×
Ad

ನಾಗಮಂಗಲ ಸೋಂಕಿತನ ಸಂಪರ್ಕಕ್ಕೆ ಬಂದ ಉಡುಪಿ ಜಿಲ್ಲೆಯ 18 ಮಂದಿಯ ವರದಿ ನೆಗೆಟಿವ್

Update: 2020-05-01 19:38 IST

ಉಡುಪಿ, ಮೇ 1: ಮೂರು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕಿಗೆ ಪಾಸಿಟಿವ್ ಬಂದ ವ್ಯಕ್ತಿಯೊಂದಿಗೆ ಉಡುಪಿ ಜಿಲ್ಲೆಯಲ್ಲಿ ಸಂಪರ್ಕಕ್ಕೆ ಬಂದ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಹಾಗೂ ಸಾಸ್ತಾನ ಟೋಲ್‌ಗೇಟ್‌ನ ಒಟ್ಟು 18 ಮಂದಿ ಸಿಬ್ಬಂದಿಗಳ ಗಂಟಲು ದ್ರವದ ಮಾದರಿ ನೆಗೆಟಿವ್ ಆಗಿ ಬಂದಿದೆ. ಆದರೆ ಇವರೆಲ್ಲರ ಆಸ್ಪತ್ರೆ ಕ್ವಾರಂಟೈನ್ 14 ದಿನಗಳವರೆಗೆ ಮುಂದುವರಿಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನೋವೆಲ್ ಕೊರೋನ ವೈರಸ್ ಸೋಂಕಿನ ಪರೀಕ್ಷೆಗಾಗಿ ಬಾಕಿ ಉಳಿದಿದ್ದ ಒಟ್ಟು 76 ಸ್ಯಾಂಪಲ್‌ಗಳಲ್ಲಿ ಶುಕ್ರವಾರ 47 ಮಾದರಿಗಳ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಫಲಿತಾಂಶವನ್ನು ನೀಡಿವೆ ಎಂದು ಅವರು ತಿಳಿಸಿದರು.

ಇದರಿಂದ ಇನ್ನು ಬಾಕಿ ಇರುವ 29 ಮಾದರಿಗಳೊಂದಿಗೆ ಇಂದು ಕಳುಹಿ ಸಲಾದ 18 ಮಾದರಿಗಳು ಸೇರಿ ಒಟ್ಟು 47 ಸ್ಯಾಂಪಲ್‌ಗಳ ವರದಿ ಬರಬೇಕಾಗಿದೆ ಎಂದವರು ಹೇಳಿದರು. ಶುಕ್ರವಾರ ಕೊರೋನ ಸೋಂಕಿನ ಗುಣಲಕ್ಷಣಗಳನ್ನು ಹೊಂದಿರುವ ಇನ್ನೂ 18 ಮಂದಿಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಎರಡು ಕೋವಿಡ್ ಶಂಕಿತ ರದ್ದಾದರೆ, ನಾಲ್ಕು ಮಾದರಿಗಳು ತೀವ್ರ ಉಸಿರಾಟದ ತೊಂದರೆಯವರದು. 10 ಮಂದಿ ಶೀತಜ್ವರದಿಂದ ಬಳಲುತ್ತಿರುವವರ ಹಾಗೂ ಎರಡು ಕೊರೋನ ಹಾಟ್‌ಸ್ಪಾಟ್‌ನಿಂದ ಬಂದವರ ಸ್ಯಾಂಪಲ್‌ಗಳನ್ನು ಸಹ ಕೊರೋನ ಸೋಂಕಿನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಾ.ಸೂಡ ತಿಳಿಸಿದ್ದಾರೆ.

ಇಂದು ಒಟ್ಟು 3 ಮಂದಿ ಕೋವಿಡ್-19ರ ವಿವಿಧ ಗುಣಲಕ್ಷಣದೊಂದಿಗೆ ಐಸೋಲೇಷನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಹೀಗೆ ಸೇರ್ಪಡೆ ಗೊಂಡವರಲ್ಲಿ ಓರ್ವ ಪುರುಷ ಹಾಗೂ ಇಬ್ಬರು ಮಹಿಳೆಯರು. ಇವರಲ್ಲಿ ಒಬ್ಬನಲ್ಲಿ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರೆ, ಇಬ್ಬರು ಶೀತಜ್ವರದ ಬಾಧೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ 6 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದು, 48 ಮಂದಿ ಇನ್ನೂ ಅದೇ ವಾರ್ಡಿನಲ್ಲಿ ವೈದ್ಯರ ನಿಗಾದಲ್ಲಿದ್ದಾರೆ. ಈವರೆಗೆ ಒಟ್ಟಾರೆಯಾಗಿ 346 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

ಶುಕ್ರವಾರದವರೆಗೆ ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 1163 ಮಂದಿಯ ಸ್ಯಾಂಪಲ್‌ಗಳಲ್ಲಿ 1116ರ ವರದಿ ಬಂದಿದ್ದು, 1113 ನೆಗೆಟಿವ್ ಹಾಗೂ ಮೂರು ಪಾಸಿಟಿವ್ ಆಗಿ ಬಂದಿವೆ. ಜಿಲ್ಲೆಯಲ್ಲಿ ಕೋವಿಡ್-19ರ ವಿವಿಧ ಕಾರಣಗಳಿಗಾಗಿ ಇಂದು 70 ಮಂದಿಯನ್ನು ಹೊಸದಾಗಿ ನೋಂದಣಿ ಮಾಡಿ ಕೊಳ್ಳಲಾಗಿದೆ. ಈ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 3606 ಮಂದಿಯನ್ನು ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 2248 (ಇಂದು 36) ಮಂದಿ 28 ದಿನಗಳ ನಿಗಾವನ್ನೂ, 3032 (71) ಮಂದಿ 14 ದಿನಳ ನಿಗಾವನ್ನು ಪೂರ್ಣ ಗೊಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 489 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 37 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ. ಸುಧೀರ್‌ ಚಂದ್ರ ಸೂಡ ವಿವರಿಸಿದರು. ಜಿಲ್ಲೆಯಲ್ಲಿ ಒಟ್ಟು 489 ಮಂದಿ ಇನ್ನೂ ಹೋಮ್ ಕ್ವಾರಂಟೈನ್ ಹಾಗೂ 37 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿ ದ್ದಾರೆ ಎಂದು ಡಾ. ಸುಧೀರ್‌ಚಂದ್ರ ಸೂಡ ವಿವರಿಸಿದರು.

ಮಗು, ಗರ್ಭಿಣಿ ನೆಗೆಟಿವ್: ಗುರುವಾರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟ ಗಂಗೊಳ್ಳಿಯ 1.9 ವರ್ಷ ಪ್ರಾಯದ ಮಗು ಹಾಗೂ ಬ್ರಹ್ಮಾವರ ಹೇರೂರಿನ ತುಂಬು ಗರ್ಭಿಣಿಗೆ ಶಂಕಿತ ಕೊರೋನ ಸೋಂಕಿನ ಪರೀಕ್ಷೆ ನಡೆಸಲಾಗಿದ್ದು, ಇಬ್ಬರ ವರದಿಗಳೂ ನೆಗೆಟಿವ್ ಆಗಿ ಬಂದಿವೆ ಎಂದು ಡಾ.ಸೂಡ ಸ್ಪಷ್ಟ ಪಡಿಸಿದರು.

ಗಂಗೊಳ್ಳಿಯ ಮಗು ತೀವ್ರ ಉಸಿರಾಟ ತೊಂದರೆ ಹಾಗೂ ಕೆಮ್ಮುವಿಗಾಗಿ ಕುಂದಾಪುರದ ಆಸ್ಪತ್ರೆಗೆ ದಾಖಲಾಗಿದ್ದು, ಸ್ಥಿತಿ ವಿಷಮಿಸಿದ್ದರಿಂದ ಮಗುವನ್ನು ಮಣಿಪಾಲ ಕೆಎಂಸಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿತ್ತು. ಮಗುವಿನಲ್ಲಿ ಕೊರೋನ ಗುಣಲಕ್ಷಣವಿದ್ದ ಕಾರಣ ಮಾದರಿಯನ್ನು ಪಡೆದು ಮಂಗಳೂರಿಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು.

ಅದೇ ರೀತಿ ಬ್ರಹ್ಮಾವರ ಸಮೀಪದ ಎಂಟೂವರೆ ತಿಂಗಳ ತುಂಬು ಗರ್ಭಿಣಿ ರಕ್ತದೊತ್ತಡದ ಏರುಪೇರು ಹಾಗೂ ಇತರ ಸಮಸ್ಯೆಗಳಿಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದು, ಆಕೆಗೂ ಕೊರೋನ ಟೆಸ್ಟ್ ನಡೆಸಲಾಗಿತ್ತು. ಈ ಎರಡು ಪ್ರಕರಣಗಳನ್ನೂ ಆದ್ಯತೆ ನೆಲೆಯಲ್ಲಿ ಪರಿಗಣಿಸಿದ ಕಾರಣ ಎರಡರ ಮಾದರಿ ಪರೀಕ್ಷೆ ಇಂದೇ ಬಂದಿದ್ದು, ಎರಡೂ ನೆಗೆಟಿ್ ಆಗಿ ಬಂದಿದೆ ಎಂದು ಡಿಎಚ್‌ಓ ತಿಳಿಸಿದರು

ಗಾಳಿಸುದ್ದಿ: ಉಡುಪಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿರುವ ಮೂವರು ಯುವಕರಲ್ಲಿ ಇಬ್ಬರಲ್ಲಿ ಮತ್ತೆ ಜ್ವರ ಕಾಣಿಸಿಕೊಂಡಿದೆ ಎಂಬುದು ಕೇವಲ ಗಾಳಿಸುದ್ದಿಯಾಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಉಡುಪಿಯಲ್ಲಿ ಸೋಂಕು ಪತ್ತೆಯಾದ ಮೂವರು ಯುವಕರು ಆರೋಗ್ಯದಿಂದಿದ್ದಾರೆ ಎಂದು ಡಾ.ಸುಧೀರ್‌ಚಂದ್ರ ಸೂಡ ಸ್ಪಷ್ಟ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News