ವಿಕಲಚೇತನರಿಗೆ ಸಮುದಾಯ ಆಧಾರಿತ ಔದ್ಯೋಗಿಕ ತರಬೇತಿ ಉದ್ಘಾಟನೆ

Update: 2020-05-21 16:20 GMT

ಉಡುಪಿ, ಮೇ 21: ಉಡುಪಿ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲೆಯಲ್ಲಿ ಕಾರ್ಯಾಚರಿ ಸುತ್ತಿರುವ ದಿ ಅಸೋಸಿಯೇಶನ್ಸ್ ಆಫ್ ಪೀಪಲ್ ವಿಧ್ ಡಿಸೆಬಿಲಿಟಿ(ಎಪಿಡಿ) ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ತಾಲೂಕು ಶಂಕರನಾರಾಯಣ ಗ್ರಾಪಂ ವ್ಯಾಪ್ತಿಯ ವಿಕಲಚೇತನರಿಗೆ ಬುಧವಾರ ನಡೆದ ಸಮುದಾಯ ಆಧಾರಿತ ಔದ್ಯೋಗಿಕ ತರಬೇತಿಯನ್ನು ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಚಂದ್ರ ನಾಯ್ಕ ಉದ್ಘಾಟಿಸಿದರು.

ಅಂಗವಿಕಲರಿಗೆ ಅನುಕಂಪ ಅಲ್ಲ, ಅವಕಾಶವನ್ನು ಕಲ್ಪಿಸಬೇಕಾದುದು ಪ್ರತಿ ಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಎಪಿಡಿ ಸಂಸ್ಥೆ ನಡೆಸುತ್ತಿರುವ ಈ ಕಾರ್ಯ ಶ್ಲಾಘನೀಯ. ಈ ಸಂಸ್ಥೆಯ ಮುಖಾಂತರ ಆಸಕ್ತ ಅರ್ಹ ಅಂಗವಿಕಲರಿಗೆ ಸುಮಾರು 15 ವಿಧದ ಔದ್ಯೋಗಿಕ ತರಬೇತಿಯನ್ನು ಜಿಲ್ಲೆಯ ವಿಕಲಚೇತರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಚಂದ್ರ ನಾಯ್ಕ ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಶಂಕರನಾರಾಯಣ ಗ್ರಾಪಂ ಅಧ್ಯಕ್ಷ ರವಿ ಕುಲಾಲ ಮಾತನಾಡಿ, ಅಂಗವಿಕಲರಿಗೆ ಗ್ರಾಮ ಪಂಚಾಯತ್ ವತಿಯಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಎಲ್ಲಾ ಸದಸ್ಯರ ಸಹಕಾರದೊಂದಿಗೆ ಅವರೂ ಸಹ ಸಮಾಜದ ಮುಖ್ಯ ವಾಹಿನಿಗೆ ಬರಲು ನೆರವು ನೀಡುವುದಾಗಿ ತಿಳಿಸಿದರು.

ಪ್ರಾಸ್ತಾವಿಕ ಮಾತನಾಡಿದ ಎಪಿಡಿ ಸಂಸ್ಥೆಯ ಉಡುಪಿ ಜಿಲ್ಲಾ ನೋಡಲ್ ಅಧಿಕಾರಿ ಹರೀಶ್ ಶೆಟ್ಟಿ, ಶಂಕರನಾರಾಯಣ ಗ್ರಾಪಂ ವ್ಯಾಪ್ತಿಯ 10 ಜನ ಅಂಗವಿಕಲರಿಗೆ ಒಂದು ತಿಂಗಳು ನೀಡುವ ಔದ್ಯೋಗಿಕ ತರಬೇತಿಯ ಕುರಿತು ಮಾತನಾಡಿದರು. ಅಂಗವಿಕಲರು ಸ್ವಾವಲಂಬಿ ಮತ್ತು ಸ್ವಾಭಿಮಾನದ ಜೀವನ ವನ್ನು ರೂಪಿಸಿಕೊಳ್ಳಲು ಎಪಿಡಿ ಸಂಸ್ಥೆ ಕಾರ್ಯಾಚರಿಸುತ್ತಿದೆ. 1950ರಲ್ಲಿ ಆರಂಭಗೊಂಡ ಈ ಸಂಸ್ಥೆ ಈಗವರೆಗೆ 5 ಲಕ್ಷಕ್ಕೂ ಅಧಿಕ ವಿಕಲಚೇತನರ ಸರ್ವತೋಮುಖ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದು, ನಿರುದ್ಯೋಗಿ ವಿಕಲಚೇತನ ರಿಗೆ ತರಬೇತಿ ಮತ್ತು ಉದ್ಯೋಗವನ್ನು ಉಚಿತವಾಗಿ ನೀಡಿ ಅವರ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ ಎಂದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಅಂಗವಿಕಲರಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಾಗ್ರಿಗಳನ್ನು ಎಪಿಡಿ ಸಂಸ್ಥೆಯ ವತಿಯಿಂದ ವಿತರಿಸಲಾಯಿತು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಲಜ ಹೆಗ್ಡೆ, ಪಿಡಿಒ ಶ್ವೇತಲತಾ, ಯೋಜನಾ ಸಹಾಯಕ ಗಣೇಶ್ ಮರಾಠೆ, ವಿಆರ್‌ಡಬ್ಲ್ಯೂ ವನಿತಾ, ಶ್ರೀಮತಿ ಉಪಸ್ಥಿತರಿದ್ದರು. ಎಂಆರ್‌ಡಬ್ಲ್ಯೂ ಮಂಜುನಾಥ್ ಹೆಬ್ಬಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಶೆಟ್ಟಿ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News