ಆಟೋ ರಿಕ್ಷಾ ಚಾಲಕರ ನೆರವು ನೀಡುವಂತೆ ಸರ್ಕಾರಕ್ಕೆ ಆಗ್ರಹ
ಭಟ್ಕಳ : ಕೋವಿಡ್-19ರಿಂದಾಗಿ ದೇಶದಾದ್ಯಂತ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಅಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದು ರಾಜ್ಯದಲ್ಲಿ ಅಟೋ ಚಾಲಕರ ನೆರವಿಗೆ ರಾಜ್ಯ ಸರಕಾರ ಬರಬೇಕು ಎಂದು ಸಹಾಯಕ ಆಯುಕ್ತರ ಮೂಲಕ ಮುಖ್ಯ ಮಂತ್ರಿಗಳಿಗೆ ಅಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ಪತ್ರ ಬರೆದು ಆಗ್ರಹಿಸಿದ್ದಾರೆ.
ಮುಖ್ಯ ಮಂತ್ರಿಗಳಿಗೆ ಬರೆದ ಪತ್ರದಲ್ಲಿ ಅಟೋ ಚಾಲಕರು ಕಳೆದ ಒಂದು ತಿಂಗಳಿನಿಂದ ಯಾವುದೇ ದುಡಿಮೆ ಇಲ್ಲದೇ ತೀವ್ರ ತೊಂದರೆಯಲ್ಲಿದ್ದಾರೆ. ಪ್ರತಿಯೋರ್ವರೂ ಕೂಡಾ ದಿನದ ದುಡಿಮೆಯನ್ನೇ ನಂಬಿಕೊಂಡು ಬಂದವರಾಗಿದ್ದು ಲಾಕ್ಡೌನ್ನಿಂದ ಅವರ ಕುಟುಂಬ ನಿರ್ವಹಣೆಯೇ ಸವಾಲಿನ ಪ್ರಶ್ನೆಯಾಗಿದೆ. ಅಟೋ ಚಾಲಕರು ಹೆಚ್ಚಿನವರು ಸಾಲ ಮಾಡಿ ಅಟೋವನ್ನು ಖರೀದಿಸಿದವರಾಗಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಸಾಲ ತೀರಿಸುವುದೂ ಕಷ್ಟಕರವಾಗಲಿದೆ. ಪ್ರತಿ ವರ್ಷ ಅಟೋಗಳಿಂದ 1840ಕೋಟ ರೂ. ಆದಾಯ ಸರಕಾರಕ್ಕೆ ಬರುತ್ತಿದ್ದು ಈ ಬಾರಿ ಸಂಕಷ್ಟದ ಪರಿಸ್ಥಿತಿ ಎದುರಾಗಿದ್ದರಿಂದ ಸರಕಾರ ನಮ್ಮ ನೆರವಿಗೆ ಬರಬೇಕಾಗಿದೆ. ಸರಕಾರ ಅಟೋ ಚಾಲಕರ ನೆರವಿಗೆ ಬರಬೇಕು. ಕನಿಷ್ಟ ತಿಂಗಳಿಗೆ 6 ಸಾವಿರ ರೂಪಾಯಿಗಳ ಸಂಕಷ್ಟ ಪರಿಹಾರ ನಿಧಿ ಲಾಕ್ಡೌನ್ ಮುಗಿಯುವ ತನಕವೂ ಮಂಜೂರಿ ಮಾಡಬೇಕು. ಅಟೋ ಚಾಲಕರನ್ನು ಕಾರ್ಮಿಕರೆಂದು ಪರಿಗಣಿಸಿ ಕಾರ್ಮಿಕ ಇಲಾಖೆಯ ಅಡಿಯಲ್ಲಿ ದೊರೆಯುವ ಸೌಲಭ್ಯವನ್ನು ದೊರಕಿಸಿ ಕೊಡಬೇಕು. ಅಲ್ಲದೇ ಅಟೋ ರಿಕ್ಷಾಗಳ ಇನ್ಸುರೆನ್ಸ್ ಹಾಗೂ ಟ್ಯಾಕ್ಸ ಮನ್ನಾ ಮಾಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಮನವಿಯನ್ನು ಸ್ವೀಕರಿಸಿದ ಸಹಾಯಕ ಆಯುಕ್ತ ಭರತ್ ಎಸ್. ಅವರು ಮುಖ್ಯ ಮಂತ್ರಿಗಳಿಗೆ ಕಳುಹಿಸುವ ಭರವಸೆಯನ್ನು ನೀಡಿದರು.