×
Ad

ಕ್ವಾರಂಟೈನ್ ವಾಸಿಯಿಂದ ಆಶಾ ಕಾರ್ಯಕರ್ತೆಗೆ ಜೀವಬೆದರಿಕೆ: ದೂರು

Update: 2020-04-27 21:41 IST

ಉಡುಪಿ, ಎ.27: ಬೆಂಗಳೂರಿನಿಂದ ಎ.2ರಂದು ಊರಿಗೆ ಆಗಮಿಸಿ, ಮದ್ದುಗಡ್ಡೆಯ ಮನೆಯಲ್ಲಿ 28 ದಿನಗಳ ಕ್ವಾರಂಟೈನ್‌ನಲ್ಲಿದ್ದ ಸಂದೀಪ ಮೇಸ್ತ ಯಾನೆ ವಿಕ್ಕಿ ಮೇಸ್ತ, ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಊರಿನಲ್ಲಿ ತಿರುಗುತಿದ್ದುದನ್ನು ಪ್ರಶ್ನಿಸಿದ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆ ಲಕ್ಷ್ಮೀ ಸಿ. ಅವರಿಗೆ ಜೀವಬೆದರಿಕೆ ಒಡ್ಡಿ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂದೀಪ ಮೇಸ್ತ ಕ್ವಾರಂಟೈನ್ ವೇಳೆ ಮನೆಯಲ್ಲಿರದೇ ಊರಿನಲ್ಲಿ ತಿರುಗುತ್ತಿರುವ ಬಗ್ಗೆ ದೂರಿನಂತೆ ಎ.21ರಂದು ಕಾಣಲು ಬಂದಾಗ ಆತ ಮದ್ದುಗುಡ್ಡೆ ಬೋಟ್ ಬಿಲ್ಡಿಂಗ್ ಬಳಿ ಕಾಣಸಿಕ್ಕಿದ್ದ. ಮನೆಯಲ್ಲಿ ಕುಳಿತಿರದೇ ಯಾಕೆ ತಿರುಗಾಡುತ್ತೀಯಾ ಎಂದ ಕೇಳಿದ್ದಕೆ, ನೀನು ಯಾರು ನನಗೆ ಹೇಳಲು. ನಾನು ಎಲ್ಲಿ ಬೇಕಿದ್ದರೂ ತಿರುಗುತ್ತೇನೆ ಎಂದು ಗದರಿಸಿದ್ದ ಎಂದು ಲಕ್ಷ್ಮೀ ದೂರಿನಲ್ಲಿ ತಿಳಿಸಿದ್ದ.

 ಎ.24ರಂದು ಬೆಳಗ್ಗೆ 11:30ಕ್ಕೆ ತಾನು ಹೋದಾಗ ಸಂತೋಷ್ ಮಿಲ್ಲಿನ ಬಳಿ ಕಾಣಸಿಕ್ಕಿದ್ದ. ಸಂಜೆ 6ಗಂಟೆಗೆ ತಾನು ಕ್ಷೇತ್ರ ಕೆಲಸಕ್ಕೆ ಹೋಗಿ ದ್ದಾಗ, ಕುಂದಾಪುರದ ಖಾರ್ವಿಕೇರಿ ನಿವಾಸಿ ಮಹೇಶ್ ಖಾರ್ವಿ ಎಂಬವರೊಂದಿಗೆ ಮೋಟಾರು ಸೈಕಲ್‌ನಲ್ಲಿ ಬಂದ ಸಂದೀಪ್ ಮೇಸ್ತ, ತನಗೆ ಜೀವಬೆದರಿಕೆ ಒಡ್ಡಿ, ಕೈಯಲ್ಲಿದ್ದ ಸ್ಟಿಕ್ಕರ್‌ನ್ನು ಎಳೆದುಕೊಂಡು, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಮೂಲಕ ಆಪಾದಿತ ಕೊರೋನ ಬಗ್ಗೆ ಯಾವುದೇ ಮುಂಜಾಗ್ರತೆ ಹಾಗೂ ಸುರಕ್ಷತಾ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷ ವಹಿಸಿ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿದ್ದಾರೆಂದು ಲಕ್ಷ್ಮೀ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News