ಉಡುಪಿ ಜಿಲ್ಲೆಗೆ ಹಸಿರು ವಲಯದ ರಿಯಾಯಿತಿ, ಸಹಜ ಸ್ಥಿತಿಯತ್ತ ಜನಜೀವನ: ವಾಣಿಜ್ಯ ಚಟುವಟಿಕೆಗಳು ಚುರುಕು
ಉಡುಪಿ, ಎ.29: ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ಹಸಿರು ವಲಯದ ನಿರೀಕ್ಷೆ ಯೊಂದಿಗೆ ಇಂದಿನಿಂದ ಲಾಕ್ಡೌನ್ನಲ್ಲಿ ಕೆಲವೊಂದು ವಿನಾಯಿತಿಗಳನ್ನು ನೀಡಿದ ಪರಿಣಾಮ ಜಿಲ್ಲೆಯಾ ದ್ಯಂತ ವಾಣಿಜ್ಯ ಚಟುವಟಿಕೆಗಳು ಚುರುಕು ಗೊಂಡಿವೆ. ಈ ಮೂಲಕ ಜಿಲ್ಲೆಯ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿರು ವುದು ಕಂಡು ಬಂದಿದೆ.
ಇಂದು ಬೆಳಗ್ಗೆಯಿಂದಲೇ ಉಡುಪಿ ನಗರ, ಕಾಪು, ಪಡುಬಿದ್ರೆ, ಕುಂದಾಪುರ, ಬ್ರಹ್ಮಾವರ, ಕಾರ್ಕಳ, ಬೈಂದೂರು ಸೇರಿದಂತೆ ಜಿಲ್ಲೆಯ ಪ್ರಮುಖ ಪೇಟೆಗಳಲ್ಲಿ ಜನ ಹಾಗೂ ವಾಹನ ಸಂದಣಿ ಹೆಚ್ಚಾಗಿದ್ದವು. ಜಿಲ್ಲೆ ಯಲ್ಲಿ ಕೆಲವೊಂದು ನಿರ್ಬಂಧಗಳ ಸಡಿಲಿಕೆ ಯಿಂದ ರಾಷ್ಟ್ರೀಯ ಹೆದ್ದಾರಿ ಸಹಿತ ಜಿಲ್ಲೆಯ ಎಲ್ಲ ರಸ್ತೆಗಳಲ್ಲಿಯೂ ವಾಹನ ಸಂಚಾರ ಹಿಂದಿಗಿಂತ ಹೆಚ್ಚು ಕಂಡು ಬಂತು. ಕಾರು, ಲಾರಿ, ಟೆಂಪೋ, ದ್ವಿಚಕ್ರ ವಾಹನಗಳ ಓಾಟ ಸಾಮಾನ್ಯ ದಿನಗಳಂತೆ ಇದ್ದವು.
ಈವರೆಗೆ ದಿನಸಿ, ತರಕಾರಿ, ಬೇಕರಿ ಅಂಗಡಿಗಳು ಮಾತ್ರ ತೆರೆಯಲು ಅವಕಾಶ ಇದ್ದಿದ್ದರೆ, ಇಂದಿನಿಂದ ಕೆಲವೊಂದು ಸಣ್ಣಪುಟ್ಟ ಬಟ್ಟೆ ಅಂಗಡಿ, ಪಾದರಕ್ಷೆ ಅಂಗಡಿ, ಜ್ಯೂಸ್, ಫ್ಯಾನ್ಸಿ ಅಂಗಡಿಗಳು, ಮೊಬೈಲ್ ಮಾರಾಟ ಮತ್ತು ರಿಪೇರಿ ಶಾಪ್, ಎಲೆಕ್ಟ್ರಿಕ್ ಶಾಪ್, ದುರಸ್ತಿ ಅಂಗಡಿಗಳು, ಕಟ್ಟಡ ಕಾಮಗಾರಿಗೆ ಪೂರಕ ಸಾಮಾಗ್ರಿಗಳ ಹಾರ್ಡ್ವೇರ್, ಪೈಂಟ್, ಸಿಮೆಂಟ್, ಸಿರಮಿಕ್ಸ್ ಅಂಗಡಿಗಳು, ಗ್ಯಾರೇಜ್, ಪಂಚರ್ ಮತ್ತು ಟಯರ್ ಅಂಗಡಿಗಳು, ಝೆರಾಕ್ಸ್ ಶಾಪ್ಗಳು, ಜನರಲ್ ಸ್ಟೋರ್ಸ್ ವ್ಯಾಪಾರವನ್ನು ಆರಂಭಿಸಿದವು.
ಆದರೆ ಈ ಎಲ್ಲ ಅಂಗಡಿಗಳು ಬೆಳಗ್ಗೆ 11ಗಂಟೆಯವರೆಗೆ ಮಾತ್ರ ತೆರೆದಿಟ್ಟಿ ರುವುದರಿಂದ ಹೆಚ್ಚಿನ ವ್ಯಾಪಾರ ವಹಿವಾಟು ನಡೆದಿಲ್ಲ. ಬೆಳಗ್ಗೆ 11ರ ನಂತರ ಈ ಎಲ್ಲ ಅಂಗಡಿಗಳನ್ನು ಬಂದ್ ಮಾಡಲಾಯಿತು. ಆದರೆ ಹವಾನಿಯಂತ್ರಿತ ಬಟ್ಟೆ ಅಂಗಡಿಗಳು, ಖಾಸಗಿ ಕಚೇರಿಗಳು, ಎಲೆಕ್ಟ್ರಾನಿಕ್ಸ್ ಶಾಪ್ಗಳು, ಸೆಲೂನ್, ಬ್ಯೂಟಿಪಾರ್ಲರ್, ಮಾಲ್ಗಳನ್ನು ತೆರೆಯಲು ಅವಕಾಶ ಇರಲಿಲ್ಲ. ಆದು ದರಿಂದ ಇವುಗಳು ಸಂಪೂರ್ಣ ಬಂದ್ ಆಗಿದ್ದವು. ಇಂದು ಬಹುತೇಕ ಹೊಟೇಲ್ಗಳು ತೆರೆದಿದ್ದು, ಅಲ್ಲಿ ಕೇವಲ ಪಾರ್ಸೆಲ್ ವ್ಯವಸ್ಥೆ ಮಾತ್ರ ಇದ್ದವು. ಆಟೋರಿಕ್ಷಾ, ಟ್ಯಾಕಿ್ಸಗಳ ನಿರ್ಬಂಧ ಮುಂದುವರಿದಿತ್ತು.
ಉಡುಪಿ ನಗರದ ಪ್ರಮುಖ ರಸ್ತೆಗಳು ಜನ ಹಾಗೂ ವಾಹನ ದಟ್ಟಣೆಯಿಂದ ಕೂಡಿದ್ದವು. ಕೆಲವು ಕಡೆಗಳಲ್ಲಿ ಸುರಕ್ಷಿತ ಅಂತರವನ್ನು ಗಾಳಿಗೆ ತೂರಲಾಗಿತ್ತು. ಹಲವು ಮಂದಿ ಮಾಸ್ಕ್ ಹಾಕದೆ ತಿರುಗುತ್ತಿರುವುದು ಕೂಡ ಕಂಡುಬಂತು. ಈ ಮಧ್ಯೆ ಎಲ್ಲ ಕಡೆ ಪೊಲೀಸರು ಗಸ್ತು ತಿರುಗುತ್ತಿದ್ದು, ನಗರದ ಕಲ್ಸಂಕದಲ್ಲಿ ವಾಹನ ತಪಾಸಣೆಯನ್ನು ನಸುತ್ತಿದ್ದರು. ಬಸ್ ಸಂಚಾರ ಇಲ್ಲದ ಪರಿಣಾಮ ಸಿಟಿ ಹಾಗೂ ಸರ್ವಿಸ್ ಬಸ್ ನಿಲ್ದಾಣಗಳು ಎಂದಿನಂತೆ ಬೀಕೋ ಎನ್ನುತ್ತಿದ್ದವು.
ಜಿಲ್ಲೆಯಾದ್ಯಂತ ಫ್ಯಾಕ್ಟರಿಗಳು ಕಾರ್ಯಾರಂಭ
ಉಡುಪಿ ಜಿಲ್ಲೆಯ ನಗರ ಪ್ರದೇಶ ಹೊರತು ಪಡಿಸಿ ಗ್ರಾಮೀಣ ಹಾಗೂ ಕೈಗಾರಿಕಾ ವಲಯಗಳಲ್ಲಿರುವ ಫ್ಯಾಕ್ಟರಿಗಳನ್ನು ತೆರೆಯಲು ಅವಕಾಶ ನೀಡಿ ರುವುದರಿಂದ ಇಂದು ಕೆಲವು ಫ್ಯಾಕ್ಟರಿಗಳು ಕಾರ್ಯಾರಂಭ ಮಾಡಿವೆ.
ಜಿಲ್ಲೆಯಲ್ಲಿ ಸುಮಾರು 3500-4000 ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಗಳಿದ್ದು, ಇವುಗಳಲ್ಲಿ ಗೇರು ಬೀಜ ಸೇರಿದಂತೆ ಇತರ ಸಣ್ಣ ಕೈಗಾರಿಕೆಗಳು ಕಾರ್ಯಾರಂಭ ಮಾಡಿರುವ ಬಗ್ಗೆ ತಿಳಿದುಬಂದಿದೆ. ಇವುಗಳಿಗೆ ಸಂಜೆವರೆಗೆ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಕಟ್ಟಡ ಕಾಮಗಾರಿಗಳು ಚುರುಕುಗೊಂಡಿರುವುದರಿಂದ ಮರಳು, ಕಟ್ಟಡ ಸಾಮಾಗ್ರಿಗಳನ್ನು ಸಾಗಿಸುವ ಲಾರಿಗ ಓಡಾಟ ಕೂಡ ಹೆಚ್ಚಾಗಿ ಕಂಡುಬಂದಿದೆ.
ಅಲ್ಲದೇ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಹಸಿರು ನಿಶಾನೆ ದೊರಕಿರುವುದರಿಂದ ಮಳೆಗಾಲ ಕಾಲಿಡುವ ಮುನ್ನ ಕೃಷಿಯ ಪೂರ್ವಭಾವಿ ಸಿದ್ಧತೆಗಳು ನಿಧಾನವಾಗಿ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.
ಕೆಲವೊಂದು ರಿಯಾಯಿತಿ ನೀಡಿದ ಬಳಿಕ ಇಂದು ಬಹುತೇಕ ಅಂಗಡಿಗಳು ಹಾಗೂ ಫ್ಯಾಕ್ಟರಿಗಳು ಜಿಲ್ಲೆಯಾದ್ಯಂತ ಕಾರ್ಯಾರಂಭಗೊಂಡಿವೆ. ಆದರೆ ಎಲ್ಲೂ ಯಾವುದೇ ಸಮಸ್ಯೆಗಳಾಗಿಲ್ಲ. ಬೆಳಗ್ಗೆ 11ಗಂಟೆಯ ನಂತರ ಎಲ್ಲವೂ ಬಂದ್ ಆಗಿವೆ. ಸಡಿಲಿಕೆ ನೀಡಿದರೂ ನಿಯಮ ಉಲ್ಲಂಘಿಸಿದವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಕೆಲವೊಂದು ಕಡೆ ಹೆಚ್ಚಿನ ಕಾರುಗಳು ಓಡಾಟ ನಡೆಸಿರುವುದು ಕಂಡುಬಂದಿವೆ. ಅವುಗಳನ್ನು ನಮ್ಮಲ್ಲಿರುವ ಆಂತರಿಕ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ನಡೆಸಿ, ಅನಗತ್ಯ ತಿರುಗಾಡುತ್ತಿದ್ದರೆ ಕ್ರಮ ತೆಗೆದುಕೊಳ್ಳಲಾಗುವುದು.
-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ.