×
Ad

ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ರಾತ್ರಿ ಪಾರ್ಟಿ ಆರೋಪ: ಸಿಎಸ್‌ಪಿ ಪೊಲೀಸರಿಂದ ಕಾರ್ಯಾಚರಣೆ

Update: 2020-05-10 20:36 IST

ಉಡುಪಿ, ಮೇ 10: ಕೋವಿಡ್- 19 ಲಾಕ್‌ಡೌನ್ ಮಧ್ಯೆ ನಿಯಮ ಉಲ್ಲಂಘಿಸಿ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಮೇ 9ರಂದು ತಡರಾತ್ರಿ ಪಾರ್ಟಿ ನಡೆಯುತ್ತಿದ್ದ ಆರೋಪದಲ್ಲಿ ಮಲ್ಪೆ ಕರಾವಳಿ ಕಾವಲು ಪಡೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ರಾತ್ರಿ ದ್ವೀಪದಲ್ಲಿ ಉಳಿದುಕೊಂಡಿದ್ದ ಮಲ್ಪೆ ಅಭಿವೃದ್ಧಿ ಸಮಿತಿಯ ನಿವಾರ್ಹಕ ಸಹಿತ ಏಳು ಮಂದಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ಸಮಿತಿಯ ಟೆಂಡರ್ ನಿಯಮಗಳ ಉಲ್ಲಂಘನೆ ಹಾಗೂ ಲೌಕ್‌ಡೌನ್ ಸಂದರ್ಭದಲ್ಲಿ ದ್ವೀಪದಲ್ಲಿ ರಾತ್ರಿ ತಂಗಿರುವ ಮಲ್ಪೆ ಅಭಿವೃದ್ಧಿ ಸಮಿತಿಯ ನಿರ್ವಾಹಕ ಕುಕ್ಕಿಕ್ಕಟ್ಟೆಯ ಸುದೇಶ್ ಶೆಟ್ಟಿ(35), ದೇವಾನಂದ, ನಂದಕಿಶೋರ ಕೆ.ಆರ್., ಸಚಿನ್ ವೈ.ಕುಮಾರ್, ಪಾಂಡುರಂಗ ಪಿ.ಕುಂದರ್, ಸಚಿನ್ ಹಾಗೂ ರಾಘವ ಎಂಬವರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಮಿತಿಯ ಅಧ್ಯಕ್ಷ ರಾಗಿರುವ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಕರಾವಳಿ ಕಾವಲು ಪಡೆಯ ಎಸ್ಪಿ ಆರ್.ಚೇತನ್ ವರದಿ ಸಲ್ಲಿಸಿದ್ದಾರೆ.

ಸೈಂಟ್ ಮೇರಿಸ್ ದ್ವೀಪದಲ್ಲಿ ಶನಿವಾರ ರಾತ್ರಿ ವೇಳೆ ದೀಪ ಉರಿಯುವು ದನ್ನು ತೀರದಲ್ಲಿ ಗಮನಿಸಿದ ಸ್ಥಳೀಯರು, ಈ ಬಗ್ಗೆ ಮಲ್ಪೆ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸುಮಾರು 11.30ರ ಸುಮಾರಿಗೆ ಮಲ್ಪೆ ಸಿಎಸ್‌ಪಿ ಠಾಣಾಧಿಕಾರಿ ರಾಘವೇಂದ್ರ ಕಾಂಡಿಕೆ ಮತ್ತು ಸಿಬ್ಬಂದಿ ಯವರು ಇಂಟರ್‌ಸೆಪ್ಟರ್ ಗಸ್ತು ಬೋಟಿನಲ್ಲಿ ದ್ವೀಪಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಅಲ್ಲಿ ಹನುಮ ವಿಠೋಬ ಎಂಬ ಹೆಸರಿನ ಬೋಟಿನಲ್ಲಿ ತೆರಳಿರುವ ಈ ಏಳು ಮಂದಿ ರಾತ್ರಿ ವಾಸ್ತವ್ಯ ಹೂಡಿರುವುದು ಕಂಡುಬಂದಿದೆ. ಇವರೆಲ್ಲ ತೀರದಲ್ಲಿರುವ ಪ್ರವಾಸಿ ಬೋಟುಗಳ ಜೆಟ್ಟಿಯ ಸಮೀಪ ಎರಡು ಕಾರುಗಳನ್ನು ನಿಲ್ಲಿಸಿ ಬೋಟಿನಲ್ಲಿ ತೆರಳಿರುವುದಾಗಿ ಮೂಲಗಳು ತಿಳಿಸಿವೆ. ಇದರಲ್ಲಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಕೂಡ ಇದ್ದರು ಎಂಬ ಆರೋಪ ಕೇಳಿ ಬಂದಿವೆ. ಸ್ಥಳದಲ್ಲಿ ಪಾರ್ಟಿ ಮಾಡಿರುವ ಆರೋಪಕ್ಕೆ ಪುಷ್ಠಿ ನೀಡುವಂತೆ ಅಡುಗೆ ವಾಡಿರುವ ಪಾತ್ರೆಗಳು ಕಂಡುಬಂದಿವೆ.

ಬಳಿಕ ಈ ಏಳು ಮಂದಿಯನ್ನು ಪೊಲೀಸರು ನಸುಕಿನ ವೇಳೆ 3.15ರ ಸುಮಾರಿಗೆ ಮಲ್ಪೆ ಸಿಎಸ್‌ಪಿ ಠಾಣೆಗೆ ಕರೆದುಕೊಂಡು ಬಂದಿದ್ದು, ಮೇ 10 ಬೆಳಗ್ಗೆ ಎಲ್ಲರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಕುರಿತು ಸ್ಥಳೀಯ ವಡಬಾಂಡೇಶ್ವರ ನಗರಸಭಾ ಸದಸ್ಯ ಯೋಗೀಶ್ ಸಾಲಿಯಾನ್ ಠಾಣೆಗೆ ಲಿಖಿತ ದೂರು ನೀಡಿದ್ದು, ಇವರ ವಿರುದ್ದ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

'ಸಾರ್ವಜನಿಕರಿಗೆ ರಾತ್ರಿ 7ರಿಂದ ಬೆಳಗ್ಗೆ 7 ಗಂಟೆಯವರೆಗೆ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳುವುದು ಮತ್ತು ರಾತ್ರಿ ಅಲ್ಲಿ ವಾಸ್ತವ್ಯ ಹೂಡುವುದನ್ನು ಜಿಲ್ಲಾಡಳಿತ ನಿಷೇಧಿಸಿದೆ. ‘ಮಳೆಗಾಲ ಆರಂಭವಾಗುವುದರಿಂದ ದ್ವೀಪದಲ್ಲಿರುವ ಸಮಿತಿಗೆ ಸಂಬಂಧಿ ಸಿದ ಪರಿಕರಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದು, ವಾಪಾಸ್ಸು ಮರಳುವಾಗ ಅಲೆಯ ಅಬ್ಬರ ಹೆಚ್ಚಾದ ಕಾರಣ ನಾವೆಲ್ಲ ಇಲ್ಲಿಯೇ ಉಳಿದು ಕೊಂಡಿದ್ದೆವು. ಅದು ಬಿಟ್ಟು ಅಲ್ಲಿ ಯಾವುದೇ ಪಾರ್ಟಿ ನಡೆದಿಲ್ಲ. ಇದೆಲ್ಲ ಸುಳ್ಳು ಆರೋಪ ಆಗಿದೆ ಮತ್ತು ಕೇವಲ ವದಂತಿಯಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಲಿ. ತಪ್ಪು ಕಂಡು ಬಂದರೆ ಕಾನೂನು ಕ್ರಮ ತೆಗೆದುಕೊಳ್ಳಲಿ’
-ಸುದೇಶ್ ಶೆಟ್ಟಿ, ನಿರ್ವಾಹಕರು, ಮಲ್ಪೆಬೀಚ್ ಅಭಿವೃದ್ಧಿ ಸಮಿತಿ.

‘ದ್ವೀಪದಲ್ಲಿ ಪಾರ್ಟಿ ಮಾಡುತ್ತಿರುವ ಕುರಿತ ದೂರಿನ ಹಿನ್ನೆಲೆಯಲ್ಲಿ ನಮ್ಮ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಅಲ್ಲಿ ಏಳು ಮಂದಿ ಇರುವುದು ಕಂಡುಬಂದಿತ್ತು. ಅವರನ್ನು ರವಿವಾರ ನಸುಕಿನ ವೇಳೆ 3ಗಂಟೆ ಸುಮಾರಿಗೆ ಕರೆದುಕೊಂಡು ಬಂದು ವಿಚಾರಣೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಇವರ ವಿರುದ್ದ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ’
-ಆರ್.ಚೇತನ್, ಎಸ್ಪಿ, ಕರಾವಳಿ ಕಾವಲು ಪಡೆ.

'ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದಿರುವ ಘಟನೆಯ ಬಗ್ಗೆ ಕರಾವಳಿ ಕವಾಲು ಪಡೆಯ ಎಸ್ಪಿಯವರು ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಆ ವರದಿ ಯನ್ನು ಪರಿಶೀಲಿಸಿ, ಅದರಲ್ಲಿ ಇವರು ನಿಯಮ ಉಲ್ಲಂಘನೆ ಮಾಡಿರುವುದು ಕಂಡುಬಂದರೆ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು'.
-ಜಿ.ಜಗದೀಶ್, ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು, ಮಲ್ಪೆ ಅಭಿವೃದ್ಧಿ ಸಮಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News