×
Ad

ಪಿಪಿಪಿ ಅಡಿ ಬಸ್ ನಿಲ್ದಾಣಕ್ಕೆ ಡಿವೈಎಫ್‌ಐ ವಿರೋಧ

Update: 2020-05-15 22:15 IST

ಮಂಗಳೂರು, ಮೇ 15: ಸ್ಮಾರ್ಟ್ ಸಿಟಿ, ಎಡಿಬಿ ಸಾಲ, ರಾಜ್ಯ ಸರಕಾರದ ಅನುದಾನ ಸಹಿತ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಹಲವು ಅವಕಾಶಗಳಿದ್ದರೂ ಕೂಡ ಖಾಸಗಿ ಲಾಬಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಖಾಸಗಿ-ಸರಕಾರಿ ಪಾಲುದಾರಿಕೆ (ಪಿಪಿಪಿ)ಯಡಿ ಮಂಗಳೂರು ಸಾರ್ವಜನಿಕ ಸಾರಿಗೆ ಕೇಂದ್ರ (ಬಸ್ ತಂಗುದಾಣ) ನಿರ್ಮಿಸಲು ರಾಜ್ಯ ಸಚಿವ ಸಂಪುಟ ಅವಕಾಶ ನೀಡಿರುವುದನ್ನು ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿ ತೀವ್ರವಾಗಿ ವಿರೋಧಿಸಿದೆ. ರಾಜ್ಯ ಸರಕಾರ ಈ ಜನವಿರೋಧಿ ತೀರ್ಮಾನವನ್ನು ತಕ್ಷಣ ಕೈ ಬಿಟ್ಟು ನಗರ ಪಾಲಿಕೆ ಅಡಿಯಲ್ಲಿಯೇ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಅಗ್ರಹಿಸಿದೆ.

ಪಂಪ್‌ವೆಲ್‌ನಲ್ಲಿ ಸುಸಜ್ಜಿತ ಬಸ್ಸು ನಿಲ್ದಾಣ ಸ್ಥಾಪನೆಯನ್ನು ಡಿವೈಎಫ್‌ಐ ಬೆಂಬಲಿಸುತ್ತದೆ. ಮೂಲಭೂತ ಸೌಲಭ್ಯಗಳ ನಿರ್ಮಾಣ ಖಾಸಗಿ ಲಾಬಿಗಳ ಸಂಪತ್ತು ಹೆಚ್ಚಿಸುವ ಹಿಡನ್ ಅಜೆಂಡಾ ಹೊಂದಿರಬಾರದು. ಮಂಗಳೂರಿನ ಕೇಂದ್ರ ಮಾರುಕಟ್ಟೆ, ಹಲವು ಉಪ ಮಾರುಕಟ್ಟೆಗಳು ಖಾಸಗಿ, ಸಾರ್ವಜನಿಕ ಸಹಭಾಗಿತ್ವದಡಿ ನಿರ್ಮಾಣಗೊಳ್ಖುತ್ತಿದೆ. ಜಲಸಿರಿ ಹೆಸರಿನಲ್ಲಿ ಕುಡಿಯುವ ನೀರು ಯೋಜನೆ ಖಾಸಗೀಕರಣ ಗೊಳ್ಳುತ್ತಿದೆ. ಕಸ ಸಂಗ್ರಹ ಖಾಸಗೀಕರಣಗೊಂಡಿದೆ. ಎರಡು ಹಂತಗಳಲ್ಲಿ 360 ಕೋ.ರೂ. ಮತ್ತು 750 ಕೋ.ರೂ.ಗಳನ್ನು ವಿದೇಶಿ ಎಡಿಬಿ ಬ್ಯಾಂಕ್‌ನಿಂದ ಸಾಲ ಪಡೆದು ನಗರಪಾಲಿಕೆ ಪೂರ್ಣವಾಗಿ ಎಡಿಬಿ ಹಿಡಿತಕ್ಕೆ ಸಿಲುಕಿದೆ. ಸ್ಮಾರ್ಟ್ ಸಿಟಿ ಯೋಜನೆಯ ಹೆಸರಿನಲ್ಲಿ ಅನಗತ್ಯ ನಿರ್ಮಾಣಗಳಿಗೆ ಕೋಟ್ಯಂತರ ಹಣ ದುರುಪಯೋಗಗೊಳ್ಳುತ್ತಿದೆ. ತಲಾ 12 ಲಕ್ಷ ರೂ.ವೆಚ್ಚದ ಸರಣಿ ಬಸ್ ತಂಗುದಾಣಗಳನ್ನು ಮಳೆ, ಬಿಸಿಲಿನಿಂದ ರಕ್ಷಣೆ ನೀಡಲಾರದ ರೀತಿ ನಿರ್ಮಿಸಿ ವ್ಯರ್ಥ ಗೊಳಿಸಲಾಗಿದೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನಪರವಾದ ಯಾವ ಯೋಜನೆಗಳೂ ಜಾರಿಗೊಳ್ಳುತ್ತಿಲ್ಲ. ಈಗ ಕೇಂದ್ರ ಬಸ್ ತಂಗುದಾಣವೂ ಖಾಸಗಿ, ಸರಕಾರಿ ಸಹಭಾಗಿತ್ವದಡಿ ನಿರ್ಮಾಣಗೊಂಡರೆ ನಗರ ಪಾಲಿಕೆಯಲ್ಲಿ ಎಲ್ಲವೂ ಖಾಸಗಿ ಪಾಲಾದಂತಾಗುತ್ತದೆ. ಪಾಲಿಕೆಯ ಚುನಾಯಿತ ಸದಸ್ಯರು, ಆಡಳಿತವನ್ನು ವಿಶ್ವಾಸಕ್ಕೆ ಪಡೆಯದೆ ಇದೆಲ್ಲವನ್ನು ಮಾಡುವುದಾದರೆ ಪಾಲಿಕೆಯ ಕೌನ್ಸಿಲ್ ಯಾಕೆ ಬೇಕು ಎಂದು ಡಿವೈಎಫ್‌ಐ ಪ್ರಶ್ನಿಸಿದೆ.

445 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಆಧುನಿಕ ಬಸ್ ತಂಗುದಾಣವು ಶಾಪಿಂಗ್ ಮಾಲ್, ಕಚೇರಿ ಸಂಕೀರ್ಣ, ಬಹುಮಹಡಿ ಪಾರ್ಕಿಂಗ್ ಸ್ಥಳಗಳನ್ನು ಹೊಂದಿದೆ. ಆದರೆ ನಿರ್ಮಾಣದ ನಂತರ 40 ವರ್ಷಗಳ ಕಾಲ ದೀರ್ಘ ಅವಧಿಗೆ ಇಡೀ ಸಾರಿಗೆ ಕೇಂದ್ರ ಹೂಡಿಕೆ ಮಾಡಿದ ಖಾಸಗಿ ಕಂಪೆನಿಯ ಒಡೆತನಕ್ಕೆ ಸಿಲುಕುತ್ತದೆ. 40 ವರ್ಷಗಳ ನಂತರ ಕಟ್ಟಡದ ಬಾಳಿಕೆ ಅವಧಿ, ನವೀಕರಣ ವಿಸ್ತರಣೆ ಮುಂತಾದ ಕಾರಣಕ್ಕೆ ಮತ್ತೆ ಖಾಸಗಿಯವರ ಲೀಸ್ ನವೀಕರಣಗೊಳ್ಳುತ್ತದೆಯೇ ಹೊರತು ನಗರ ಪಾಲಿಕೆಯ ಒಡೆತನಕ್ಕೆ ಯಾವತ್ತೂ ಮರಳುವುದಿಲ್ಲ. ಇದು ಪಿಪಿಪಿ ಅಡಿ ನಿರ್ಮಾಣಗೊಳ್ಳುವ ಟೋಲ್ ರಸ್ತೆಯ ಮಾದರಿಯಾಗಿದ್ದು, ಲೀಸ್ ನವೀಕರಣಕ್ಕೆ ಕೊನೆಯೆಂಬುದು ಇರುವುದಿಲ್ಲ. ಇದು ಪೂರ್ಣ ವಾಗಿ ಸರಕಾರಿ ಭೂಮಿ,ಸಂಪತ್ತಿನಲ್ಲಿ ಖಾಸಗಿಯವರ ತಿಜೋರಿ ತುಂಬಿಸುವ ಯೋಜನೆಯಾಗಿದೆ ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News