ಬಡ ಜನತೆಗೆ ಸಹಾಯ ಮಾಡುವ ಮೂಲಕ ಈದ್ ಆಚರಿಸಿ : ಉಡುಪಿ ಜಿಲ್ಲಾ ಖಾಝಿ
ಉಡುಪಿ, ಮೇ 21: ಕೊರೋನ ಭೀತಿಯ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲರೂ ಈದುಲ್ ಫಿತ್ರ್ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಬೇಕು. ಈ ಮಧ್ಯೆ ನೆರೆಮನೆಯವರ ಬಗ್ಗೆ ಗಮನ ಇರಿಸಬೇಕು. ಸಾಧ್ಯವಾದ್ದಷ್ಟು ಅರ್ಹರಿಗೆ ಸಹಾಯ ಸಹಕಾರಗಳನ್ನು ನೀಡಬೇಕು. ಈ ರೀತಿ ಈದ್ ಹಬ್ಬ ಆಚರಣೆ ಮಾಡುವುದು ಸುನ್ನತ್ ಆಗಿದೆ ಎಂದು ಉಡುಪಿ ಜಿಲ್ಲಾ ಖಾಝಿ ಅಲ್ ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ತಮ್ಮ ಈದ್ ಸಂದೇಶ ದಲ್ಲಿ ತಿಳಿಸಿದ್ದಾರೆ.
ಲೋಕವೇ ದುಃಖದಲ್ಲಿರುವಾಗ ಹಬ್ಬವನ್ನು ಅದ್ದೂರಿಯಿಂದ ಆಚರಿಸುವುದು ಸರಿಯಲ್ಲ. ಮನೆಗಳಲ್ಲಿ ಈದ್ ನಮಾಝ್ ನಿರ್ವಹಿಸಿ, ಬಡವರಿಗೆ ಸಹಾಯ ಸಹಕಾರವನ್ನು ನೀಡಬೇಕು. ಈವರೆಗೆ ಅಳವಡಿಸಿಕೊಂಡಿರುವ ಕಾನೂನುಗಳನ್ನು ಮುಂದುವರಿಸಬೇಕು. ಈ ಕಠಿಣ ಸಂದರ್ಭದಲ್ಲಿ ಬಂದಿರುವ ಈದುಲ್ ಫಿತ್ರ್ ಹಬ್ಬವನ್ನು ಆದಷ್ಟು ಸರಳವಾಗಿ, ಕುಟುಂಬ ಸದಸ್ಯರ ಜೊತೆಗೆ ಆಚರಿಸಬೇಕು.
ದುಂದು ವೆಚ್ಚವಿಲ್ಲದೆ, ಅನಗತ್ಯಗಳಲ್ಲಿ ತೊಡಗದೆ, ಪ್ರಯಾಣ ಇತ್ಯಾದಿಗಳಿಗೆ ಹೋಗದೆ, ಆರೋಗ್ಯ ಇಲಾಖೆಯ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಧಾರ್ಮಿಕ ಕೇಂದ್ರಗಳು ತೆರೆದು ಮೊದಲಿನಂತೆ ಸುಗಮವಾಗಿ ನಡೆಯಲು ಕೋವಿಡ್-19 ನಿಂದ ಮುಕ್ತಿ ಹೊಂದಲು ಪ್ರಾರ್ಥಿಬೇಕು ಎಂದು ಅವರು ತಿಳಿಸಿದ್ದಾರೆ.