×
Ad

ಹಸಿರು ವಲಯದ ಎಲ್ಲಾ ವಿನಾಯಿತಿ ಉಡುಪಿ ಜಿಲ್ಲೆಗೂ ಅನ್ವಯ : ಜಿಲ್ಲಾಧಿಕಾರಿ ಜಿ.ಜಗದೀಶ್

Update: 2020-04-28 19:40 IST

ಉಡುಪಿ, ಎ.28: ಉಡುಪಿ ಜಿಲ್ಲೆಯಲ್ಲಿ ಕಳೆದ 30 ದಿನಗಳಿಂದ ನೋವೆಲ್ ಕೊರೋನ (ಕೋವಿಡ್-19) ಪಾಸಿಟಿವ್ ಪ್ರಕರಣ ದಾಖಲಾಗದ ಹಿನ್ನೆಲೆ ಯಲ್ಲಿ ಜನರ ನಿರೀಕ್ಷೆಯಂತೆ ಕೇಂದ್ರ ಸರಕಾರ ಶೀಘ್ರವೇ ಜಿಲ್ಲೆಯನ್ನು ಹಸಿರು ವಲಯ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಘೋಷಣೆ ಮಾಡುವ ವಿಶ್ವಾಸವನ್ನು ಜಿಲ್ಲಾಧಿಕಾರಿ ಜಿ.ಜಗದೀಶ್ ವ್ಯಕ್ತಪಡಿಸಿದ್ದಾರೆ.

ಒಂದು ತಿಂಗಳಿನಿಂದ ಕೊರೋನಾ ಪಾಸಿಟಿವ್ ದಾಖಲಾಗದ ಹಿನ್ನಲೆಯಲ್ಲಿ ಜಿಲ್ಲೆ ಹಸಿರು ವಲಯದ ವ್ಯಾಪ್ತಿಗೆ ಬರಲಿ ಎಂಬುದು ಎಲ್ಲಾ ಜನರ ಆಸೆ. ಕೇಂದ್ರ ಸರಕಾರ ಮುಂದಿನ ಬಾರಿ ಕೊರೋನಗೆ ಸಂಬಂಧಿಸಿದಂತೆ ಜಿಲ್ಲೆಗಳನ್ನು ಬೇರೆ ಬೇರೆ ವಲಯಗಳಾಗಿ ವಿಂಗಡಿಸುವಾಗ ಉಡುಪಿ ಜಿಲ್ಲೆ ಹಸಿರು ವಲಯ ವ್ಯಾಪ್ತಿಗೆ ಬರುತ್ತದೆ ಎಂಬುದು ನನ್ನ ನಿರೀಕ್ಷೆಯಾಗಿದೆ ಎಂದು ಜಿಲ್ಲಾಧಿಕಾರಿಗಳು ಇಂದು ನೀಡಿದ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಆದರೂ ಜಿಲ್ಲೆ ಅಧಿಕೃತವಾಗಿ ಹಸಿರು ವಲಯಕ್ಕೆ ಬಂದಾಗ ಮಾಡುವ ಎಲ್ಲಾ ಚಟುವಟಿಕೆಗಳನ್ನು ನಾವು ಈಗಾಗಲೇ ಪ್ರಾರಂಭಿಸಿದ್ದೇವೆ. ಗ್ರೀನ್ ಝೋನ್ ಎಂಬುದು ಸರಕಾರದ ಭೂಪಟದಲ್ಲಿ ಹಾಗೂ ಅಧಿಕೃತ ಸರಕಾರಿ ಆದೇಶದಲ್ಲಷ್ಟೇ ಬರಬೇಕಾಗಿದೆ ಎಂದವರು ನುಡಿದರು.

ಜಿಲ್ಲೆಯ ಈಗಾಗಲೇ ಅಗತ್ಯವಿರುವ ಎಲ್ಲಾ ಚಟುವಟಿಕೆಗಳಿಗೂ ಶರತ್ತುಬದ್ಧ, ಕಾನೂನಿನಲ್ಲಿ ಪ್ರಸ್ತಾಪಿಸಿರುವ ಎಲ್ಲಾ ಅನುಮತಿಯನ್ನು ನೀಡಿದ್ದೇವೆ. ಇದರಂತೆ ಹೆಚ್ಚಿನೆಲ್ಲಾ ಅಂಗಡಿಗಳು ಈಗಾಗಲೇ ಪ್ರಾರಂಭಗೊಂಡಿವೆ. ಆದರೆ ಬಂಗಾರದ ಅಂಗಡಿ (ಜ್ಯುವೆಲ್ಲರ್ಸ್‌), ಮಲ್ಟಿಬ್ರಾಂಡ್, ಸಿಂಗಲ್ ಬ್ರಾಂಡ್ ಅಂಗಡಿಗಳನ್ನು ತೆರೆಯಲ್ಲ. ಬ್ಯೂಟಿ ಪಾರ್ಲರ್, ಸೆಲೂನ್, ಸ್ಪಾಗಳ ಪ್ರಾರಂಭಕ್ಕೂ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು. ಇವು ಬಿಟ್ಟರೆ ರೆಸ್ಟೋರೆಂಟ್‌ಗಳನ್ನು ತೆರೆಯಲು ಅವಕಾಶವಿದೆ. ಆದರೆ ಅಲ್ಲಿ ಪಾರ್ಸೆಲ್‌ಗಳನ್ನು ನೀಡಲು ಮಾತ್ರ ಅವಕಾಶವಿದೆ. ಅಲ್ಲೇ ತಿನ್ನಲು ಅವಕಾಶ ವಿಲ್ಲ ಎಂದವರು ಸ್ಪಷ್ಟಪಡಿಸಿದರು.

ಹಸಿರು ವಲಯದಲ್ಲಿ ಗ್ರಾಮೀಣ ಪ್ರದೇಶಗಳ ಪ್ಯಾಕ್ಟರಿ (ಉದ್ಯಮ)ನ ತೆರೆಯಲು ಅವಕಾಶವಿದೆ. ಉಡುಪಿ ಜಿಲ್ಲೆಯಲ್ಲೂ ಇಂದಿನಿಂದ ಇದಕ್ಕೆ ಅವಕಾಶ ನೀಡಲಾಗಿದೆ. ನಿರ್ಮಾಣ ಕಾಮಗಾರಿ, ಮನೆ ಕಟ್ಟುವ ಕೆಲಸ, ಎಲ್ಲಾ ರೀತಿಯ ಕೃಷಿ, ತೋಟಗಾರಿಕೆ, ಮೀನುಗಾರಿಕೆ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಮಾಡಬಹುದು. ಮರಳುಗಾರಿಕೆ, ಗಣಿಗಾರಿಕೆಗೂ ಅವಕಾಶ ನೀಡಲಾಗಿದೆ. ಒಟ್ಟಿನಲ್ಲಿ ನಿರ್ಮಾಣ ಕಾಮಗಾರಿಕೆಗೆ ಸಂಬಂಧಿಸಿದ ಎಲ್ಲವನ್ನೂ ಅವಕಾಶವಿದೆ ಎಂದು ಜಿ.ಜಗದೀಶ್ ತಿಳಿಸಿದರು.

ಜನರ ನಿರೀಕ್ಷೆಯಂತೆ ನಾವು ಎಲ್ಲ ಚಟುವಟಿಕೆಗಳನ್ನು ಪ್ರಾರಂಭಿಸಿದ್ದರೂ, ಇದು ಜನರು ಬೇಕಾದಂತೆ ಓಡಾಡಲು ಒಪ್ಪಿಗೆ ಎಂದು ಯಾರೂ ಭಾವಿಸ ಬಾರದು. ಮುಂದಿನ ಮೇ 3ರವರೆಗೆ ಜಿಲ್ಲೆಯಲ್ಲೂ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಕಾರ್ಖಾನೆಗಳಿಗೆ ದುಡಿಯಲು ತೆರಳುವವರು, ಅಲ್ಲಿ ನೀಡುವ ಗುರುತು ಚೀಟಿಯನ್ನು ಹೊಂದಿದ್ದು, ಪೊಲೀಸರಿಗೆ ತೋರಿಸಬೇಕಾಗುತ್ತದೆ. ಅದು ಬಿಟ್ಟರೆ ಅಂಗಡಿಗಳು ಎಂದಿ ನಂತೆ ಬೆಳಗ್ಗೆ 7 ರಿಂದ ಅಪರಾಹ್ನ 11 ರವರೆಗೆ ಮಾತ್ರ ತೆರೆದಿರುತ್ತದೆ ಎಂದರು.

ವಿನಾಯಿತಿಯ ಸುದ್ದಿ ಕೇಳಿ ಇಂದು ವಾಹನಗಳು ತುಂಬಾ ಓಡಾಡಿದ ಮಾಹಿತಿ ಬಂದಿದೆ. ಅಟೋ ಓಡಾಡುವುದನ್ನು ನಾನೇ ನೋಡಿದ್ದೇನೆ. ಯಾವುದೇ ಕಾರಣಕ್ಕೂ ಸಾರಿಗೆ ಸಂಚಾರಕ್ಕೆ ಅವಕಾಶವಿಲ್ಲ. ಆದುದರಿಂದ ಇನ್ನು ಮುಂದೆ ಆಟೋಗಳು ಓಡಾಡಿದರೆ ಅವುಗಳನ್ನು ಸೀಝ್ ಮಾಡಲು ಪೊಲೀಸರಿಗೆ ತಿಳಿಸಿದ್ದೇನೆ. ಈವರೆಗೆ 750ಕ್ಕೂ ಅಧಿಕ ವಿವಿಧ ರೀತಿಯ ವಾಹನಗಳನ್ನು ಸೀಝ್ ಮಾಡಲಾಗಿದೆ ಎಂದವರು ವಿವರಿಸಿದರು.

ಇದರೊಂದಿಗೆ ಜನರು ಸುರಕ್ಷಿತ ಅಂತರವನ್ನು (ಸೋಷಿಯಲ್ ಡಿಸ್ಟೆನ್ಸ್) ಎಲ್ಲಾ ಕಡೆ ಕಟ್ಟುನಿಟ್ಟಾಗಿ ಪಾಲಿಸಬೇಕು. ಇದನ್ನು ಅನುಕರಿಸದವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗುವುದು. ಮಾಸ್ಕ್, ಸೆನಟೈಸರ್, ಸುರಕ್ಷಿತ ಅಂತರವನ್ನು ಜನರು ಅನುಕರಿಸುವುದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ ಪ್ರಕರಣ ದಾಖಲಾಗುತ್ತದೆ. ಜನತೆ ಇದಕ್ಕೆ ಅವಕಾಶ ನೀಡಬಾರದು ಎಂದವರು ಮನವಿ ಮಾಡಿದರು.

ಇದರೊಂದಿಗೆ ಜನರು ಸುರಕ್ಷಿತ ಅಂತರವನ್ನು (ಸೋಷಿಯಲ್ ಡಿಸ್ಟೆನ್ಸ್) ಎಲ್ಲಾ ಕಡೆ ಕಟ್ಟುನಿಟ್ಟಾಗಿ ಪಾಲಿಸಬೇಕು. ಇದನ್ನು ಅನುಕರಿಸದವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗುವುದು. ಮಾಸ್ಕ್, ಸೆನಟೈಸರ್, ಸುರಕ್ಷಿತ ಅಂತರವನ್ನು ಜನರು ಅನುಕರಿಸುವುದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ ಪ್ರಕರಣ ದಾಖಲಾಗುತ್ತದೆ. ಜನತೆ ಇದಕ್ಕೆ ಅವಕಾಶ ನೀಡಬಾರದು ಎಂದವರು ಮನವಿ ಮಾಡಿದರು. ಇಂದಿನ ಸಂದರ್ಭದಲ್ಲಿ ಆರ್ಥಿಕವಾಗಿ ಸಬಲರಾಗಿ ಕೊರೋನ ವಿರುದ್ಧ ಹೋರಾಡಲು ಸರಕಾರ ಕೊಟ್ಟ ಅವಕಾಶ ಇದಾಗಿದೆ. ಇದನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು. ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಸರಕಾರದೊಂದಿಗೆ ಕೈಜೋಡಿಸಬೇಕು. ಈಗ ನಮಗೆ ಮತ್ತು ಎಸ್ಪಿಯವರಿಗೆ ಉಳಿದಿರುವ ಒಂದೇ ಕೆಲಸ ಎಂದರೆ, ಎಲ್ಲರೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದು ಎಂದರು.

ಈಗ ಅನುಮತಿ ನೀಡಿರುವ ಎಲ್ಲಾ ಕೆಲಸದ ಮೇಲೆ ನಿಗಾ ವಹಿಸಲು ನೋಡೆಲ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದೇವೆ. ಅವರು ಸರಕಾರದ ಎಲ್ಲಾ ಸೂಚನೆಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಲಿದ್ದಾರೆ. ಎಲ್ಲಾ ಕೆಲಸಗಳ ಮೇಲೆ ನಿಗಾ ವಹಿಸಲಿದ್ದಾರೆ. ಆದುದರಿಂದ ಜಿಲ್ಲೆಯ ಎಲ್ಲರೂ ಮೇ 3ರವರೆಗೆ ಇದೇ ರೀತಿ ತಮ್ಮಾಂದಿಗೆ ಸಹಕರಿಸುವಂತೆ ಅವರು ವೀಡಿಯೊ ಸಂದೇಶದಲ್ಲಿ ಮನವಿ ಮಾಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News