕ್ಕಿಹಾಕೊಂಡಿದ್ದ ಮಹಿಳೆಯನ್ನು ಸ್ಥಳೀಯ ಅಧಿಕಾರಿಗಳು ಈ ಶಾಲೆಗೆ ಕಳುಹಿಸಿದ್ದರು. ಮಹಿಳೆಯ ವೈದ್ಯಕೀಯ ತಪಾಸಣೆ ವರದಿಗಾಗಿ ಕಾಯಲಾಗುತ್ತಿದೆ.
ಸ್ಥಳೀಯ ಪೊಲೀಸರ ಜತೆಗೆ ತಾಲೂಕು ಮಟ್ಟದ ಅಧಿಕಾರಿಗಳಿಗೂ ಮಹಿಳೆಯ ಪ್ರಕರಣದ ಬಗ್ಗೆ ಮಾಹಿತಿ ಇದ್ದು, ಜಿಲ್ಲಾಧಿಕಾರಿ ಮುಲ್ ಪಹಾಡಿಯಾ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಸವಾಯ್ ಮಾಧೋಪುರ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಮಹಿಳೆ, “2015ರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಜೈಲಿನಲ್ಲಿರುವ ಮಗನನ್ನು ಭೇಟಿ ಮಾಡುವ ಸಲುವಾಗಿ ದವೂಸಾಗೆ ತೆರಳಿದ್ದೆ. ಲಾಕ್ಡೌನ್ ಆರಂಭವಾದಾಗಿನಿಂದ ಅಂದರೆ ಒಂದು ತಿಂಗಳಿಗೂ ಹೆಚ್ಚು ಕಾಲ ಸವಾಯಿ ಮಾಧೋಪುರದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ”ಎಂದು ಹೇಳಿದ್ದಾರೆ.
ಕೊರೋನ ವೈರಸ್ ಸೋಂಕಿನ ಕಾರಣದಿಂದ ಆಕೆಯ ಮಗನನ್ನು ದವೂಸಾ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಕಳೆದ ಒಂದು ತಿಂಗಳಿಂದ ಮಹಿಳೆ ಜಿಲ್ಲೆಯಲ್ಲಿ ಓಡಾಡುತ್ತಿದ್ದರು. ಏಪ್ರಿಲ್ 23ರಂದು ಗ್ರಾಮಕ್ಕೆ ಬಂದಾಗ ಗಸ್ತು ಪೊಲೀಸರು ಮುಖ್ಯಪೇದೆಗೆ ಈ ಮಹಿಳೆ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಎಸ್ಪಿ ಸುಧೀರ್ ಚೌಧರಿ ವಿವರಿಸಿದ್ದಾರೆ.
ಮುಖ್ಯಪೇದೆ, ಇಬ್ಬರು ಸರ್ಕಾರಿ ಶಿಕ್ಷಕರು ಮತ್ತು ಗ್ರಾಮಸ್ಥರು ಸೇರಿ ಸುಮಾರು 40 ಮಂದಿ ಆಕೆಯನ್ನು ಒಂದು ರಾತ್ರಿಯ ಮಟ್ಟಿಗೆ ಶಾಲೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ನಿರ್ಧರಿಸಿದ್ದರು. ಶಾಲಾ ಶಿಕ್ಷಕರು ಮನೆಗೆ ಹೋದ ಬಳಿಕ ಮೂವರು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದರು ಎಂದು ಅವರು ಹೇಳಿದ್ದಾರೆ.