ಸರಳವಾಗಿ ನಡೆದ ವಿನ್ನಿಫ್ರೆಡ್ ಫೆರ್ನಾಂಡೀಸ್ ಅಂತ್ಯಕ್ರಿಯೆ
ಕುಂದಾಪುರ, ಎ.30: ಮಂಗಳವಾರ ನಿಧನರಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಮಾಜಿ ಶಾಸಕಿ ವಿನ್ನಿಫ್ರೆಡ್ ಫೆರ್ನಾಂಡಿಸ್ (91) ಅವರ ಮೃತ ದೇಹದ ಅಂತ್ಯವಿಧಿಗಳನ್ನು ಗುರುವಾರ ಇಲ್ಲಿನ ರೋಮನ್ ಕ್ರೈಸ್ತ ಸಮುದಾಯದ ಹೋಲಿ ರೋಜರಿ ಇಗರ್ಜಿಯಲ್ಲಿ ಅತ್ಯಂತ ಸರಳ ವಿಧಿಗಳ ಮೂಲಕ ನೆರವೇರಿಸಲಾಯಿತು.
ಬೆಳಗ್ಗೆ 11 ಗಂಟೆಯ ವೇಳೆಯಲ್ಲಿ ಮನೆಯಿಂದ ಅಲಂಕೃತ ವಾಹನದಲ್ಲಿ ಪಾರ್ಥಿವ ಶರೀರವನ್ನು ರೋಜರಿ ಇಗರ್ಜಿಗೆ ತರಲಾಗಿತ್ತು. ಕುಂದಾಪುರ ವಲಯ ಧರ್ಮಗುರುಗಳಾದ ಸ್ಟ್ಯಾನಿ ತಾವ್ರೊ ಅವರ ಮಾರ್ಗದರ್ಶನದಲ್ಲಿ ನಡೆದ ಪ್ರಾರ್ಥನಾ ಹಾಗೂ ಪೂಜಾ ವಿಧಿಗಳಲ್ಲಿ ಧರ್ಮಗುರುಗಳಾದ ಆಥರ್ರ್ ಪಿರೇರಾ ಪ್ರಾರ್ಥನಾ ವಿಧಿ ನೆರವೇರಿಸಿದರು. ಸಹಾಯಕ ಧರ್ಮಗುರುಗಳಾದ ವಿಜಯ್ ಡಿಸೋಜಾ ಹಾಗೂ ಪ್ರವೀಣ್ ಮಾರ್ಟಿಸ್ ಹಾಗೂ ಇಗರ್ಜಿಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಲೂಯಿಸ್ ಜೆ ಫೆರ್ನಾಂಡಿಸ್ ಇದ್ದರು.
ಇಗರ್ಜಿ ಒಳಭಾಗದಲ್ಲಿ ಪಾರ್ಥಿವ ಶರೀರವನ್ನು ಇರಿಸಿ ಸರಳ ರೀತಿಯಲ್ಲಿ ಪ್ರಾರ್ಥನಾ ವಿಧಿಯನ್ನು ಮುಗಿಸಿ ಹೊರ ಬಂದ ಬಳಿಕ, ಪೊಲೀಸ್ ಇಲಾಖೆಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಿಂದ ಗೌರವ ರಕ್ಷೆಯನ್ನು ನೀಡಲಾಯಿತು. ಈ ವೇಳೆ ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಮ ಶಂಕರ್, ಸರ್ಕಲ್ ಇನ್ಸ್ಪೆಕ್ಟರ್ ಗೋಪಿಕೃಷ್ಣ, ಉಪನಿರೀಕ್ಷಕ ಹರೀಶ್ ಆರ್ ನಾಯ್ಕೆ ಹಾಗೂ ರಾಜಕುಮಾರ್ ಉಪಸ್ಥಿತರಿದ್ದರು.
ಕೊರೋನಾ ನಿರ್ಬಂಧ ಇರುವ ಕಾರಣದಿಂದಾಗಿ ಅಂತಿಮ ವಿಧಿಗಳಲ್ಲಿ ಪಾಲ್ಗೊಳ್ಳಲು ಕಡಿಮೆ ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ಇಗರ್ಜಿಯ ಪರಿಸರದ ನಿವಾಸಿಗಳು ದೂರದಿಂದಲೇ ಸರಕಾರದ ಗೌರವ ರಕ್ಷೆ ಹಾಗೂ ಇತರ ವಿಧಿಗಳನ್ನು ವೀಕ್ಷಿಸಿದರು. ಗೌರವರಕ್ಷೆ ನೀಡಿದ ಡಿಆರ್ ಪೊಲೀಸರು ತಮ್ಮ ಸಮವಸ್ತ್ರದ ಮೇಲೆ ಕೊರೋನ ವೈರಸ್ ರಕ್ಷಣಾ ಕವಚವನ್ನು ಧರಿಸಿದ್ದರು.