×
Ad

ಕೊರೋನ: ವೈದ್ಯಕೀಯ ತಂಡದ ಸಭೆ; ಮಧ್ಯಂತರ ವರದಿ ಮಂಡನೆ

Update: 2020-05-11 23:11 IST

ಮಂಗಳೂರು, ಮೇ 11: ದ.ಕ. ಜಿಲ್ಲೆಯಲ್ಲಿ ಕಂಡು ಬಂದ ಕೊರೋನ ಪ್ರಕರಣಗಳ ಮೂಲ ಪತ್ತೆ ಹಿನ್ನೆಲೆಯಲ್ಲಿ ತಜ್ಞ ವೈದ್ಯಕೀಯ ತಂಡದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಸಭೆ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ,  ಜನರಲ್ಲಿ ಸಂಶಯ ನಿವಾರಣೆ ಆಗತ್ಯ ಇರುವುದರಿಂದ, ಸೋಂಕು ಮೂಲ ಪತ್ತೆ ಅನಿವಾರ್ಯವಾಗಿದೆ. ಇದರ ಬಗ್ಗೆ ಮತ್ತಷ್ಟು ವಿವರಣೆ ಪಡೆಯಬೇಕೆಂದು ಸೂಚಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ಮಾತನಾಡಿ, ಬಂಟ್ವಾಳ, ಪಡೀಲ್‌ನ ಫಸ್ಟ್ ನ್ಯೂರೋ ಹಾಗೂ ಬೋಳೂರು ಪ್ರಕರಣಗಳಿಗೆ ಸಂಬಂಧಿಸಿದಂತೆ 1000ಕ್ಕೂ ಅಧಿಕ ಮಂದಿಯ ಗಂಟಲ ದ್ರವ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 17  ಖಚಿತ ಪ್ರಕರಣಗಳು ಕಂಡುಬಂದಿದ್ದು, ಈ ಪೈಕಿ 8 ಬಂಟ್ವಾಳ, 3 ಫಸ್ಟ್ ನ್ಯೂರೋ ಹಾಗೂ 6 ಬೋಳೂರು ಪ್ರದೇಶಕ್ಕೆ ಸಂಬಂಧಿಸಿದೆ ಎಂದರು.

ಫಸ್ಟ್ ನ್ಯೂರೋ ಆಸ್ಪತ್ರೆಯ ಸಿಬ್ಬಂದಿಯೊಬ್ಬರಿಗೆ ಪಾಸಿಟಿವ್ ಬಂದ ಮೇಲೆ ಅವರ ಸಂಪರ್ಕದಲ್ಲಿದ್ದ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.  ಫಸ್ಟ್ ನ್ಯೂರೋ  ಆಸ್ಪತ್ರೆಯಲ್ಲಿ ಕೇರಳ ರಾಜ್ಯದಿಂದಲೂ ಹಲವಾರು ಮಂದಿ ಒಳರೋಗಿ, ಹೊರರೋಗಿಯಾಗಿ ಚಿಕಿತ್ಸೆ ಪಡೆದು, ಬಿಡುಗಡೆಯಾಗಿ ತೆರಳಿದ್ದಾರೆ. ಇವರ ಗಂಟಲ ದ್ರವ ತಪಾಸಣೆ ಅಗತ್ಯವಾಗಿದ್ದು, ಕೇರಳ ಸರಕಾರದ ಜತೆ ಸಂಪರ್ಕಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದರು.

ಅದೇ ರೀತಿ ಚಿಕ್ಕಮಗಳೂರು ಹಾಗೂ ಮಡಿಕೇರಿ ಜಿಲ್ಲೆಗಳಿಂದಲೂ ಈ ಆಸ್ಪತ್ರೆಗೆ ಹಲವಾರು ರೋಗಿಗಳು ದಾಖಲಾಗಿದ್ದು, ಮಡಿಕೇರಿ ಜಿಲ್ಲೆಯ ರೋಗಿಗಳ ವರದಿ ನೆಗೆಟಿವ್ ಆಗಿರುತ್ತದೆ ಎಂದರು.  ದ.ಕ. ಜಿಲ್ಲೆಯಲ್ಲಿ 4398 ಗಂಟಲ ಮಾದರಿಯನ್ನು ಪರೀಕ್ಷೆ ಪಡಿಸಲಾಗಿದ್ದು ಈ ಪೈಕಿ 31 ಖಚಿತ ಪ್ರಕರಣಗಳಿವೆ. ಸೋಂಕು ಮೂಲ ಪತ್ತೆ ಸಂಬಂಧ ವರದಿ ಸಲ್ಲಿಸಲು ಕೇರಳದಿಂದ ಈ ಆಸ್ಪತ್ರೆಗೆ  ಬಂದ ರೋಗಿಗಳ ತಪಾಸಣಾ  ವರದಿ ಬಂದ ಬಳಿಕವಷ್ಟೇ ಸೂಕ್ತ ನಿರ್ಣಯಕ್ಕೆ ಬರಲು ಸಾಧ್ಯ. ಈ ಹಿನ್ನಲೆಯಲ್ಲಿ ವರದಿ ಮಂಡಿಸಲು ಕಾಲಾವಕಾಶದ ಅಗತ್ಯವಿದೆ ಎಂದು ಹೇಳಿದರು.

ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಸಿಇಒ ಡಾ. ಸೆಲ್ವಮಣಿ, ತಜ್ಞ ವೈದ್ಯಕೀಯ ತಂಡದ ಸದಸ್ಯರಾದ ಡಾ. ಜಾನ್, ಡಾ. ಸುಚಿತ್ರಾ ಶೆಣೈ, ಡಾ. ಪ್ರಶಾಂತ್ ಮಾರ್ಲ, ಡಾ. ಸಂದೀಪ್ ರೈ, ಡಾ. ಅಣ್ಣಯ್ಯ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News