ಉಡುಪಿ: ಗ್ರಾಪಂ ಹಾಲಿ ಸದಸ್ಯರ ಮುಂದುವರಿಕೆಗೆ ಆರ್ಜಿಪಿಆರ್ಎಸ್ ಆಗ್ರಹ
ಉಡುಪಿ, ಮೇ 18: ಕೋವಿಡ್-19 ಸೋಂಕಿನ ಕಾರಣ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳ ಜೊತೆಗೆ ಲಾಕ್ಡೌನ್ನಿಂದ ಜನಜೀವನ ಸಹ ಅಸ್ತವ್ಯಸ್ತ ಗೊಂಡಿದೆ.ಇದರ ಪರಿಣಾಮ ಚುನಾವಣಾ ಆಯೋಗ ಗ್ರಾಮ ಪಂಚಾಯತ್ ಪ್ರತಿನಿಧಿಗಳ ಆಯ್ಕೆಗಾಗಿ ಯಾವುದೇ ಚುನಾವಣಾ ಪ್ರಕ್ರಿಯೆಯನ್ನು ಇದು ವರೆಗೆ ಮಾಡಿಲ್ಲ. ಕೋವಿಡ್-19 ಸೋಂಕಿನ ಪ್ರಯುಕ್ತ ಗ್ರಾಪಂ ಚುನಾವಣೆ ಯನ್ನು 6 ತಿಂಗಳ ಕಾಲ ಮುಂದೂಡುವುದು ಅನಿವಾರ್ಯ ಎಂದು ಸರಕಾರ ಈಗಾಗಲೇ ತಿಳಿಸಿದೆ. ಹೀಗಾಗಿ ಈಗ ಇರುವ ಹಾಲಿ ಗ್ರಾಪಂ ಸದಸ್ಯರನ್ನೇ ಮುಂದಿನ ಚುನಾವಣೆವರೆಗೆ ಮುಂದುವರಿಸಬೇಕು ಎಂದು ಉಡುಪಿ ಜಿಲ್ಲಾ ರಾಜೀವ್ಗಾಂಧಿ ಪಂಚಾಯತ್ರಾಜ್ ಸಂಘಟನೆ ಆಗ್ರಹಿಸಿದೆ.
ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಗಾರಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕಳುಹಿಸಿದ ಮನವಿ ಯಲ್ಲಿ ಸಂಘಟನೆ ಈ ಒತ್ತಾಯ ಮಾಡಿದೆ. ಆದರೆ ಇದೇ ಸಂದರ್ಭದಲ್ಲಿ ಗ್ರಾಪಂನ ಇತಿಹಾಸದಲ್ಲೆ ಪ್ರಥಮ ಬಾರಿಗೆ ಪಂಚಾಯತಿಗಳಿಗೆ ನಾಮನಿರ್ದೇಶಿತ ಸದಸ್ಯರನ್ನು ನೇಮಿಸಲು ಸಿದ್ಧತೆ ನಡೆದಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಸದಸ್ಯರನ್ನು ನೇಮಕ ಮಾಡಲಿದ್ದು ಇವರನ್ನು ಒಳಗೊಂಡ ಆಡಳಿತ ಸಮಿತಿ ಅಸ್ತಿತ್ವಕ್ಕೆ ಬರಲಿದೆ ಎಂದು ಮಾಧ್ಯಮ ಗಳು ವರದಿ ಮಾಡಿವೆ.
ಒಂದು ವೇಳೆ ಈ ಸಮಿತಿ ರಚನೆ ಆಗಿದ್ದೆ ಹೌದಾದಲ್ಲಿ ಈಗ ಆಡಳಿತದಲ್ಲಿ ಇರುವಂತಹ ಬಿಜೆಪಿ ಸರಕಾರ ಮತ್ತು ಶಾಸಕರುಗಳು ಅವರದ್ದೇ ಆದ ಕಾರ್ಯಕರ್ತರನ್ನು ಈ ಸಮಿತಿಗಳಲ್ಲಿಯಲ್ಲಿ ನೇಮಕಮಾಡಿ ಈ ಸಮಿತಿಯನ್ನು ರಾಜಕೀಯಕರಣಗೊಳಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಸಂಘಟನೆ ಕಳವಳ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ 6029 ಗ್ರಾಪಂಗಳದ್ದು, ಸುಮಾರು 95,168 ಸದಸ್ಯರು ಈ ಗ್ರಾಪಂಗಳನ್ನು ಪ್ರತಿನಿಧಿಸುತ್ತಿದ್ದಾರೆ. ಗ್ರಾಪಂಗಳ ಅವಧಿ ಮೇ 15ರಿಂದ ಜೂನ್ 30ರ ಒಳಗೆ ಪೂರ್ಣಗೊಳ್ಳುತ್ತದೆ. ಪ್ರಸ್ತುತ ಅಧಿಕಾರದಲ್ಲಿರುವ ಗ್ರಾಪಂ ಪ್ರತಿನಿಧಿಗಳು ಬರ, ಪ್ರವಾಹದಂತಹ ಕಠಿಣ ಪರಿಸ್ಥಿತಿ ಹಾಗೂ ಕೋಡ್ 19 ಸೊಂಕಿನ ಸಂದರ್ಭದಲ್ಲಿಯೂ ಗ್ರಾಮೀಣ ಅಭಿವೃದ್ಧಿಯನ್ನು ಸುಸೂತ್ರವಾಗಿ ನಿಭಾಯಿಸುವ ಮೂಲಕ ಉತ್ತಮವಾಗಿ ಕೆಲಸ ಮಾಡಿ ದ್ದಾರೆ. ಗ್ರಾಮೀಣ ಭಾಗದಲ್ಲಿ ಸೋಂಕು ತೀವ್ರವಾಗಿ ಹರಡುತಿ್ತಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಗ್ರಾಪಂ ಚುನಾವಣೆಗಳು ಪಕ್ಷಾತೀತವಾಗಿ ನಡೆಯುತ್ತಿದ್ದು ಈಗಿನ ಹಾಲಿ ಸದಸ್ಯರು ಪಕ್ಷದ ಚಿಹ್ನೆಯಿಂದ ಆಯ್ಕೆ ಆದವರಲ್ಲ ಹಾಗೂ ನೇರ ಜನರಿಂದ ಆಯ್ಕೆಯಾಗಿ ಬಂದಿರುವ ಜನಪ್ರತಿನಿಧಿಗಳಾಗಿರುವುದರಿಂದ ಹಾಲಿ ಇರುವ ಗ್ರಾಪಂ ಸದಸ್ಯರನ್ನೇ ಮುಂದುವರಿಸಬೇಕು. ಗ್ರಾಪಂಗಳ ಕಾರ್ಯ ವೈಖರಿ ಕುರಿತು ಏನೇನು ತಿಳುವಳಿಕೆ ಇಲ್ಲದವರನ್ನು ಆಡಳಿತ ಸಮಿತಿಗೆ ಸೇರಿಸಿದರೆಕೊರೊನಾದಂತಹಾ ಭೀಕರ ಬಿಕ್ಕಟ್ಟನ್ನು ನಿಭಾಯಿಸಲು ಕಷ್ಟವಾಗುತ್ತದೆ. ಇದರ ಜೊತೆಗೆ ಗ್ರಾಮೀಣ ಭಾಗದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹೀಗಾಗಿ ಯಾವುದೇ ಕಾರಣಕ್ಕೂ ಹೊಸ ಸಮಿತಿ ರಚನೆ ಮಾಡುವ ಪ್ರಯತ್ನ ಮಾಡಬಾರದು. ಈಗ ಇರುವ ಹಾಲಿ ಗ್ರಾಪಂ ಸದಸ್ಯರುಗಳನ್ನು ಮುಂದಿನ ಚುನಾವಣೆ ನಡೆಸುವವರೆಗೆ ಮುಂದುವರಿಸುವ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಬೇಕು ಎಂಬ ಆಗ್ರಹವನ್ನು ಸಂಘಟನೆ ಗೌರವ ಸಲಹೆಗಾರರಾದ ವೆರೋನಿಕಾ ಕರ್ನೇಲಿಯೋ, ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ಮಾಡಿದ್ದಾರೆ.