ಮುಂಬೈ: ಇಬ್ಬರ ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Update: 2020-04-28 15:39 GMT

ಮುಂಬೈ, ಎ.28: ಲಾಕ್‌ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲೇ ಮುಂಬೈಯ ಗೋವಂಡಿ ಪ್ರದೇಶದ ಶಿವಾಜಿ ನಗರದ ಕೊಳೆಗೇರಿಯಲ್ಲಿ ಸೋಮವಾರ ಸಂಜೆ ಎರಡು ತಂಡಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಶಿವಾಜಿನಗರದ ಬೈಗನ್‌ ವಾಡಿ ಪ್ರದೇಶದ ಶಾಲೆಯ ಬಳಿ ಸೋಮವಾರ ಸಂಜೆ ಈ ಗಲಭೆ ನಡೆದಿದೆ. ಪವಿತ್ರ ರಮಝಾನ್ ತಿಂಗಳಲ್ಲಿ ನೀರನ್ನು ಒದಗಿಸುವ ಅಂಗಡಿಯನ್ನು ಈ ಜನಸಾಂದ್ರತೆಯುಳ್ಳ ಪ್ರದೇಶದಲ್ಲಿ ಸ್ಥಾಪಿಸುವ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಪೈಪೋಟಿಯಿತ್ತು. ಇದು ವಿಕೋಪಕ್ಕೆ ತಿರುಗಿದಾಗ ಒಂದು ಗುಂಪಿನವರು ಕತ್ತಿ ಮತ್ತಿತರ ಮಾರಕ ಆಯುಧಗಳಿಂದ ದಾಳಿ ನಡೆಸಿದ್ದು ಮೂವರು ಗಂಭೀರ ಗಾಯಗೊಂಡರು. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಶಂಶೇರಲಿ ಖಾನ್ ಮತ್ತು ಆತನ ಸ್ನೇಹಿತ ಪ್ರೇಮ್‌ಸಿಂಗ್ ಎಂಬವರು ಚಿಕಿತ್ಸೆ ಫಲಿಸದೆ ಮೃತಪಟ್ಟರು.

ಹಲ್ಲೆ ಮಾಡಿದ ತಂಡದಲ್ಲಿದ್ದ 6 ಜನರನ್ನು ಗುರುತಿಸಲಾಗಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಆರೋಪಿಗಳ ವಿರುದ್ಧ ಲಾಕ್‌ಡೌನ್ ಉಲ್ಲಂಘನೆ, ಅಕ್ರಮವಾಗಿ ಗುಂಪು ಕೂಡಿರುವುದು ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News