ಉಡುಪಿಯಲ್ಲಿ ಶುದ್ಧೀಕಾರಕ ದ್ರಾವಣ ಕೇಂದ್ರ ಉದ್ಘಾಟನೆ
ಉಡುಪಿ, ಮೇ 9: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಜೋಸ್ ಅಲುಕ್ಕಾಸ್ ಆಭರಣ ಮಳಿಗೆ ವತಿಯಿಂದ ಕೊರೊನಾ ಸೋಂಕು ಹರಡದಂತೆ ತಡೆಯಲು, ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಮಾರುಥಿ ವೀಥಿಕಾದಲ್ಲಿ ಸ್ಥಾಪಿಸಲಾಗಿರುವ ಶುದ್ಧೀಕಾರಕ ದ್ರಾವಣ ಕೇಂದ್ರವನ್ನು ಉಡುಪಿ ತಹಶಿಲ್ದಾರ್ ಪ್ರದೀಪ್ ಕುರ್ಡೆಕರ್ ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಹರಡ ದಂತೆ, ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರ ಆರೋಗ್ಯದ ಕ್ಷೇಮಾರ್ಥ ಸ್ಥಾಪಿಸಿರುವ ಶುದ್ಧೀಕಾರಕ ದ್ರಾವಣ ಕೇಂದ್ರವು ಈ ತುರ್ತು ಸಮಯದಲ್ಲಿ ಅತಿ ಅಗತ್ಯವಾಗಿದೆ ಎಂದು ಹೇಳಿದರು.
ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಮಾತನಾಡಿ, ದಾನಿಗಳ ಸಹಕಾರ ದೊರೆತರೆ, ನಗರದಲ್ಲಿ ಅತಿಹೆಚ್ಚು ಜನ ಸಂಚಾರ ಇರುವ ಸ್ಥಳಗಳನ್ನು ಗುರುತಿಸಿ, ಅಲ್ಲಿಯ ಆಯಾಕಟ್ಟಿನ ಸ್ಥಳದಲ್ಲಿ ಶುದ್ಧೀಕಾರಕ ದ್ರಾವಣ ಕೇಂದ್ರ ಸ್ಥಾಪಿಸಲು ಸಂಕಲ್ಪಿಸಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೋಸ್ ಅಲುಕ್ಕಾಸ್ನ ಗೋಪಾಲ್, ಸಮಿತಿಯ ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು, ಅಭಿಜಿತ್ ಕಾಮತ್, ರವಿಚಂದ್ರನ್, ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು. ನಾಗರಿಕ ಸಮಿತಿಯ ಸ್ಥಾಪಕ ಅಧ್ಯಕ್ಷ, ಉದ್ಯಮಿ ಪಿ.ಸುದರ್ಶನ್ ಕಾಮತ್ ಯಂತ್ರ, ಪರಿರಗಳನ್ನು ಉಚಿತವಾಗಿ ಒದಗಿಸಿದ್ದಾರೆ.