ಕ್ವಾರಂಟೈನಲ್ಲಿದ್ದಾಗ ಆತ್ಮಹತ್ಯೆಗೈದಿದ್ದ ಕಡಂದಲೆಯ ವ್ಯಕ್ತಿಗೆ ಕೊರೋನ ಪಾಸಿಟಿವ್
ಮಂಗಳೂರು, ಮೇ 22: ಮುಂಬೈಯಿಂದ ಬಂದು ಕಡಂದಲೆ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ 55ರ ಹರೆಯದ ವ್ಯಕ್ತಿಯ ಗಂಟಲ ದ್ರವದ ಪರೀಕ್ಷಾ ವರದಿಯು ಶುಕ್ರವಾರ ಬಂದಿದ್ದು, ಅವರಿಗೆ ಕೊರೋನ ಪಾಸಿಟಿವ್ ಇರುವುದು ದೃಢಪಟ್ಟಿವೆ.
ಕಡಂದಲೆಯ ಈ ವ್ಯಕ್ತಿಯು ತನ್ನ ಅಣ್ಣ ತಮ್ಮಂದಿರ ಜೊತೆ ಮುಂಬೈಯಲ್ಲಿ ಹೊಟೇಲ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ಇಬ್ಬರು ಸಹೋದರರ ಜೊತೆಗೆ ಮೂಡುಬಿದಿರೆಗೆ ಆಗಮಿಸಿದ್ದ ಅವರು ಬುಧವಾರ ರಾತ್ರಿ 1 ಗಂಟೆಯಿಂದ ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ನಲ್ಲಿದ್ದರು. ಆರ್ಥಿಕ ತೊಂದರೆ, ಕೋವಿಡ್ 19 ಬಗ್ಗೆ ಹೆದರಿದ್ದ ಈ ವ್ಯಕ್ತಿ ಮುಂದೇನು ಕೆಲಸ ಮಾಡುವುದೆಂದು ಗೊಂದಲದಲ್ಲಿದ್ದರು. ಅಲ್ಲದೆ ಈ ಬಗ್ಗೆ ತನ್ನ ಸಹೋದರರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಆ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು. ಗುರುವಾರ ಮುಂಜಾನೆ ಇದು ಬೆಳಕಿಗೆ ಬಂದಿತ್ತು. ಮೃತದೇಹವನ್ನು ಕೋವಿಡ್ ಪರೀಕ್ಷೆಗಾಗಿ ವೆನ್ಲಾಕ್ಗೆ ತರಲಾಗಿತ್ತು.
ಅದರಂತೆ ಶುಕ್ರವಾರ ಆತ್ಮಹತ್ಯೆಗೈದಿದ್ದ ವ್ಯಕ್ತಿಯ ಗಂಟಲಿನ ದ್ರವದ ಪರೀಕ್ಷಾ ವರದಿಯಲ್ಲಿ ಕೊರೋನ ಪಾಸಿಟಿವ್ ಕಂಡು ಬಂದಿದೆ. ಮೃತರ ಅಂತ್ಯ ಸಂಸ್ಕಾರವನ್ನು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದ ಶಿಷ್ಟಾಚಾರದಂತೆ ಬೋಳೂರಿನ ವಿದ್ಯುತ್ ಚಿತಾಗಾರದಲ್ಲಿ ವೈದ್ಯಕೀಯ ನಿಗಾದಲ್ಲಿ ನಡೆಸಲಾಗಿದೆ.