ದ.ಕ. ಜಿಲ್ಲೆ : ಮೇ 18ರಿಂದ ಡೆಂಟಲ್ ಕ್ಲಿನಿಕ್ಗಳಲ್ಲಿ ಚಿಕಿತ್ಸೆ ಲಭ್ಯ
ಮಂಗಳೂರು, ಮೇ 16: ಕೊರೋನ-ಲಾಕ್ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ದ.ಕ. ಜಿಲ್ಲೆಯ ದಂತ ಚಿಕಿತ್ಸಾ ಕೇಂದ್ರಗಳು ಮೇ 18ರಿಂದ ರೋಗಿಗಳ ಚಿಕಿತ್ಸೆಗೆ ಲಭ್ಯವಿರುತ್ತವೆ ಎಂದು ಇಂಡಿಯನ್ ಡೆಂಟಲ್ ಅಸೋಸಿಯೇಶನ್ ದ.ಕ.ಜಿಲ್ಲಾ ಘಟಕ ಪ್ರಕಟನೆಯಲ್ಲಿ ತಿಳಿಸಿದೆ.
ಚಿಕಿತ್ಸೆಗೆ ಬರುವ ಎಲ್ಲ ರೋಗಿಗಳು ತಪ್ಪದೆ ಆಯಾ ಚಿಕಿತ್ಸಾ ಕೇಂದ್ರದಲ್ಲಿ ಮುಂಚಿತವಾಗಿ ದೂರವಾಣಿ ಮೂಲಕ ಹೆಸರು ನೋಂದಾಯಿಸಬೇಕು. ಚಿಕಿತ್ಸಾ ಕೇಂದ್ರದ ಒಳಗಡೆ ಸುರಕ್ಷಿತ ಅಂತರವನ್ನು ಕಾಪಾಡಬೇಕು. ಮಾಸ್ಕ್ ಹಾಕಿಕೊಂಡಿರಬೇಕು. ಚಿಕ್ಕ ಮಕ್ಕಳು ಹಾಗು ವಯೋವೃದ್ಧರನ್ನು ಹೊರತುಪಡಿಸಿ ಉಳಿದವರು ಜೊತೆಯಲ್ಲಿ ಬೇರೆಯವರನ್ನು ಕರೆತರಬಾರದು. ಶೀತ, ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ ಇರುವವರು ದಂತ ಚಿಕಿತ್ಸ ಕೇಂದ್ರಕ್ಕೆ ಭೇಟಿ ನೀಡಬಾರದು. ಹೋಂ ಕ್ವಾರಂಟೈನ್ ನಲ್ಲಿ ಇರುವವರು ಕೂಡ ದಂತ ವೈದ್ಯರನ್ನು ಸಂಪರ್ಕಿಸಬಾರದು. ಚಿಕಿತ್ಸಾ ಸಮಯದಲ್ಲಿ ಯಾವುದಾದರು ರೋಗಿಗಳಲ್ಲಿ ಕೊರೋನದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆ ದಂತ ವೈದ್ಯರು ಆ ರೋಗಿಯ ಮಾಹಿತಿಯನ್ನು ಸಮೀಪದ ಕೋವಿಡ್ ಕೇಂದ್ರಕ್ಕೆ ತಿಳಿಸಲಿದ್ದಾರೆ. ಜಿಲ್ಲೆಯ ಎಲ್ಲ ದಂತ ಚಿಕಿತ್ಸಾ ಕೇಂದ್ರದ ದಂತ ವೈದ್ಯರು ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದಿಂದ ಸೂಚಿಸಲ್ಪಟ್ಟಿರುವ ಕೋವಿಡ್-19 ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಐಡಿಎ ಇದರ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.