ಲಾಕ್‍ಡೌನ್‍: ಕಾಲ್ನಡಿಗೆಯಲ್ಲಿ ಊರಿಗೆ ತೆರಳಲು ತೀರ್ಮಾನಿಸಿದ ಬಿಹಾರ ಮೂಲದ ಕಾರ್ಮಿಕರು; ಅಧಿಕಾರಿಗಳಿಂದ ತಡೆ

Update: 2020-05-06 16:59 GMT

ಉಪ್ಪಿನಂಗಡಿ: ಲಾಕ್‍ಡೌನ್‍ನಿಂದ ಊರಿಗೆ ತೆರಳಲು ಸಾಧ್ಯವಾಗದೆ ಬೇಸತ್ತ ಸುಮಾರು 100ರಷ್ಟು ಬಿಹಾರ ರಾಜ್ಯದ ಕಾರ್ಮಿಕರು ಕಾಲ್ನಡಿಗೆಯಲ್ಲಿ ಊರಿಗೆ ತೆರಳಲು ತೀರ್ಮಾನಿಸಿ ಬೀದಿಗಳಿದ ಘಟನೆ ಉಪ್ಪಿನಂಗಡಿಯಲ್ಲಿ ಮೇ 6ರಂದು ನಡೆದಿದ್ದು, ಇವರ ಪ್ರಯಾಣಕ್ಕೆ ತಡೆಯೊಡ್ಡಿದ ಅಧಿಕಾರಿಗಳು ಅವರನ್ನು ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಕಳುಹಿಸಿ, ಅಲ್ಲಿ ಊಟ, ವಸತಿಯ ವ್ಯವಸ್ಥೆ ಕಲ್ಪಿಸಿದ್ದಾರೆ.

ಬಿಹಾರ ರಾಜ್ಯದಿಂದ ಕೆಲಸಕ್ಕೆಂದು ಬಂದ ನೂರಾರು ಕಾರ್ಮಿಕರು ಉಪ್ಪಿನಂಗಡಿ ಭಾಗದಲ್ಲಿ ವಾಸ್ತ್ಯವ್ಯವಿದ್ದರು. ಲಾಕ್‍ಡೌನ್‍ನಿಂದಾಗಿ ಊರಿಗೆ ತೆರಳಲಾಗದೇ ಇಲ್ಲೇ ಅತಂತ್ರರಾಗಿದ್ದರು. ಅವರಿಗೆ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಜಿಲ್ಲಾಡಳಿತ, ದಾನಿಗಳ ವತಿಯಿಂದ ಆಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ಲಾಕ್‍ಡೌನ್ ಸಡಿಲಗೊಂಡ ಬಳಿಕ ಅವರು ಊರಿಗೆ ಹೋಗಲು ಹಪಾಹಪಿಸಿದ್ದು, ಆದರೆ ಅವರಿಗೆ ಊರಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಇದರಿಂದ ಬೇಸತ್ತ ಸುಮಾರು 100ರಷ್ಟು ಕಾರ್ಮಿಕರು ಮೇ 6ರಂದು ಬೆಂಗಳೂರು ಮೂಲಕವಾಗಿ ಬಿಹಾರಕ್ಕೆ ತೆರಳಲು ಮುಂದಾಗಿ ನಡೆದುಕೊಂಡೇ ಹೊರಟರು. ತಂಡೋಪತಂಡವಾಗಿ ಹೋಗುತ್ತಿದ್ದ ಇವರನ್ನು ಗಾಂಧಿಪಾರ್ಕ್ ಬಳಿ ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್ ನೋಡಿದ್ದು, ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರಲ್ಲದೆ, ಇವರ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳಿಗೆ, ಶಾಸಕರಿಗೆ ತಿಳಿಸಿದ್ದರು. ಪೊಲೀಸರು ಇವರ ಪ್ರಯಾಣಕ್ಕೆ ತಡೆಯೊಡ್ಡಿದ್ದು, ಇವರಿಗಿಂತ ಮುಂದೆ ಹೋಗಿದ್ದ ತಂಡವನ್ನು ವಾಹನದಲ್ಲಿ ಗಾಂಧಿಪಾರ್ಕ್‍ಗೆ ತಂದು ಅಲ್ಲಿ ನಿಲ್ಲಿಸಲಾಯಿತು.

ಶಾಸಕರಿಂದ ಸ್ಪಂದನೆ: ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಶಾಸಕ ಸಂಜೀವ ಮಠಂದೂರು ಅವರು ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಕೆಲವು ದಿನಗಳ ಮಟ್ಟಿಗೆ ಅವರಿಗೆ ಶ್ರೀ ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಸಂಜೀವ ಮಠಂದೂರು ಅವರು, ಹೊರ ರಾಜ್ಯದ ಕಾರ್ಮಿಕರು ಏಕಾಏಕಿ ಊರಿಗೆ ಹೋಗಲು ತೆರಳಲು ನಿರ್ಧರಿಸಿ ಇಂದು ಬೀದಿಗಿಳಿದಿದ್ದಾರೆ. ಸರಿಯಾದ ವ್ಯವಸ್ಥೆಯಾಗದೇ ಊರಿಗೆ ತೆರಳದಂತೆ ಅವರ ಮನವೊಲಿಸಲಾಗಿದ್ದು, ಅವರಿಗೆ ಇದೀಗ ಅವರಿಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೆಲ ದಿನಗಳ ಮಟ್ಟಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದೇನೆ. ಸ್ಥಳದಲ್ಲಿಯೇ ಇದ್ದು ಅವರನ್ನು ಸುಬ್ರಹ್ಮಣ್ಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದೇನೆ. ಎಡಿಸಿ ಇವರ ಜವಾಬ್ದಾರಿ ನೋಡಿಕೊಳ್ಳಲಿದ್ದು, ಆರು ಬಸ್‍ಗಳಲ್ಲಿ ಉಪ್ಪಿನಂಗಡಿ ಹಾಗೂ ನೆಕ್ಕಿಲಾಡಿಯಲ್ಲಿ ಇದ್ದ ಒಟ್ಟು 201 ಬಿಹಾರ ರಾಜ್ಯದ ಕಾರ್ಮಿಕರನ್ನು ಕುಕ್ಕೆ ಸುಬ್ರಹ್ಮಣ್ಯಕ್ಕೆ ಕಳುಹಿಸಲಾಗಿದೆ. ಬಳಿಕ ಸರಿಯಾದ ವ್ಯವಸ್ಥೆಯಾದ ಬಳಿಕ ಅವರನ್ನು ಅವರ ಊರಿಗೆ ಸರಕಾರ ಕಳುಹಿಸಿಕೊಡಲಿದೆ ಎಂದರು.

ಮಾಧ್ಯಮದೊಂದಿಗೆ ಮಾತನಾಡಿದ ಬಿಹಾರ ಕಾರ್ಮಿಕರು, ಲಾಕ್‍ಡೌನ್ ಸಡಿಲಗೊಂಡರೂ ನಮಗೆ ಇಲ್ಲಿ ದುಡಿಯಲು ಕೆಲಸವಿರಲಿಲ್ಲ. ಕೈಯಲ್ಲೂ ಹಣವಿರಲಿಲ್ಲ. ಊರಿಗೆ ಹೇಗೆ, ಯಾವಾಗ ತೆರಳಬೇಕೆಂಬ ಮಾಹಿತಿಯೂ ನಮಗೆ ಅಧಿಕಾರಿಗಳಿಂದ ಬಂದಿಲ್ಲ. ಊರಿಗೆ ತೆರಳಲು ಪಾಸ್‍ಗಾಗಿ ನಾವು ಗ್ರಾ.ಪಂ.ಗೆ ತೆರಳಿದರೆ ಅಲ್ಲಿ ನಮ್ಮನ್ನು ಪೊಲೀಸ್ ಠಾಣೆಗೆ ಕಳುಹಿಸುತ್ತಿದ್ದರು. ಪೊಲೀಸ್ ಠಾಣೆಗೆ ಹೋದರೆ ಅಲ್ಲಿಂದ ಗ್ರಾ.ಪಂ.ಗೆ ಕಳುಹಿಸುತ್ತಿದ್ದರು. ಅಲ್ಲಿಂದ ಇಲ್ಲಿಗೆ ನಾವು ಅಲೆದಾಡಿದರೂ ನಮಗೆ ಪಾಸ್ ಪಡೆಯಲು ಏನು ಮಾಡಬೇಕು. ಯಾವಾಗ ಊರಿಗೆ ಹೋಗಲು ಅನುವು ದೊರೆಯುತ್ತದೆ ಎಂಬ ಮಾಹಿತಿಯೇ ಯಾರಿಂದಲೂ ಲಭಿಸಿಲ್ಲ. ಕೆಲವರು ರೈಲ್ವೇ ಪ್ರಯಾಣಕ್ಕೆಂದು ಒಬ್ಬರಿಗೆ 1,500 ನೀಡಬೇಕು ಎನ್ನುತ್ತಿದ್ದರು. ಕೆಲಸವಿಲ್ಲದೆ ನಾವು ತುಂಬಾ ದಿನದಿಂದಿದ್ದೇವೆ. ನಮ್ಮಲ್ಲಿ ಹಣ ಕೂಡಾ ಇಲ್ಲ. ಇನ್ನೊಂದೆಡೆ ನಮಗೆ ದಾನಿಗಳು, ಶಾಸಕರು, ಜಿಲ್ಲಾಡಳಿತ ಕೊಟ್ಟ ಆಹಾರ ಸಾಮಗ್ರಿಗಳೂ ಖಾಲಿಯಾಗಿವೆ. ಆದ್ದರಿಂದ ನಾವು ನಡೆದುಕೊಂಡಾದರೂ ಊರಿಗೆ ತೆರಳುತ್ತೇವೆ ಎಂದು ತೀರ್ಮಾನಿಸಿ ಹೊರಟಿದ್ದೆವು. ಇಂತಹ ಪರಿಸ್ಥಿತಿಯಲ್ಲಿ ನಾವು ಊರು ತಲುಪಿದರೆ ಮಾತ್ರ ನೆಮ್ಮದಿಯಿಂದಿರಲು ಸಾಧ್ಯ ಎಂದರು.

ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್ ಮಾತನಾಡಿ, ಲಾಕ್‍ಡೌನ್‍ನ ಅವಧಿಯಲ್ಲಿ ಈ ಭಾಗದಲ್ಲಿ ಬಹಳಷ್ಟು ಹೊರ ರಾಜ್ಯದ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಲಾಕ್‍ಡೌನ್ ಸಡಿಲಿಕೆಗೊಂಡ ಬಳಿಕ ಊರಿಗೆ ತೆರಳಬಹುದೆಂಬ ಆಶಾಭಾವನೆಯನ್ನು ಅವರು ಇಟ್ಟುಕೊಂಡಿದ್ದರು. ಆದರೆ ಆ ಬಳಿಕವೂ ಇವರು ಊರಿಗೆ ತೆರಳುವುದು ಹೇಗೆ? ಸರಕಾರವೇ ಇವರಿಗೆ ಊರಿಗೆ ತೆರಳಲು ವ್ಯವಸ್ಥೆ ಮಾಡಲಿದೆಯಾ? ಅಥವಾ ಇವರದ್ದೇ ಖರ್ಚಿನಲ್ಲಿ ಇವರು ತೆರಳಬೇಕಾ? ಊರಿಗೆ ತೆರಳಬೇಕಾದರೆ ಪಾಸ್‍ಗಾಗಿ ಯಾರನ್ನು ಸಂಪರ್ಕಿಸಬೇಕು ಹೀಗೆ  ಯಾವ ಮಾಹಿತಿಯನ್ನೂ ಅಧಿಕಾರಿಗಳು ನೀಡಲಿಲ್ಲ. ಇವರಲ್ಲಿ ಇದು ಗೊಂದಲ ಸೃಷ್ಟಿಗೆ ಕಾರಣವಾಗಿದ್ದು, ಸಹನೆ ಕಳೆದುಕೊಂಡು ಇವರು ಇಂದು ಏಕಾಏಕಿ ಬೀದಿಗಿಳಿದಿದ್ದಾರೆ. ಇದಕ್ಕೆ ಅವಕಾಶ ನೀಡಿದರೆ ಇಡೀ ಸಮಾಜವೇ ಆಪತ್ತಿಗೆ ಸಿಲುಕಿಕೊಳ್ಳಬಹುದು. ಆದ್ದರಿಂದ ಅಧಿಕಾರಿಗಳು ಅವರಿಗೆ ಊರಿಗೆ ಕಳುಹಿಸುವ ಬಗ್ಗೆ ಸರಿಯಾದ ಮಾಹಿತಿ ನೀಡಿ ಅವರಲ್ಲಿ ಭರವಸೆ ಮೂಡಿಸಿ, ಅವರು ಬೀದಿಗಿಳಿಯದಂತೆ ಎಚ್ಚರವಹಿಸಬೇಕು. ಇವರನ್ನು ಊರಿಗೆ ಕಳುಹಿಸುವ ಹೊಣೆಯನ್ನು ಸರಕಾರವೇ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಉಪ್ಪಿನಂಗಡಿ ಭಾಗದಲ್ಲಿ ರಾಜಸ್ಥಾನ ಮೂಲದ ಕಾರ್ಮಿಕರು ಹಲವರಿದ್ದು, ಶಾಸಕರ ಮನವೊಲಿಕೆ ಬಳಿಕ ಅವರು ತಣ್ಣಗಾಗಿದ್ದು, ಸರಿಯಾದ ವ್ಯವಸ್ಥೆ ಕಲ್ಪಿಸಿದ ಬಳಿಕ ನಾವು ಊರಿಗೆ ತೆರಳುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭ ತಹಶೀಲ್ದಾರ್ ರಮೇಶ್ ಬಾಬು, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಉಪ್ಪಿನಂಗಡಿ ಹೋಬಳಿ ಕಂದಾಯಾಧಿ ಕಾರಿ ವಿಜಯವಿಕ್ರಮ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ತಾ.ಪಂ. ಸದಸ್ಯೆ ಸುಜಾತಕೃಷ್ಣ, ಪ್ರಮುಖರಾದ ಸುರೇಶ್ ಅತ್ರೆಮಜಲು, ಜಯಂತ ಪೊರೋಳಿ, ಅನೂಫ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News