ತಾತ್ಕಾಲಿಕ ಶೆಡ್ ನಿರ್ಮಾಣ ಕಾಮಗಾರಿ ಆರಂಭಕ್ಕೆ ಸೂಚನೆ
ಮಂಗಳೂರು, ಎ. 27: ಸೆಂಟ್ರಲ್ ಮಾರುಕಟ್ಟೆಲ್ಲಿ ವ್ಯಾಪಾರ ನಡೆಸುತ್ತಿದ್ದ ತರಕಾರಿ ಹಾಗೂ ಹಣ್ಣುಹಂಪಲು ಚಿಲ್ಲರೆ ವ್ಯಾಪಾರಸ್ಥರಿಗೆ ತಾತ್ಕಾಲಿಕ ಶೆಡ್ಗಳ ನಿರ್ಮಾಣ ನಾಳೆಯಿಂದಲೇ ಆರಂಭಿಸಿ ಒಂದುವಾರದೊಳಗೆ ಪೂರ್ಣಗೊಳಿಸಲು ಶಾಸಕ ವೇದವ್ಯಾಸ ಕಾಮತ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳೂರು ಪಾಲಿಕೆ ಸಭಾಂಗಣದಲ್ಲಿ ಇಂದು ಮೇಯರ್ ದಿವಾಕರ್ ಪಾಂಡೇಶ್ವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.
ತಗಡಿನ ತಾತ್ಕಾಲಿಕ ಶೆಡ್ಗಳ ನಿರ್ಮಾಣ ಕಾರ್ಯ ನಾಳಿನಿಂದಲೇ ಪ್ರಾರಂಭಿಸಿ, ಒಂದು ವಾರದೊಳಗಡೆ ಪೂರ್ಣಗೊಳಿಸಲು ಈ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಹಾಗೂ ನಗರದ ಹೃದಯಭಾಗದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಕಾಯ್ದಿರಿಸಿದ ಜಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಯಲ್ಲಿ ನಿರ್ಮಾಣವಾಗುವ ಕಟ್ಟಡ ಕಾಮಗಾರಿ ಪೂರ್ಣಗೊಂಡ ಬಳಿಕ ಈ ತಾತ್ಕಾಲಿಕ ಶೆಡ್ ನಲ್ಲಿರುವ ವ್ಯಾಪಾರಸ್ಥರನ್ನು ಆ ಕಟ್ಟಡಕ್ಕೆ ಸ್ಥಳಾಂತರಿಸುವ ಕುರಿತು ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿಯಲ್ಲಿ ನಗರದ ಪ್ರಮುಖ ಭಾಗದ 3.60 ಎಕ್ರೆ ಜಾಗದಲ್ಲಿ ಸೆಂಟ್ರಲ್ ಮಾರುಕಟ್ಟೆಯು ಯಾವ ರೀತಿಯಲ್ಲಿ ಪಿಪಿಪಿ ಮಾಡೆಲ್ ನಲ್ಲಿ ಆಗಲಿದೆ, ಅದರಿಂದ ತರಕಾರಿ, ಹಣ್ಣು ಹಂಪಲು ಹಾಗೂ ಮಾರುಕಟ್ಟೆ ವ್ಯಾಪಾರಿಗಳಿಗೆ ಏನಾದರೂ ಸಮಸ್ಯೆಗಳಾಗುತ್ತದೆಯೋ,ಅಥವ ಅಂತಹ ಸನ್ನಿವೇಶ ನಿರ್ಮಾಣವಾದರೆ ಅದನ್ನು ಸರಿಪಡಿಸುವ ಕುರಿತು ಹಾಗೂ ಪಿಪಿಪಿ ಮಾಡೆಲ್ನಲ್ಲಿ ನಿರ್ಮಾಣವಾಗುವ ಕಾರಣ ಕಾಮಗಾರಿಗಳು ನಡೆ ಯುವ ಸಂದರ್ಭದಲ್ಲಿ ಪಾಲಿಕೆಯ ಅಧೀನಕ್ಕೆ ಒಳಪಡುವ ಪ್ರದೇಶವನ್ನು ಗುರುತಿಸಿ ಅದನ್ನು ಜನರಿಗೆ ಯಾವ ರೀತಿಯಾಗಿ ನೀಡಬೇಕೆಂಬ ಬಗ್ಗೆ ಸಮಗ್ರವಾಗಿ ಚಿಂತನೆ ಮಾಡಲಾಯಿತು.
ಕಾಮಗಾರಿ ಪೂರ್ಣಗೊಂಡ ಬಳಿಕ ಕಟ್ಟಡವನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಜನರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ಯೋಜನೆ ರೂಪಿಸುವ ಕುರಿತು ಚರ್ಚೆ ನಡೆಯಿತು ಎಂದು ತಿಳಿಸಿದ್ದಾರೆ.
ಕಾಮಗಾರಿಯ ಪೂರ್ಣ ವಿವರಗಳನ್ನು ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಒದಗಿಸಲಾಗುವುದು. ಹಾಗಾಗಿ ವ್ಯಾಪಾರಿಗಳಿಗೆ ಈ ಕುರಿತು ಗೊಂದಲಗಳಿದ್ದರೆ ಅಥವ ಸಂದೇಹಗಳಿದ್ದರೆ ಶಾಸಕರನ್ನು, ಮೇಯರ್ ಅವರನ್ನು ನೇರವಾಗಿ ಭೇಟಿ ಮಾಡಿ ಮಾಹಿತಿ ಪಡೆಯಬಹುದೆಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಸಭೆಯಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿ ಮುಹಮ್ಮದ್ ನಝೀರ್, ಮನಪಾ ಆಯುಕ್ತರಾದ ಶಾನಾಡಿ ಅಜಿತ್ ಹೆಗ್ಡೆ, ಉಪ ಆಯುಕ್ತ ಡಾ. ಸಂತೋಷ್ ಕುಮಾರ್,ಉಪ ಮಹಾಪೌರರಾದ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪೂರ್ಣಿಮಾ, ಜಗದೀಶ್ ಶೆಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.