ಉಡುಪಿ: ಇನ್ನೂ 11 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಗೆ
ಉಡುಪಿ : ಇನ್ನೂ 11 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಗೆ ಉಡುಪಿ, ಎ.29: ನೋವೆಲ್ ಕೊರೋನ ವೈರಸ್ (ಕೋವಿಡ್-19)ನ ಗುಣಲಕ್ಷಣಗಳನ್ನು ಹೊಂದಿರುವ ಇನ್ನೂ 11 ಮಂದಿಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಬುಧವಾರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಒಂದು ಸ್ಯಾಂಪಲ್ ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದವರದ್ದಾಗಿದೆ. ಉಳಿದಂತೆ ಐದು ಮಾದರಿ ತೀವ್ರ ಉಸಿರಾಟದ ತೊಂದರೆಯವರದ್ದಾದರೆ, ನಾಲ್ಕು ಶೀತಜ್ವರದಿಂದ ಬಳಲುತ್ತಿರುವವರ ಹಾಗೂ ಒಂದು ಕೊರೋನ ಹಾಟ್ಸ್ಪಾಟ್ನಿಂದ ಬಂದವರ ಸ್ಯಾಂಪಲ್ಗಳನ್ನು ಸಹ ಕೊರೋನ ಸೋಂಕಿನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಒಟ್ಟು ಏಳು ಮಂದಿ ಕೋವಿಡ್-19ರ ವಿವಿಧ ಗುಣಲಕ್ಷಣದೊಂದಿಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಇಂದು ಸೇರ್ಪಡೆಗೊಂಡವರಲ್ಲಿ ನಾಲ್ವರು ಪುರುಷರು ಹಾಗೂ ಮೂವರು ಮಹಿಳೆಯರು. ಇವರಲ್ಲಿ ಐದು ಮಂದಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರೆ, ತಲಾ ಒಬ್ಬರು ಕೊರೋನ ಶಂಕಿತರ ಸಂಪರ್ಕ ಹಾಗೂ ಶೀತ ಜ್ವರದ ಬಾಧೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ಮೂವರು ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದು, 46 ಮಂದಿ ಇನ್ನೂ ಅದೇ ವಾರ್ಡಿನಲ್ಲಿ ವೈದ್ಯರ ನಿಗಾದಲ್ಲಿದ್ದಾರೆ. ಈವರೆಗೆ ಒಟ್ಟಾರೆಯಾಗಿ 330 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಬುಧವಾರ ಯಾರೊಬ್ಬರ ಗಂಟಲು ದ್ರವದ ಪರೀಕ್ಷಾ ವರದಿ ಬಂದಿಲ್ಲ. ಹೀಗಾಗಿ ನಿನ್ನೆಯವರೆಗಿನ 52 ಸ್ಯಾಂಪಲ್ಗಳ ವರದಿ ಸೇರಿದಂತೆ ಒಟ್ಟು 63 ಮಂದಿಯ ವರದಿ ಇನ್ನೂ ಬರಬೇಕಿದೆ. ಜಿಲ್ಲೆಯಿಂದ ಇದುವರೆಗೆ ಒಟ್ಟು 1116 ಮಂದಿಯ ಸ್ಯಾಂಪಲ್ ಗಳನ್ನು ಸೋಂಕಿನ ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 1053ರ ವರದಿ ಬಂದಿದ್ದು, 1050 ನೆಗೆಟಿವ್ ಹಾಗೂ ಮೂರು ಪಾಸಿಟಿವ್ ಆಗಿ ಬಂದಿವೆ. ಪಾಸಿಟಿವ್ ಆದವರೆಲ್ಲರೂ ಚಿಕಿತ್ಸೆಯಿಂದ ಚೇತರಿಸಿ ಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್-19ರ ವಿವಿಧ ಕಾರಣಗಳಿಗಾಗಿ ಇಂದು 30 ಮಂದಿ ಯನ್ನು ಹೊಸದಾಗಿ ನೋಂದಣಿ ಮಾಡಿಕೊಳ್ಳಲಾಗಿದೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 3464 ಮಂದಿ ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 2146 (ಇಂದು 77) ಮಂದಿ 28 ದಿನಗಳ ನಿಗಾವನ್ನೂ, 2891 (71) ಮಂದಿ 14 ದಿನಗಳ ನಿಗಾವನ್ನು ಪೂರ್ಣ ಗೊಳಿಸಿದ್ದಾರೆ. ಒಟ್ಟು 490 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 37 ಮಂದಿ ಆಸ್ಪತ್ರೆ ಕ್ವಾರಂಟೈನ್ನಲ್ಲಿದ್ದಾರೆ ಎಂದು ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ವರದಿ ಬಂದಿಲ್ಲ: ಒಂದು ತಿಂಗಳಿನಿಂದ ಯಾವುದೇ ಹೊಸ ಕೋವಿಡ್-19 ಸೋಂಕಿತರಿಲ್ಲದೇ ಈಗ ಹಸಿರು ವಲಯದಲ್ಲಿರುವ ಉಡುಪಿ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿರುವ ಮಂಡ್ಯ ಜಿಲ್ಲೆ ನಾಗಮಂಗಲದ ಕೊರೋನ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದ ತೆಕ್ಕಟ್ಟೆ ಪೆಟ್ರೋಲ್ ಬಂಕಿನ 12 ಮಂದಿ ಹಾಗೂ ಸಾಸ್ತಾನ ಟೋಲ್ಗೇಟ್ನ ಆರು ಮಂದಿ ಸೇರಿದಂತೆ ಒಟ್ಟು 18 ಮಂದಿಯ ಗಂಟಲು ದ್ರವದ ಮಾದರಿಯನ್ನು ನಿನ್ನೆ ಸಂಗ್ರಹಿಸಿ ಮಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅದರ ಫಲಿತಾಂಶವಿನ್ನೂ ಬಂದಿಲ್ಲ. ನಾಳೆ ಅದು ಕೈಸೇರುವ ನಿರೀಕ್ಷೆ ಇದೆ ಎಂದು ಡಿಎಚ್ಓ ಡಾ.ಸೂಡ ತಿಳಿಸಿದರು.