ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸಿಪಿಐ ಕೇಂದ್ರಕ್ಕೆ ಮನವಿ
ಮಂಗಳೂರು, ಮೇ 19: ಕೇಂದ್ರ ಸರಕಾರದ ಜನವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಸಿಪಿಐ ರಾಷ್ಟ್ರೀಯ ಮಂಡಳಿಯ ಕರೆಯಂತೆ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಮಂಗಳವಾರ ದ.ಕ.ಜಿಲ್ಲಾಧಿಕಾರಿಯ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್ 19ರ ವಿರುದ್ಧ ಸರಕಾರ ಘೋಷಿಸಿರುವ ಲಾಕ್ಡೌನ್ ಸಮಯದಲ್ಲಿ ಸರಕಾರ ಬಡವರ ಮತ್ತು ಕಾರ್ಮಿಕರ ಬವಣೆಗಳನ್ನು ನಿರ್ಲಕ್ಷಿ ಸುತ್ತಿದೆ. ಅಸಂಘಟಿತ ಕಾರ್ಮಿಕರು ಈ ಲಾಕ್ಡೌನ್ ಸಮಯದಲ್ಲಿ ಕೆಲಸವಿಲ್ಲದ ಕಾರಣ ಜೀವನೋಪಾಯಕ್ಕಾಗಿ ಪರದಾಡುತ್ತಿದ್ದು ಅವರಿಗೆ ಪರಿಹಾರ ಒದಗಿಸುವುದರಲ್ಲಿ ಸರಕಾರ ವಿಫಲವಾಗಿದೆ. ವಲಸೆ ಕಾರ್ಮಿಕರು ಊರಿಗೆ ಮರಳಲು ಸೂಕ್ತ ರೈಲು ಅಥವಾ ವಾಹನ ಒದಗಿಸುತ್ತಿಲ್ಲ, ರೇಷನ್ ಮತ್ತು ವಸತಿ ಸಿಗುತ್ತಿಲ್ಲ. ಲಾಕ್ಡೌನ್ ದುರುಪಯೋಗ ಪಡಿಸಿ ಕೆಲ ಸರಕಾರಗಳು ಕಾರ್ಮಿಕ ಕಾನೂನುಗಳನ್ನು ಮಾಲಕರ ಪರವಾಗಿ ಬದಲಾಯಿಸುತ್ತಿವೆ ಹಾಗೂ 8 ಗಂಟೆಗಳ ಕೆಲಸದ ಹಕ್ಕನ್ನು ಕಸಿದು ದಿನಕ್ಕೆ 12 ಗಂಟೆ ಕೆಲಸ ಮಾಡಬೇಕೆಂದು ಕಾನೂನು ತರಲಾಗಿದೆ ಎಂದು ಮನವಿಯಲ್ಲಿ ತಿಳಿಸಿದೆ.
ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಚ್ವಿ ರಾವ್, ಪಕ್ಷದ ನಾಯಕರಾದ ನಾಗೇಶ್ ಕೆ, ಜಗತ್ ನಿಯೋಗದಲ್ಲಿದ್ದರು.