ಲಾಕ್ ಡೌನ್: ಧಕ್ಕೆ ಬಳಿ ಮೀನು ಮಾರಾಟ ಸ್ಥಗಿತಗೊಳಿಸಲು ಮಾರಾಟಗಾರರ ಸಂಘಟನೆ ನಿರ್ಧಾರ
ಮಂಗಳೂರು : ಕೊರೋನ ಸೋಂಕಿನ ಹಿನ್ನೆಲೆಯ ಲಾಕ್ ಡೌನ್ ನಿಂದಾಗಿ ಈ ಹಿಂದೆ ಮತ್ಸೋಧ್ಯಮಕ್ಕೆ ದ.ಕ ಜಿಲ್ಲಾಡಳಿತ ಷರತ್ತು ಬದ್ಧವಾಗಿ ಬಂದರು ಧಕ್ಕೆ ಹೊರಾಂಗಣದಲ್ಲಿ ಅನುಮತಿ ನೀಡಿತ್ತು. ಆದರೆ ಹೊರ ಜಿಲ್ಲೆಯಿಂದ ಬರುವ ಮೀನು ಸಾಗಾಟದ ಲಾರಿಗಳು, ಕಾರ್ಮಿಕರು ಒಮ್ಮೆಲೆ ಸೇರಿ ಜನಸಾಂದ್ರತೆ ಹೆಚ್ಚಾದ ಕಾರಣದಿಂದ ಸಂಘವು ಮಾರಾಟ ಸ್ಥಗಿತ ಗೊಳಿಸಿದೆ.
ಹೊರ ರಾಜ್ಯದ ಮೀನು ವಾಹನವನ್ನು ಜಿಲ್ಲೆಗೆ ಪ್ರವೇಶಿಸುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ಹೆಚ್ಚಿನ ಜನ ಜಮಾವಣೆ ಯಿಂದಾಗಿ ಸೋಂಕು ನಿಯಂತ್ರಣದ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಸಂಘದ ನಿರ್ಣಯದ ಮೇರೆಗೆ ಜಿಲ್ಲಾಡಳಿತ ಮೀನು ಮಾರಾಟ ಸ್ಥಗಿತ ಗೊಳಿಸಿದೆ.
ಬಂದರು ಧಕ್ಕೆಯ ಹೊರಾಂಗಣವಾದ ಕಾರಣ ಖರೀದಿಗೆ ಅಧಿಕ ಜನ ಜಮಾವಣೆ ನಿಯಂತ್ರಿಸಲು ಅಸಾಧ್ಯವಾಗಿದೆ. ಅಲ್ಲಿ ಸೇರಿದ ಜನರ ನಡುವೆ ನಿಗದಿತ ಸುರಕ್ಷತೆಯ ಅಂತರವನ್ನು ಪಾಲಿಸಲು ಸಾಧ್ಯವಾಗದ ಕಾರಣ ಹಸಿ ಮೀನು ಮಾರಾಟಗಾರರು ಮತ್ತು ಕಮಿಷನ್ ಏಜೆಂಟ್ ಸಂಘವು ಕೆಲವು ದಿನಗಳ ಹಿಂದೆಯೇ ವ್ಯಾಪಾರ ನಿಲ್ಲಿಸಿತ್ತು. ಹಸಿ ಮೀನು ಮಾರಾಟ ಸಂಘವು ಈ ಹಿಂದೆ ಅಪೇಕ್ಷಿಸಿದ ರೀತಿಯಲ್ಲಿಯೇ ಜಿಲ್ಲೆಯ ಉಸ್ತುವಾರಿ ಸಚಿವರ ಸಲಹೆ ಮೇರೆಗೆ ಮಾರಾಟಕ್ಕೆ ಅನುವು ಮಾಡಿ ಕೊಟ್ಟಿದ್ದು ಪೊಲೀಸರ ಸಹಕಾರದ ಹೊರತಾಗಿಯೂ ಕೂಡ, ಜನ ಜಮಾವಣೆ ನಿಯಂತ್ರಣ ವಾಗದ ಕಾರಣ, ಹಸಿ ಮೀನು ಮಾರಾಟ ಸಂಘ ಸಭೆ ಸೇರಿ ಮಾರಾಟ ಸ್ಥಗಿತ ಗೊಳಿಸುವುದಾಗಿ ನಿರ್ಣಯಿಸಿದೆ ಮತ್ತು ಜಿಲ್ಲೆಗೆ ಹೊರ ರಾಜ್ಯದ ಮತ್ತು ಜಿಲ್ಲೆಗಳ ಮೀನು ಸಾಗಾಟ ಸಾರಿಗೆಯನ್ನು ಸ್ಥಗಿತಗೊಳಿಸುವಂತೆ ಕೋರಲಾಗಿದೆ.
ಪ್ರಸ್ತುತ, ಮತ್ಸ್ಯ ಮಾರಾಟವನ್ನು ತಾತ್ಕಾಲಿಕವಾಗಿ ಲಾಕ್ ಡೌನ್ ಅವಧಿಯವರೆಗೆ ಸ್ಥಗಿತ ಗೊಳಿಸಲಾಗಿದ್ದು, ಮುಂದೆ ನಿಯಮಾನುಸಾರ ಬಂದರು ಧಕ್ಕೆ ನಗರಪಾಲಿಕೆ ಮಾರುಕಟ್ಟೆಯಲ್ಲಿಯೇ ಸಂಘದ ವತಿಯಿಂದ ಮಾರಾಟ ಚಟುವಟಿಕೆ ಮುಂದುವರಿಸುವುದಾಗಿ ನಿರ್ಣಯಿಸಲಾಗಿದೆ.
ಈ ಹಿಂದೆ ಬಂದರು ಧಕ್ಕೆಯಲ್ಲಿ ಮೀನು ಮಾರಾಟಕ್ಕೆ ಸಂಘದ ವತಿಯಿಂದ ಜಿಲ್ಲಾಡಳಿತಕ್ಕೆ ಅಪೇಕ್ಷಿಸಿದಕ್ಕೆ ಪರ್ಯಾಯ ( ವಿ ಆರ್ ಎಲ್) ಸ್ಥಳವನ್ನು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ನೀಡಿ ಸಹಕರಿಸಿದಕ್ಕೆ ಧನ್ಯವಾದ ಸಲ್ಲಿಸುವುದಾಗಿಸಿ ಎಂ. ಮುಸ್ತಫಾ ತಿಳಿಸಿದ್ದಾರೆ.
ಹಸಿ ಮೀನು ಮಾರಾಟ ಮತ್ತು ಕಮಿಷನ್ ಏಜೆಂಟ್ ರ ಸಂಘದ ಸಭೆಯಲ್ಲಿ ಇತರ ಪದಾಧಿಕಾರಿಗಳಾದ ಕೆ.ಇ.ರಶೀದ್, ಭರತ್ ಭೂಷಣ್, ಕೆ.ಅಶ್ರಫ್ ಮಾಜಿ ಮೇಯರ್, ಪಿ.ಪಿ.ಹಾಜಿ ಇಶಾಕ್ ಕೆ.ಎಂ.ಇಬ್ರಾಹಿಂ, ಜೆ.ಬಿ.ಶಿವ, ಕೆ.ಬಿ.ಎಸ್.ಸಾಲಿ, ಕೆ.ಎ. ಬಾವ, ಕೆ.ಎಂ.ಎ. ಮುಸ್ತಫಾ, ಎಸ್.ಎ. ಅಮೀನ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.