ದಲಿತ ಯುವಕನಿಗೆ ಥಳಿಸಿ ಮೂತ್ರ ಕುಡಿಸಿದ ದುಷ್ಕರ್ಮಿಗಳು: ಆರೋಪ

Update: 2020-05-22 10:03 GMT
Photo: thenewsminute.com

ಹೈದರಾಬಾದ್: ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಜನ್ನರಂ ಎಂಬಲ್ಲಿ ದಲಿತ ಯುವಕನೊಬ್ಬನ ಮೇಲೆ ಬರ್ಬರ ಹಲ್ಲೆ ನಡೆಸಿ ಆತನಿಗೆ ಬಲವಂತವಾಗಿ ಮೂತ್ರ ಕುಡಿಸಿದ ಘಟನೆ ವರದಿಯಾಗಿದೆ.

ಪರಿಶಿಷ್ಟ ಜಾತಿ ಎಂದು ಪರಿಗಣಿಸಲ್ಪಟ್ಟ ಮಾಳ ಸಮುದಾಯಕ್ಕೆ ಸೇರಿದ ಹದಿನೆಂಟು ವರ್ಷದ ಸಂತ್ರಸ್ತ ಯುವಕ ಹಿಂದುಳಿದ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ಆತನ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ. ಈ ಘಟನೆ ಮೇ 17ರಂದು ನಡೆದಿದೆ. ಯುವಕ ಹಾಗೂ ಯುವತಿ ನಡುವೆ ಕಳೆದೊಂದು ವರ್ಷದಿಂದ ಸಂಬಂಧವಿತ್ತೆಂದು ಯುವಕನ ಕುಟುಂಬ ಸದಸ್ಯರು ಹೇಳಿದ್ದಾರೆ.

ಮೇ 16ರಂದು ಯುವತಿ ಸಂತ್ರಸ್ತನಿಗೆ ಕರೆ ಮಾಡಿ ಪೊಂಕಲ್ ಗ್ರಾಮದ ಹೊರವಲಯದಲ್ಲಿರುವ ದೇವಳಕ್ಕೆ ಸಂಜೆ ಸುಮಾರು 6.30ಕ್ಕೆ ಬರುವಂತೆ ಹೇಳಿದ್ದಳು. ಆದರೆ ಆ ರಾತ್ರಿ ಅವರಿಬ್ಬರೂ ಮನೆಗೆ ವಾಪಸಾಗುವುದು ಸಾಧ್ಯವಾಗಿರಲಿಲ್ಲ. ಯುವತಿಯ ಕುಟುಂಬ ಸದಸ್ಯರು ಆಕೆಗಾಗಿ ಎಲ್ಲೆಡೆ ಹುಡುಕಾಡಿ ಸೋತಿದ್ದರು. ಮರುದಿನ ಯುವಕ ತನ್ನ ಸ್ನೇಹಿತ ಅಬ್ದುಲ್ ಎಂಬಾತನಿಗೆ ಕರೆ ಮಾಡಿ ತಾನಿರುವ ಸ್ಥಳ ತಿಳಿಸಿ ತಾವಿಬ್ಬರು ಹಸಿದಿರುವುದರಿಂದ ಸ್ವಲ್ಪ ನೀರು ಮತ್ತು ಬಿಸ್ಕತ್ತು ತರುವಂತೆ  ತಿಳಿಸಿದ್ದ. ಅಂತೆಯೇ ಅಬ್ದುಲ್ ಅವರನ್ನು ಭೇಟಿಯಾಗಲು ತೆರಳುತ್ತಿದ್ದಂತೆಯೇ ಆತನನ್ನು ತಡೆದ ಆರೋಪಿಗಳಾದ ಮುತ್ಯಂ ಸಾಯಿ, ಹರೀಶ್ ಗೌಡ್, ಪ್ರಶಾಂತ್ ಹಾಗೂ ಅಝ್ಮತ್ ಖಾನ್ ಆತನಿಗೆ ಥಳಿಸಿದ್ದರು, ಆರೋಪಿಗಳ ಪೈಕಿ ಹರೀಶ್ ಯುವತಿಯ ದೂರದ ಸಂಬಂಧಿಯಾಗಿದ್ದ.

ನಂತರ ಅಬ್ದುಲ್ ಹಾಗೂ ಸಂತ್ರಸ್ತನ ಇತರ ಸ್ನೇಹಿತರಿಂದ ಆತನಿರುವ ಸ್ಥಳದ ಕುರಿತು ತಿಳಿದುಕೊಂಡು ಅಲ್ಲಿಗೆ ತೆರಳಿದ ಆರೋಪಿಗಳು ಆತನಿಗೆ ಬೆಲ್ಟ್, ಕೋಲುಗಳಿಂದ ಬಾರಿಸಿ, ವಿವಸ್ತ್ರಗೊಳಿಸಿ  ಬಿಸಿಯಾದ ಕಲ್ಲಿನ ಮೇಲೆ ಮಲಗುವಂತೆ ಮಾಡಿ ಆತ ನೀರು ಬೇಕೆಂದು ಹೇಳಿದಾಗ ಮೂತ್ರ ಕುಡಿಸಿದ್ದಾರೆಂದು ಆರೋಪಿಸಲಾಗಿದೆ.

“ಕೆಳ ಜಾತಿಗೆ ಸೇರಿದ ನಿನಗೆ ಬೇರೆ ಜಾತಿಯ ಹುಡುಗಿ ಏಕೆ ಬೇಕೆಂದು” ಆರೋಪಿಗಳು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆಂದು ಆತ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

ಮರುದಿನವೇ ಯುವತಿಯ ಮನೆಯವರು ಆತನ ಮೇಲೆ ಪ್ರತಿ ದೂರು ದಾಖಲಿಸಿ ಅಪಹರಣ ಯತ್ನ ಹಾಗೂ ಅತ್ಯಾಚಾರ ಯತ್ನ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News