ಫಲಾನುಭವಿಗಳ ಕೈ ಸೇರದ ಮಾತೃಪೂರ್ಣ ಯೋಜನೆಯ ಕಿಟ್!

Update: 2020-05-07 06:43 GMT

ಬೆಂಗಳೂರು, ಮೇ 6: ಗರ್ಭಿಣಿ ಮತ್ತು ಬಾಣಂತಿಯರಿಗೆ ಮಾತೃಪೂರ್ಣ ಯೋಜನೆಯಡಿ ನೀಡಲಾಗುತ್ತಿದ್ದ ಆಹಾರ ಧಾನ್ಯಗಳ ಕಿಟ್ ಗ್ರಾಮೀಣ ಮಟ್ಟದಲ್ಲಿ ಸರಿಯಾಗಿ ವಿತರಣೆಯಾಗುತ್ತಿಲ್ಲ. ಮೇ ತಿಂಗಳು ಸೇರಿ 60 ದಿನಕ್ಕೆ ಆಗುವಷ್ಟು ಆಹಾರ ಪದಾರ್ಥ ನೀಡುವಂತೆ ಸೂಚಿಸಿದ್ದರೂ, ಈವರೆಗೆ ಫಲಾನುಭವಿಗಳ ಕೈ ಸೇರಿರುವುದು 15 ದಿನಕ್ಕಾಗುವಷ್ಟು ಧಾನ್ಯಗಳು ಮಾತ್ರ ಹಾಗೂ ಇನ್ನೂ ಕೆಲವು ಕಡೆ ಗ್ರಾಮೀಣ ಮಟ್ಟದಲ್ಲಿ ಆಹಾರ ಧಾನ್ಯ ವಿತರಣೆಯಾಗಿಲ್ಲ!

ಅಂಗನವಾಡಿಗಳಿಗೆ ಗರ್ಭಿಣಿಯರು ಮತ್ತು ಬಾಣಂತಿಯರು ಬಂದು ಊಟ ಮಾಡುವ ಮಾತೃಪೂರ್ಣ ಯೋಜನೆಯು ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಗೆ ಆಹಾರ ಧಾನ್ಯಗಳನ್ನು ನೀಡಲು ಇಲಾಖೆ ಮುಂದಾಗಿತು. ಈ ಸಂಬಂಧ ಮೂರು ಬಾರಿ ಸುತ್ತೋಲೆ ಹೊರಡಿಸಿದೆ.

ಒಂದು ದಿನಕ್ಕೆ ಒಬ್ಬರಿಗೆ 21 ರೂ. ಖರ್ಚಾಗಲಿದ್ದು, 60 ದಿನಕ್ಕೆ ಆಗುವಷ್ಟು ಹಣ ಒಂದುಗೂಡಿಸಿ ಈ ಹಣದ ಮೌಲ್ಯದಷ್ಟು ಅಕ್ಕಿ, ಬೇಳೆ, ಮೊಟ್ಟೆ, ಹೆಸರು ಕಾಳು ಸೇರಿದಂತೆ ವಿವಿಧ ಪದಾರ್ಥಗಳನ್ನು ವಿತರಿಸಲು ತಿಳಿಸಿದೆ. ಆದರೆ, ಇದು ಸರಿಯಾಗಿ ಫಲಾನುಭವಿಗಳ ಕೈ ಸೇರುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ರಾಜ್ಯದಲ್ಲಿ ಮಾತೃಪೂರ್ಣ ಯೋಜನೆಯಡಿ 7 ಲಕ್ಷ ಫಲಾನುಭವಿಗಳಿದ್ದು, ಕೂಲಿ ಕೆಲಸ ಆರಿಸಿಕೊಂಡು ಬೆಂಗಳೂರು, ಮಂಗಳೂರು, ಗೋವಾದತ್ತ ಕಾಲ್ಕಿತ್ತಿದ್ದು, ಲಾಕ್‌ಡೌನ್‌ಗಿಂತ ಮೊದಲೇ ಊರು ಸೇರಿದರೂ, ಇವರಿಗೆ ಆಹಾರ ಧಾನ್ಯ ನೀಡುತ್ತಿಲ್ಲ. ಈ ಬಗ್ಗೆ ಕೇಳಿದರೆ, ನಿಮಗೆ ಯೋಜನೆಯಡಿ ಧಾನ್ಯ ಸಿಗುವುದಿಲ್ಲ. ಈಗಾಗಲೇ ಲಿಸ್ಟ್ ಮಾಡಿದವರಿಗೆ ಮಾತ್ರ ಸಿಗಲಿದೆ ಎನ್ನುತ್ತಿದ್ದಾರೆ.

ಗರ್ಭಿಣಿಯರು ಗಂಡನ ಮನೆಯಿಂದ ತವರು ಮನೆಗೆ ಹೆರಿಗೆಗೆ ಹೋಗಿದ್ದು, ಗಂಡನ ಮನೆ ವ್ಯಾಪ್ತಿಯಲ್ಲಿರುವ ಅಂಗನವಾಡಿಯಲ್ಲಿ ಆಹಾರ ಧಾನ್ಯ ನೀಡುತ್ತಾರೆ ನಾವು ನೀಡುವುದಿಲ್ಲವೆಂದು ತವರು ಮನೆ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಹೇಳಿದರೆ, ಇದೇ ರೀತಿ ಇನ್ನೊಬ್ಬರು ಹೇಳುತ್ತಾರೆ. ಎರಡು ಕಡೆಯಿಂದಲೂ ಆಹಾರ ಧಾನ್ಯ ಬರುತ್ತಿಲ್ಲವೆಂದು ಎಂದು ದಾವಣಗೆರೆ ಜಿಲ್ಲೆಯ ಗರ್ಭಿಣಿ ದೇವಮ್ಮ ಹೇಳಿದರು.

ಗ್ರಾಮೀಣ ಭಾಗದಲ್ಲಿ ಫಲಾಭವಿಗಳ ಕೈ ಸೇರದ ಯೋಜನೆ: ಗ್ರಾಪಂ ಮಟ್ಟದಲ್ಲಿ ರಚಿಸಲಾದ ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಇದ್ದು, ಇವರು ಆರೋಗ್ಯಾಧಿಕಾರಿಗಳ ಜತೆ ಮನೆ ಮನೆಗೆ ತೆರಳಿ ಜಾಗೃತಿ, ಆರೋಗ್ಯ ಪರೀಕ್ಷೆ ಮಾಡಲಿದ್ದಾರೆ. ಈ ಕೆಲಸದಲ್ಲಿಯೇ ಸಮಯ ವ್ಯಯವಾಗಲಿದ್ದು, ಕೆಲ ಫಲಾನುಭವಿಗಳಿಗೆ ಯೋಜನೆ ಸೇರುತ್ತಿಲ್ಲ. ಇನ್ನೂ ಕೆಲವೆಡೆ ಆಹಾರ ಧಾನ್ಯ ಬಂದಿದ್ದರೂ, ವಿತರಿಸುತ್ತಿಲ್ಲ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.

ಕೆಲವೆಡೆ ಆಹಾರ ಧಾನ್ಯ ಪಡೆಯಲು ಹಿಂದೇಟು: ಕೊರೋನ ಭೀತಿ ಹಿನ್ನೆಲೆ ಕಲಬುರಗಿ, ಬಾಗಲಕೋಟೆ, ವಿಜಯಪುರ, ಮೈಸೂರು ಸೇರಿದಂತೆ ಹಲ ಜಿಲ್ಲೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾತೃಪೂರ್ಣ ಯೋಜನೆಯಡಿ ನೀಡುವ ಆಹಾರ ಧಾನ್ಯ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಬಹುತೇಕ ಧಾನ್ಯಗಳು ಬೆಂಗಳೂರಿನಿಂದ ಬರಲಿದ್ದು, ಕೆಲವರು ಆತಂಕಕ್ಕೆ ಒಳಗಾಗಿ ಆಹಾರ ಧಾನ್ಯ ತಿರಸ್ಕರಿಸುತ್ತಿದ್ದಾರೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ಲಾವಾರು ವರದಿ ನೀಡಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೂ ಆಹಾರ ಪದಾರ್ಥಗಳ ಕಿಟ್ ಫಲಾನುಭವಿಗಳಿಗೆ ನೀಡಬೇಕು ಎಂದು ಮತ್ತೊಂದು ಸುತ್ತೋಲೆ ಹೊರಡಿಸಲಾಗಿದೆ. ಈಗಾಗಲೇ ಒಂದು ತಿಂಗಳಿಗಾಗುವಷ್ಟು ಧಾನ್ಯಗಳನ್ನು ನೀಡಲಾಗಿದ್ದು, ಲಾಕ್‌ಡೌನ್ ಮುಂದುವರಿದಿರುವುದರಿಂದ ಯೋಜನೆಯನ್ನು ಮುಂದುವರಿಸಲಾಗಿದೆ. ಮೂರನೇ ಹಂತದಲ್ಲಿ ಧಾನ್ಯಗಳಿರುವ ಕಿಟ್‌ಗಳನ್ನು ವಾರದೊಳಗೆ ವಿತರಿಸಲಾಗುವುದು. ಇನ್ನೂ ಕೆಲವು ಫಲಾನುಭವಿಗಳಿಗೆ ಯೋಜನೆಯ ಕಿಟ್ ತಲುಪಿಲ್ಲ ಎಂಬ ಆರೋಪಗಳು ಬರುತ್ತಿದ್ದು, ಯಾರಿಗೆ ಕಿಟ್ ವಿತರಿಸಲಾಗಿದೆ ಎಂಬುದರ ಬಗ್ಗೆ ಜಿಲ್ಲಾವಾರು ಮಾಹಿತಿ ನೀಡಬೇಕು ಎಂದು ಜಿಲ್ಲಾ ಉಪ ನಿರ್ದೇಶಕರಿಗೆ ತಿಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ನಾವು ದುಡಿಯಲು ಬೆಂಗಳೂರಿಗೆ ಗುಳೆ ಹೋಗಿದ್ದೆವು. ಲಾಕ್ ಡೌನ್ ಹಿನ್ನೆಲೆ ಮರಳಿ ಊರಿಗೆ ಬಂದಿದ್ದೇವೆ. ಗರ್ಭಿಣಿಯರಿಗೆ ಆಹಾರ ಧಾನ್ಯ ಕಿಟ್ ನೀಡುತ್ತಿದ್ದು, ನಮಗೂ ನೀಡುವಂತೆ ಕೇಳಿದರೆ, ನಿಮಗೆ ಬರುವುದಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ಹೇಳುತ್ತಾರೆ. ಈ ಯೋಜನೆ ಇರುವುದೇ ಮಕ್ಕಳು ಅಪೌಷ್ಟಿಕತೆಯಿಂದ ನರಳಬಾರದೆಂದು. ಆದರೆ, ಈ ಯೋಜನೆ ಕೆಲವರಿಗೆ ಮಾತ್ರ ತಲುಪುತ್ತಿದೆ.

-ಗಂಗಮ್ಮ,

ದಾವಣಗೆರೆ ಜಿಲ್ಲೆಯ ನಿವಾಸಿ

Writer - ಯುವರಾಜ್ ಮಾಳಗಿ

contributor

Editor - ಯುವರಾಜ್ ಮಾಳಗಿ

contributor

Similar News