ಉಡುಪಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪಡಿತರ ವಿತರಣೆ
ಉಡುಪಿ, ಎ.30: ಸಾರ್ವಜನಿಕ ವಿತರಣಾ ಪದ್ದತಿಯಡಿಯಲ್ಲಿ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಎಪ್ರಿಲ್ ಮತ್ತು ಮೇ-2020ರ ಮಾಹೆಗೆ ಬಿಡುಗಡೆಯಾಗಿರುವ ಆಹಾರಧಾನ್ಯವನ್ನು ಮೇ ತಿಂಗಳಲ್ಲಿ ಪಡಿತರ ಚೀಟಿದಾರರಿಗೆ ಈ ಕೆಳಗಿನಂತೆ ವಿತರಿಸಲಾಗುವುದು.
ಅಂತ್ಯೋದಯ ಕಾರ್ಡಿನ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಮತ್ತು ಕಾರ್ಡಿಗೆ ಒಂದು ಕೆಜಿ ತೊಗರಿಬೇಳೆಯನ್ನು ಉಚಿತವಾಗಿ ವಿತರಿಸಲಾಗುವುದು. ಬಿಪಿಎಲ್ ಕಾರ್ಡಿನ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ಮತ್ತು ಕಾರ್ಡಿಗೆ ಒಂದು ಕೆಜಿ ತೊಗರಿಬೇಳೆ ಮತ್ತು ಎಪ್ರಿಲ್ ತಿಂಗಳಲ್ಲಿ ವಿತರಿಸಬೇಕಿದ್ದ ಗೋಧಿಯನ್ನು ಮೇ ತಿಂಗಳಲ್ಲಿ ಪ್ರತಿ ಕಾರ್ಡಿಗೆ 4 ಕೆಜಿ ಗೋಧಿಯನ್ನು ಉಚಿತ ವಾಗಿ ವಿತರಿಸಲಾಗುವುದು.
ಆಹಾರಧಾನ್ಯ ಪಡೆಯಲು ನೋಂದಾಯಿಸದೆ ಇರುವ ಎಪಿಎಲ್ ಏಕ ಸದಸ್ಯ ಪಡಿತರ ಚೀಟಿ ಕಾರ್ಡಿಗೆ 5 ಕೆಜಿ ಅಕ್ಕಿ ಮತ್ತು ಎರಡು ಮತ್ತು ಹೆಚ್ಚಿನ ಸದಸ್ಯರಿರುವ ಕಾರ್ಡುಗಳಿಗೆ 10 ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ 15ರೂ.ನಂತೆ ವಿತರಿಸಲಾಗುವುದು. ಹೊಸದಾಗಿ ಅರ್ಜಿ ಸಲ್ಲಿಸಿರುವ ಬಿಪಿಎಲ್ ಫಲಾನುಭವಿಗಳಿಗೆ ಪ್ರತಿ ಅರ್ಜಿಗೆ 10 ಕೆಜಿ ಅಕ್ಕಿಯ ್ನು ಉಚಿತವಾಗಿ ವಿತರಿಸಲಾಗುವುದು.
ಅಂತರ ರಾಜ್ಯ/ಅಂತರ-ಜಿಲ್ಲೆ ಪಡಿತರ ಚೀಟಿದಾರರು ಪೋರ್ಟಿಬಿಲಿಟಿ ಯಲ್ಲಿ ಆಹಾರಧಾನ್ಯ ಪಡೆಯಲು ಅವಕಾಶವಿದ್ದು ಜಿಲ್ಲೆಯ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಬಹುದಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ಪಡಿತರ ಚೀಟಿದಾರರ ಆಧಾರ್ ದೃಢೀಕೃತ ಬೆರಳಚ್ಚು (ಆಧಾರ್ ಬಯೋಮೆಟ್ರಿಕ್)/ಆಧಾರ್ ಓಟಿಪಿ/ಮೊಬೈಲ್ ಓಟಿಪಿ ದೃಢೀಕರಣದ ಮೂಲಕವೇ ಪಡಿತರ ವಿತರಿಸಲಾಗುವುದು.
ತೊಗರಿಬೇಳೆ ಜಿಲ್ಲೆಗೆ ಪ್ರಸ್ತುತ ಸರಬರಾಜು ಆಗುತ್ತಿರುವುದರಿಂದ ಪಡಿತರ ಚೀಟಿದಾರರಿಗೆ ಎಲ್ಲಾ ಆಹಾರಧಾನ್ಯವನ್ನು ಏಕಕಾಲದಲ್ಲಿ ವಿತರಿಸಬೇಕಾಗಿರು ವುದರಿಂದ ತೊಗರಿಬೇಳೆ ಪೂರ್ಣ ಪ್ರಮಾಣದಲ್ಲಿ ಸರಬರಾಜು ಆದ ಕೂಡಲೇ ಮೇ ಮೊದಲ ವಾರದ ಕೊನೆಯಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಏಕಕಾಲದಲ್ಲಿ ಆಹಾರಧಾನ್ಯ ವಿತರಿಸಲಾಗುವುದು.
ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರು ಪಡಿತರ ಪಡೆಯುವಾಗ ಸುರಕ್ಷಿತ ಅಂತರ ಕಾಯ್ದುಕೊಂಡು ಮಾಸ್ಕ್ಗಳನ್ನು ಹಾಕಿಕೊಂಡು ಪಡಿತರ ಪಡೆಯುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.