ಉಡುಪಿ: ಕಟ್ಟಡ ನಿರ್ಮಾಣಕ್ಕೆ ಪೂರಕ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಲು ನಿರ್ಧಾರ
ಉಡುಪಿ, ಎ. 28: ರಾಜ್ಯ ಸರಕಾರದ ಆದೇಶದಂತೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಬೆಳಿಗ್ಗೆ 7ಗಂಟೆಯಿಂದ ಬೆಳಿಗ್ಗೆ 11 ಗಂಟೆಯವರೆಗೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಸಾಮಾಗ್ರಿಗಳ ಹಾರ್ಡ್ವೇರ್ ಹಾಗೂ ಇತರ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಪೂರಕ ಸಾಮಾಗ್ರಿಗಳ ಅಂಗಡಿಯನ್ನು ತೆರೆಯುವ ನಿರ್ಧರಿಸಲಾಗಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಕೋವಿಡ್ -19ಗೆ ಸಂಬಂಧಿಸಿ ಉಡುಪಿ ಜಿಲ್ಲೆ ಹಸಿರು ವಲಯ ಸೇರ್ಪಡೆ ಯಾಗುವ ಕ್ಷಣದಲ್ಲಿರುವುದರಿಂದ ಮುಂದಿನ ಯೋಜನೆ ಹಾಗೂ ಕೆಲವೊಂದು ನಿರ್ಬಂಧಿತ ಚಟುವಟಿಕೆಗಳ ಸಡಿಲಿಕೆಯ ಕುರಿತು ಶಾಸಕ ಕೆ.ರಘುಪತಿ ಭಟ್ ಎ.27ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿ ಕಾರಿ ಜಿ.ಜಗದೀಶ್ ಜೊತೆ ನಡೆಸಿದ ಚರ್ಚೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪ್ರಮುಖವಾಗಿ ಕಟ್ಟಡ ಕಾರ್ಮಿಕರು ಹಾಗೂ ದಿನಗೂಲಿ ಗಳ ದೈನಂದಿನ ಸಮಸ್ಯೆಯ ಬಗ್ಗೆ ಹಾಗೂ ಅವರ ಆರ್ಥಿಕ ಸಮಸ್ಯೆ ಗಳ ಕುರಿತು ಚರ್ಚಿಸಲಾಯಿತು. ಕಟ್ಟಡ ನಿರ್ಮಾಣವನ್ನು ರಾಜ್ಯ ಸರಕಾರದ ಮಾರ್ಗಸೂಚಿ ಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾಮಗಾರಿಗಳನ್ನು ನಿರ್ವಹಿಸುವಂತೆ ಸೂಚಿಸಲಾಯಿತು.
ಕಟ್ಟಡ ನಿರ್ಮಾಣದ ಕೂಲಿ ಕಾರ್ಮಿಕರು ತಮ್ಮ ದೈನಂದಿನ ಕೆಲಸಕ್ಕೆ ತೆರಳುವಾಗ ಬಿಲ್ಡರ್ಸ್ ವತಿಯಿಂದ ನೀಡಿದ ಅಧಿಕೃತ ಗುರುತಿನ ಚೀಟಿ( ಆಧಾರ್ ಕಾರ್ಡ್ ಅಥವಾ ಇನ್ನಿತರ ಗುರುತಿನ ದಾಖಲೆಗಳು) ತಮ್ಮಲ್ಲಿ ಇರಿಸಿಕೊಳ್ಳುವಂತೆ ಬಿಲ್ಡರ್ಸ್ ಅಸೋಶಿಯೇಶನ್ ಅಧ್ಯಕ್ಷರಿಗೆ ಜಿಲ್ಲಾಧಿ ಕಾರಿ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್, ಬಿಲ್ಡರ್ಸ್ ಅಸೋಸಿಯೇಶನ್ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್, ಕೋಶಾಧಿಕಾರಿ ಸುಧೀರ್ ಶೆಟ್ಟಿ, ಇಂಜಿನಿಯರ್ ಅಸೋಸಿಯೇಶನ್ ಅಧ್ಯಕ್ಷ ಗೋಪಾಲ್ ಭಟ್, ಪ್ರಧಾನ ಕಾರ್ಯದರ್ಶಿ ಅಮಿತ್ ಅರವಿಂದ್ ಉಪಸ್ಥಿತರಿದ್ದರು.