×
Ad

ಜವಳಿ ಮಳಿಗೆ ತೆರೆಯದಂತೆ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ನಿಂದ ಜಿಲ್ಲಾಧಿಕಾರಿಗೆ ಮನವಿ

Update: 2020-05-06 18:13 IST

ಉಡುಪಿ, ಮೇ 6: ದೇಶಾದ್ಯಂತ ಜನರನ್ನು ತೀವ್ರ ಸಂಕಷ್ಟಕ್ಕೆ ಗುರಿ ಮಾಡಿರುವ ಕೋವಿಡ್-19 ವೈರಸ್ ಹರಡಲು ಕಾರಣವಾಗಬಲ್ಲ ಜವಳಿ ಮಳಿಗೆಗಳನ್ನು ಸದ್ಯಕ್ಕೆ ತೆರೆಯಲು ಅವಕಾಶ ನೀಡದಂತೆ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಮನವಿಯ ಮೂಲಕ ಒತ್ತಾಯಿಸಿದೆ.

ಸಾಂಕ್ರಾಮಿಕ ರೋಗವಾದ ಕೋವಿಡ್-19 ವೈರಸ್ ಹರಡದಂತೆ ತಡೆಗಟ್ಟಲು ಆರೋಗ್ಯ ಇಲಾಖೆ ಹಾಗೂ ವಕ್ಫ್ ಬೋರ್ಡಿನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ನಿಟ್ಟಿನಲ್ಲಿ ಖಾಜಿ ಶೈಖುನಾ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಸಹಿತ ಉನ್ನತ ಉಲೆಮಾಗಳು ನೀಡಿದ ಆದೇಶ ದಂತೆ ಪವಿತ್ರ ರಂಝಾನ್ ತಿಂಗಳಲ್ಲೂ ಸಾಮೂಹಿಕ ಆರಾಧನೆ, ಪವಿತ್ರ ಜುಮಾ ನಮಾಝ್ ಮುಂತಾದ ಧಾರ್ಮಿಕ ಆಚರಣೆಗಳನ್ನು ಮಸೀದಿ ಗಳಲ್ಲಿ ಮಾಡುವುದನ್ನು ಮುಸ್ಲಿಮರು ಸಂಪೂರ್ಣವಾಗಿ ನಿಷೇಧಿಸಿದ್ದಾರೆ.

ಪವಿತ್ರ ರಂಝಾನ್ ತಿಂಗಳ ಆರಾಧನೆಯನ್ನು ಮಸೀದಿ ಕೇಂದ್ರಿತದ ಬದಲಾಗಿ ಮನೆ ಕೇಂದ್ರಿತವಾಗಿ ಪರಿವರ್ತಿಸಿಕೊಂಡು, ಸುರಕ್ಷಿತ ಅಂತರವನ್ನು ಕಾಪಾಡಿ ಕೊಂಡು ವೈರಸ್ ಹರಡದಂತೆ ಎಲ್ಲಾ ಮುಸ್ಲಿಮರು ಎಚ್ಚರಿಕೆಯಿಂದ ಸಹಕರಿಸುತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕೋವಿಡ್-19 ವೈರಸ್ ಹರಡದಂತೆ ಸಾರ್ವಜನಿಕವಾಗಿ ಬೆರೆಯುವುದಕ್ಕೆ ನಿಷೇಧವಿರುವ ಈ ಹೊತ್ತಿನಲ್ಲಿ ಸರಕಾರ ಹಾಗೂ ಜಿಲ್ಲಾಡಳಿತ ಜವಳಿ ಮಳಿಗೆ ಗಳನ್ನು ತೆರೆಯಲು ಆದೇಶಿಸಿರುವುದು ನಿಜವಾಗಿಯೂ ವಿಷಾಧನೀಯ. ಇದರಿಂದ ಖಂಡಿತ ವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಮುಸ್ಲಿಮರು ಈದ್ ಖರೀದಿಗಾಗಿ ಮನೆಯಿಂದ ಹೊರ ಬಿದ್ದರೆ ಖಂಡಿತ ಸುರಕ್ಷಿತಾ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ ಹಾಗೂ ವ್ಯಾಪಾರಸ್ಥರು ಖಂಡಿತ ಈ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ. ಅವರಿಗೆ ಅವರ ವ್ಯಾಪಾರ ಮುಖ್ಯವೇ ಹೊರತು ಬೇರೆ ಸಂಗತಿಗಳಲ್ಲ.
ಈ ರೀತಿಯಲ್ಲಿ ಸಾರ್ವಜನಿಕರು ಮುಕ್ತವಾಗಿ ಬೆರೆಯಬಹುದಾದರೆ, ಮಸೀದಿ ಯಲ್ಲಿ ಸಾಮೂಹಿಕ ಆರಾಧನಾ ಕ್ರಮವನ್ನು ಸರಕಾರ ಏಕೆ ನಿರ್ಬಂಧಿಸಬೇಕು ಎಂಬ ಪ್ರಶ್ನೆ ಕಾಡಿ ಮುಸ್ಲಿಂ ಸಮುದಾಯ ಸ್ವಯಂ ಪ್ರೇರಿತರಾಗಿ ಮಸೀದಿ ಕೇಂದ್ರಿತ ಸಾಮೂಹಿಕ ಆರಾಧನೆಯಲ್ಲಿ ಪಾಲ್ಗೊಳ್ಳುವುದನ್ನು ತಳ್ಳಿಹಾಕುವಂತಿಲ್ಲ.  ಈಗಾಗಲೇ ಕರಾವಳಿ ಜಿಲ್ಲೆಯ ಮುಸ್ಲಿಮರು ಈದ್ ಹಬ್ಬವನ್ನು ಸರಳವಾಗಿ ಆಚರಿಸಬೇಕು ಮತ್ತು ವಿಶೇಷವಾಗಿ ಈದ್ ಖರೀದಿಗೆ ಸ್ಪಂಧಿಸ ಬಾರದು ಹಾಗೂ ಈ ಹಣವನ್ನು ಇತರ ಸತ್ಕರ್ಮಗಳಿಗೆ ವಿನಿಯೋಗಿಸಬೇಕು ಎಂದು ಮನವಿ ಮಾಡಿಕೊಂಡಿದೆ. ಇದಕ್ಕೆ ಪೂರಕವಾಗಿ ಕೋವಿಡ್-19 ಹರಡದಂತೆ ಮುಂಜಾಗ್ರತೆಯಾಗಿ ಜಿಲ್ಲಾಡಳಿತ ಜವಳಿ ಮಳಿಗೆಗಳನ್ನು ರಂಝಾನ್ ನಂತರವೇ ತೆರೆಯುವುದು ಸೂಕ್ತ ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಅಲ್ಲದೇ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜವಳಿ ಮಳಿಗೆಗಳು ಕಿಕ್ಕಿರಿದು ಒಳ್ಳೆಯ ವ್ಯಾಪಾರವಾಗಿ ಯಾರಿಗಾದರೂ ಸೋಂಕು ತಗಲಿದರೆ ಅದನ್ನು ಒಂದು ಸಮುದಾಯದ ಮೇಲೆ ಹಾಕುವ ಅಪಾಯ ಇರುವುದರಿಂದ ದಯಮಾಡಿ ಈ ಬಗ್ಗೆ ಕ್ರುಕೈಗೊಳ್ಳುವಂತೆ ವಿನಂತಿಸಲಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಅವಳಿ ಜಿಲ್ಲೆಗಳಾಗಿದ್ದು, ಈ ಜಿಲ್ಲೆಗಳ ಸಂಸ್ಕೃತಿ ಒಂದಕ್ಕೊಂದು ಪೂರಕವಾಗಿದೆ. ಇಲ್ಲಿಂದ ಹೋಗುವ ಹಾಗೂ ದ.ಕ.ಜಿಲ್ಲೆಯಿಂದ ಬರುವವರ (ರೋಗ ಶಂಕಿತರ ಹೊರತಾಗಿ) ಕ್ವಾರಂಟೈನ್ ಮಾಡುವುದು ಅಷ್ಟು ಸರಿಯಲ್ಲ. ಆದುದರಿಂದ ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ನಿಯೋಗ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್-19 ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ವೈರಸ್ ಹರಡದಂತೆ ತಡೆಗಟ್ಟುವಲ್ಲಿ ಯಶಸ್ವಿಯಾದ ಜಿಲ್ಲಾಡಳಿತಕ್ಕೆ ನಿಯೋಗ ಕೃತಜ್ಞತೆ ಹಾಗೂ ಅಭಿನಂದನೆಯನ್ನೂ ಸಲ್ಲಿಸಿದೆ.

ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನಿಯೋಗದಲ್ಲಿ ಸುನ್ನಿ ಸಂಯುಕ್ತ ಜಮಾಅತ್‌ನ ಅಧ್ಯಕ್ಷ ಅಬೂಬಕ್ಕರ್ ನೇಜಾರ್, ಪ್ರಧಾನ ಕಾರ್ಯದರ್ಶಿ ಎಂ.ಎ.ಬಾವು, ಸಂಘಟನಾ ಕಾರ್ಯದರ್ಶಿ ಕೆ.ಎ.ಅಬ್ದುಲ್ ರೆಹಮಾನ್ ರಝ್ವಿ ಕಲ್ಕಟ್ಟ, ತಾಲೂಕು ಮುಸ್ಲಿ ಒಕ್ಕೂಟದ ಅಧ್ಯಕ್ಷ ಶಬೀ ಖಾಜಿ, ಉಡುಪಿ ಅಂಜುಮಾನ್ ಮಸೀದಿಯ ಹಿರಿಯ ಮುಖಂಡ ಮಹಮ್ಮದ್ ಶೀಷ್, ನಾಯರ್‌ಕೆರೆ ಮಸೀದಿಯ ಇಕ್ಬಾಲ್ ಮನ್ನಾ, ನ್ಯಾಯವಾದಿ ಹಬೀಬ್ ಆಲಿ, ಕೆಎಂಡಿಸಿಯ ಮಾಜಿ ಅಧ್ಯಕ್ಷ ಎಂ.ಎ.ಗಫೂರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News