ಕೋವಿಡ್-19: ಉಡುಪಿಯಲ್ಲಿ 77 ವರದಿ ನೆಗೆಟಿವ್
ಉಡುಪಿ, ಮೇ 6: ಶಂಕಿತ ನೋವೆಲ್ ಕೊರೋನ ವೈರಸ್ (ಕೋವಿಡ್- 19) ಸೋಂಕಿನ ಪರೀಕ್ಷೆಗೆ ಬಾಕಿ ಇದ್ದ 125 ಗಂಟಲು ದ್ರವದ ಮಾದರಿಗಳಲ್ಲಿ 77 ಮಂದಿಯ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿವೆ. ಇದರಿಂದ ಇನ್ನೂ 48 ಮಾದರಿಗಳ ವರದಿ ಬರಬೇಕಿದ್ದು, ಇದರೊಂದಿಗೆ ಬುಧವಾರ ಕಳುಹಿಸಿದ 63 ಮಾದರಿಗಳು ಸೇರಿದಂತೆ ಒಟ್ಟು 111 ಸ್ಯಾಂಪಲ್ಗಳ ಪರೀಕ್ಷಾ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ.
ಬುಧವಾರ ಕೋವಿಡ್-19ರ ಗುಣಲಕ್ಷಣಗಳಿದ್ದ 63 ಸ್ಯಾಂಪಲ್ಗಳನ್ನು ಪಡೆದು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಐವರು ತೀವ್ರ ಉಸಿರಾಟದ ತೊಂದರೆಯವರು, 11 ಮಂದಿ ಶೀತಜ್ವರದಿಂದ ಬಳಲುವವರು ಹಾಗೂ 47 ಮಂದಿ ಕೊರೋನ ಹಾಟ್ಸ್ಪಾಟ್ನಿಂದ ಬಂದವರ ಸ್ಯಾಂಪಲ್ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.
ಜಿಲ್ಲೆಯಲ್ಲಿ ಬುಧವಾರದವರೆಗೆ ಒಟ್ಟು 1357 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ. ಇವುಗಳಲ್ಲಿ 1246ರ ವರದಿ ಬಂದಿದ್ದು, 1243 ನೆಗೆಟಿವ್ ಆಗಿವೆ. ಜಿಲ್ಲೆಯಲ್ಲಿ ಇದುವರೆಗೆ ಕೇವಲ ಮೂವರ ಸ್ಯಾಂಪಲ್ ಮಾತ್ರ ಪಾಸಿಟಿವ್ ಆಗಿ ಬಂದಿದ್ದು ಎಲ್ಲರೂ ಗುಣಮುಖರಾಗಿದ್ದಾರೆ ಎಂದವರು ಹೇಳಿದರು.
ಶಂಕಿತ ನೋವೆಲ್ ಕೊರೋನ ಸೋಂಕಿನ ಪರೀಕ್ಷೆಗಾಗಿ ರೋಗದ ಲಕ್ಷಣ ಹೊಂದಿರುವ 11 ಮಂದಿ ಇಂದು ಜಿಲ್ಲೆಯ ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿಗೆ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ಏಳು ಮಂದಿ ಪುರುಷರು ಹಾಗೂ ನಾಲ್ವರು ಮಹಿಳೆಯರಿದ್ದಾರೆ. ಒಬ್ಬ ಕೋವಿಡ್ ಶಂಕಿತ, ಏಳು ಮಂದಿ ತೀವ್ರತರದ ಉಸಿರಾಟ ತೊಂದರೆ ಹಾಗೂ ಮೂವರು ಶೀತಜ್ವರದ ಬಾಧೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು 8 ಮಂದಿ ಐಸೋಲೇಶನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದು, 48 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಒಟ್ಟು 393 ಮಂದಿ ಐಸೋಲೇಶನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ ವಿವಿಧ ಹಿನ್ನೆಲೆಯೊಂದಿಗೆ 112 ಮಂದಿ ಬುಧವಾರ ಹೊಸದಾಗಿ ನೋಂದಣಿ ಮಾಡಿಕೊಂಡಿ ದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4021 ಮಂದಿಯನ್ನು ತಪಾಸಣೆಗಾಗಿ ನೋಂದಣಿ ಮಾಡಿಕೊಂಡಂತಾಗಿದೆ. ಇವರಲ್ಲಿ 2417 (ಇಂದು 28) ಮಂದಿ 28 ದಿನಗಳ ನಿಗಾವನ್ನೂ, 3278 (31) ಮಂದಿ 14 ದಿನಗಳ ನಿಗಾವನ್ನು ಪೂರ್ಣ ಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 666 ಮಂದಿ ಹೋಮ್ ಕ್ವಾರಂಟೈನ್ ಹಾಗೂ 49 ಮಂದಿ ಆಸ್ಪತ್ರೆ ಕ್ವಾರಂಟೈನ್ನಲ್ಲಿದ್ದಾರೆ ಎಂದು ಡಾ. ಸುಧೀರ್ಚಂದ್ರ ಸೂಡ ತಿಳಿಸಿದರು.
ಬೆಳಗಾವಿಯಿಂದ ಬಂದವರ ಸ್ಯಾಂಪಲ್ ನೆಗೆಟಿವ್
ಕಳೆದ ಶುಕ್ರವಾರ ಬೆಳಗಾವಿಯಿಂದ ಎರಡು ಕಾರುಗಳಲ್ಲಿ ಬೈಂದೂರಿಗೆ ಆಗಮಿಸಿದ್ದ ಎಲ್ಲಾ 10 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಆಗಿ ಬಂದಿವೆ. ಇವರಲ್ಲಿ ನಿನ್ನೆ ಐವರ ವರದಿ ಬಂದಿದ್ದರೆ, ಉಳಿದ ಐವರ ವರದಿ ಇಂದು ಬಂದಿದೆ. ಇವರಲ್ಲಿ ಕೊರೋನ ಸೋಂಕಿತ ಎಂಬ ವದಂತಿ ಕೇಳಿಬಂದ ಶಿರೂರಿನ ವ್ಯಕ್ತಿಯ ಮಾದರಿಯೂ ಸೇರಿದೆ ಎಂದು ಡಿಎಚ್ಓ ಡಾ.ಸೂಡ ತಿಳಿಸಿದು.
ಇವರಲ್ಲಿ ಶಿರೂರು ವ್ಯಕ್ತಿ ಕುಂದಾಪುರದ ಖಾಸಗಿ ಆಸ್ಪತ್ರೆಯ ಐಸೋಲೇಶನ್ ವಾರ್ಡಿನಲ್ಲಿದ್ದ ಇನ್ನುಳಿದ 9ಮಂದಿ ಕುಂದಾಪುರ ಮತ್ತು ಉಡುಪಿಯ ಬಿಸಿಎಂ ಹಾಸ್ಟೆಲ್ ಕ್ವಾರಂಟೈನ್ನಲ್ಲಿದ್ದಾರೆ. ಇವರ ಬಗ್ಗೆ ನಾಳೆ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದು ಅವರು ಹೇಳಿದರು.
ಅದೇ ರೀತಿ ಮಂಡ್ಯದ ನಾಗಮಂಗಲದಲ್ಲಿ ಪಾಸಿಟಿವ್ ಆದ ವ್ಯಕ್ತಿ ಮುಂಬಯಿಯಿಂದ ಖರ್ಜೂರದ ಕ್ಯಾಂಟರ್ನಲ್ಲಿ ನಾಗಮಂಗಲಕ್ಕೆ ತೆರಳುವ ಮಾರ್ಗದಲ್ಲಿ ಉಡುಪಿಯ ತೆಕ್ಕಟ್ಟೆ ಪೆಟ್ರೋಲ್ಬಂಕ್ ಹಾಗೂ ಸಾಸ್ತಾನದ ಟೋಲ್ಗೇಟ್ನಲ್ಲಿ ಸಂಪರ್ಕಕ್ಕೆ ಬಂದ ಎಲ್ಲಾ 18 ಮಂದಿಯ ವರದಿಯೂ ಕೈಸೇರಿದ್ದು, ಇದು ಸಹ ನೆಗೆಟಿವ್ ಆಗಿವೆ. ಇವರಲ್ಲಿ 10 ಮಂದಿಯ ದ್ವಿತೀಯ ಸ್ಯಾಂಪಲ್ ವರದಿ ನಿನ್ನೆ ಬಂದಿದ್ದು, ಉಳಿದ ಎಂಟು ಮಂದಿಯ ವರದಿ ಇಂದು ಬಂದಿವೆ. ಎಲ್ಲರನ್ನೂ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಹೋಮ್ ಕ್ವಾರಂಟೈನ್ಗೆ ಕಳುಹಿಸಲಾಗಿದೆ ಎಂದು ಡಾ.ಸೂಡ ತಿಳಿಸಿದರು.