ದ.ಕ.ದಲ್ಲಿ ಕೊರೋನ ಸೋಂಕಿನ ಮೂಲ ಹುಡುಕಲು ವಿಶೇಷ ತನಿಖಾಧಿಕಾರಿಯ ನೇಮಕಕ್ಕೆ ಕಾಂಗ್ರೆಸ್ ಆಗ್ರಹ
ಮಂಗಳೂರು, ಮೇ 1: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿನ ನೈಜ ಮೂಲ ಹುಡುಕಲು ವಿಶೇಷ ತನಿಖಾಧಿಕಾರಿಯನ್ನು ನೇಮಕಗೊಳಿಸುವಂತೆ ಕೆಪಿಸಿಸಿ ವಕ್ತಾರ ಪಿವಿ ಮೋಹನ್ ಆಗ್ರಹಿಸಿದ್ದಾರೆ.
ಕೊರೋನ ಸೋಂಕಿಗೆ ದ.ಕ.ಜಿಲ್ಲೆಯಲ್ಲಿ ಈವರೆಗೆ ಮೂವರು ಬಲಿಯಾಗಿದ್ದಾರೆ. ಶಕ್ತಿನಗರ ಮತ್ತು ಬೋಳೂರು ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ. ಬಫರ್ ಝೋನ್ ಎಂದು ಘೋಷಿಸಲ್ಪಟ್ಟ 5 ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಸುಮಾರು 80,000 ಬಡ ಜನರು ವಾಸಿಸುತ್ತಿ ದ್ದಾರೆ. ಇದರಿಂದ ಜನರು ತೀವ್ರ ಆತಂಕಿತರಾಗಿದ್ದಾರೆ. ವಿಶೇಷವಾಗಿ ಮಂಗಳೂರು ಜನತೆಯ ಸ್ಥಿತಿಯೂ ಅಪಾಯದಲ್ಲಿದೆ. ಎ.19ರ ನಂತರ ಜಿಲ್ಲೆಯಲ್ಲಿ ಸೋಂಕು ದೃಢಪಟ್ಟ ಮೇಲೆ ಪತ್ತೆಯಾದ 2 ಪ್ರಕರಣಗಳು ಕೂಡಾ ಪಡೀಲ್ನಲ್ಲಿರುವ ಖಾಸಗಿ ಆಸ್ಪತ್ರೆಯ ಸಂಪರ್ಕದಿಂದ ಬಂದಿದೆ. ಮೇಲ್ನೋಟಕ್ಕೆ ಈ ಸೋಂಕಿಗೆ ಮತ್ತು ಕೊರೋನ ಬಲಿಗೆ ಮೂಲ ಬಂಟ್ವಾಳದ ಕಸಬಾ ಗ್ರಾಮದ ಮಹಿಳೆಯ ಕುಟುಂಬವೇ ಕಾರಣವೆಂದು ಹೇಳಲಾಗುತ್ತದೆ. ಈ ಮಹಿಳೆಯ ಮಗ ದುಬೈನಿಂದ ಬಂದಾಗ ಸೋಂಕು ತಂದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿರುತ್ತಾರೆ. ಆದರೆ ಅದರ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಈ ಅಂತೆಕಂತೆಗಳನ್ನೇ ಅಧಿಕಾರಿಗಳು ಹೇಳಿಕೊಂಡು ಬಂದಿರುತ್ತಾರೆ. ಗುಣಮುಖರಾಗಿ ಬಿಡುಗಡೆ ಹೊಂದಿದ ರೋಗಿಗಳನ್ನು ಸರಿಯಾಗಿ ಸಂಪರ್ಕಿಸಿಲ್ಲ ಮತ್ತು ಅವರ ದಾಖಲಾತಿ ಗಳನ್ನು ಕೇಳುವ ಗೋಜಿಗೂ ಹೋಗಿಲ್ಲ. ಪ್ರಾರಂಭದಲ್ಲಿ ಸ್ವಲ್ಪ ಮಟ್ಟಿನ ತನಿಖೆ ಬಿಟ್ಟರೆ ಬೇರಾವುದೇ ತನಿಖೆ ನಡೆದಿಲ್ಲ. ರಾಜಕೀಯ ಒತ್ತಡ ಮತ್ತು ರಾಜಕೀಯ ಹಸ್ತಕ್ಷೇಪದಿಂದಾಗಿ ಇಂತಹ ಗಂಭೀರ ವಿಷಯದಲ್ಲಿ ಜಿಲ್ಲಾಡಳಿತ ಕೈಚೆಲ್ಲಿ ಕೂತಂತಿದೆ. ಕಳೆದ 25 ದಿನಗಳಿಂದ ಜಿಲ್ಲಾಡಳಿತವು ಸೋಂಕಿನ ನೈಜ ಮೂಲವನ್ನು ಅರಿಯಲು ಸಂಪೂರ್ಣ ವಿಫಲಗೊಂಡಿದೆ ಎಂದು ಪಿವಿ ಮೋಹನ್ ಆರೋಪಿಸಿದ್ದಾರೆ.
ನಗರದ ಪಡೀಲ್ನ ಖಾಸಗಿ ಆಸ್ಪತ್ರೆಯು ಜಿಲ್ಲೆಯ ಕೊರೋನ ಮೂಲ ಕೇಂದ್ರವಾಗಿ ಹೊರ ಹೊಮ್ಮುತ್ತಿದೆ. ಮೈಸೂರಿನ ನಂಜನಗೂಡಿನಲ್ಲಿ ಒಬ್ಬ ವ್ಯಕ್ತಿ ಯಿಂದ ಸುಮಾರು 70 ಪ್ರಕರಣಗಳು ದಾಖಲಾಗಿವೆ. ಮಂಗಳೂರು ದ.ಕ. ಜಿಲ್ಲೆಯ ಮತ್ತೊಂದು ನಂಜನಗೂಡಾಗಬಾರದು. ಸೋಂಕು ವ್ಯಾಪಕವಾಗು ತ್ತಿದ್ದರೂ ಮೂಲ ನಿಗೂಢವಾಗಿಯೇ ಇದೆ. ಸರಕಾರವು ಐಪಿಎಸ್ ಅಧಿಕಾರಿಯಿಂದ ಈ ಬಗ್ಗೆ ತನಿಖೆ ಮಾಡಿಸಬೇಕು ಎಂದು ಮೋಹನ್ ಒತ್ತಾಯಿಸಿದ್ದಾರೆ.
ಹಾಗೆಯೇ ಕೋವಿಡ್ ಆಸ್ಪತ್ರೆಯ ಮೇಲ್ವಿಚಾರಣೆಗೆ ಕೆಎಎಸ್ ಶ್ರೇಣಿಯ ಅಧಿಕಾರಿಯನ್ನು ನೇಮಿಸಬೇಕು. ಪ್ರಸ್ತುತ ಕೋವಿಡ್ ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಶಿಷ್ಟಾಚಾರ ಕೂಡಾ ಕಾಣುತ್ತಿಲ್ಲ. ಮಾನವ ಹಕ್ಕುಗಳ ಉಲ್ಲಂಘಣೆಯಾಗುತ್ತಿದೆ. ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗುವ ಲಕ್ಷಣ ಕಂಡುಬಂದಿದ್ದು ಸರಕಾರವು ಈ ಬಗ್ಗೆ ಕೂಡಲೇ ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.