ಭಟ್ಕಳ: ಪತ್ರಕರ್ತರ ಸಂಘದಿಂದ ಈದ್ ಸೌಹಾರ್ದ ಸಭೆ

Update: 2020-05-25 18:12 GMT

ಭಟ್ಕಳ: ಪತ್ರಕರ್ತರು ಕಳೆದ 1993ರಿಂದಲೂ ಸಂಘಟಿತರಾಗಿ ಕಾರ್ಯನಿರತ ಪತ್ರಕರ್ತರ ಸಂಘವನ್ನು ಸ್ಥಾಪಿಸಿಕೊಂಡು ಸೌಹಾರ್ದವಾಗಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಇದ್ದಾರೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಹೇಳಿದರು. 

ಅವರು ಸೋಮವಾರ ನಡೆದ ಭಟ್ಕಳ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಈದ್ ಸೌಹಾರ್ದ ಸಭೆಯಲ್ಲಿ ಈದ್-ಉಲ್-ಫಿತ್ರ ಶುಭಾಶಯ ಕೋರಿ ಮಾತನಾಡುತ್ತಿದ್ದರು.

ಪತ್ರಕರ್ತರಲ್ಲಿ ಯಾವುದೇ ಜಾತಿ, ಮತ, ಪಂಥಗಳೆನ್ನುವ ಬೇಧವಿಲ್ಲ, ನಾವೆಲ್ಲರೂ ಒಂದೇ ಮನೆಯ ಸದಸ್ಯರಂತೆ ಕಳೆದ ಹಲವಾರು ವರ್ಷ ಗಳಿಂದ ಇದ್ದೇವೆ. ನಮ್ಮಲ್ಲಿ ಪ್ರತಿ ವರ್ಷವೂ ಕೂಡಾ ಪರಸ್ಪರರ ಹಬ್ಬಗಳಿಗೆ ಶುಭಾಶಯ ವಿನಿಮಯ ಮಾಡಿಕೊಳ್ಳುವ ಪರಿಪಾಠ ಕಳೆದ ಹಲವಾರು ವರ್ಷಗಳಿಂದ ನಡೆದು ಬಂದಿದ್ದು ಒಂದು ಉತ್ತಮ ಬೆಳವಣಿಗೆಯಾಗಿದೆ ಎಂದ ಅವರು ಇದೇ ರೀತಿಯಾದ ಸೌಹಾರ್ದತೆ ಮುಂದುವರಿಯಲಿ. ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ದೂರಾಗಿ ನಾವೆಲ್ಲರೂ ಉತ್ತಮ ಜೀವನ ಮಾಡುವಂತಾಗಲಿ ಎಂದು ಹಾರೈಸಿದರು.

ಜಿಲ್ಲಾ ಸಂಘದ ಕಾರ್ಯಕಾರಿಣಿ ಸದಸ್ಯ ಎಂ. ಆರ್. ಮಾನ್ವಿ ಮಾತನಾಡಿ ಈದುಲ್ ಫೀತರ್ ಹಬ್ಬವನ್ನು ನಾವು ಮನೆಯಲ್ಲಿಯೇ ಆಚರಿಸಿದ್ದೇವೆ. ಇಂತಹ ಸಂಕೀರ್ಣತೆಯಿಂದ ಕೂಡಿದ ಹಬ್ಬಗಳು ಮುಂದೇ ಯಾವ ಸಮುದಾಯಕ್ಕೂ ದೇವರು ದಯಪಾಲಿಸದೆ ಇರಲಿ ಎಂದ ಅವರು ರವಿವಾರ ಮನೆಯಲ್ಲೇ ನಡೆದ ವಿಶೇಷ ಪ್ರಾರ್ಥನೆಯಲ್ಲಿ  ಎಲ್ಲರೂ ಕೂಡಾ ದೇಶದ ಒಳಿತಿಗಾಗಿ ನಮ್ಮೆಲ್ಲರ ಏಳಿಗೆಗಾಗಿ ಪ್ರಾರ್ಥನೆ ಸಲ್ಲಿಸಿದ್ದು ಮುಂದಿನ ದಿನಗಳು ಉತ್ತಮ ದಿನಗಳಾಗಲಿ ಎಂದು ಹಾರೈಸಿದರು.

ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್ ಮಾತನಾಡಿ ನಮ್ಮಲ್ಲಿ ಪರಸ್ಪರರಲ್ಲಿ ಯಾವದೇ ರೀತಿಯ ಭಿನ್ನಾಭಿಪ್ರಾಯಗಳಿದ್ದರೆ ನಮ್ಮಲ್ಲಿಯೇ ಬಗೆಹರಿಸಿಕೊಳ್ಳೋಣ. ನಾವು ಪರಸ್ಪರ ಸೌಹಾರ್ಧತೆಯಂದ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡುತ್ತಿದ್ದೇವೆ. ಪತ್ರಕರ್ತನಾದವನು ಸದಾ ಸತ್ಯದ ಕಡೆಗೆ ಇದ್ದಾಗ ಯಾರಿಗೂ ಕೂಡಾ ತಲೆಬಾಗುವ ಪ್ರಶ್ನೆಯೇ ಬರದು ಎಂದರು.

ಸಭೆಯಲ್ಲಿ ತಾಲೂಕಾ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ, ಕಾರ್ಯದರ್ಶಿ ಮೋಹನ ನಾಯ್ಕ, ಉಪಾಧ್ಯಕ್ಷ ರಿಜ್ವಾನ್ ಗಂಗಾವಳಿ, ಖಜಾಂಚಿ ಅತಿಕುರಹ್ಮಾನ್ ಶಾಬಂದ್ರಿ, ಸಹಕಾರ್ಯದರ್ಶಿ ಪ್ರಸನ್ನ ಭಟ್ಟ, ಮಾಜಿ ಅಧ್ಯಕ್ಷ ಸತೀಶಕುಮಾರ್, ಜಿಲ್ಲಾ ಸಮಿತಿ ಸದಸ್ಯ ಫಯಾಝ್ ಮುಲ್ಲಾ, ಭವಾನಿಶಂಕರ ನಾಯ್ಕ, ಸದಸ್ಯರುಗಳಾದ ಇನಾಯತ್ ಗವಾಯಿ, ಉದಯ ನಾಯ್ಕ, ರಾಘವೇಂದ್ರ ಮಲ್ಯ, ಶೈಲೇಶ ವೈದ್ಯ, ಅತಿಕುರಹ್ಮಾನ್  ಡಾಂಗಿ, ಮೊಹಮ್ಮದ್ ಶಾಹಿದ್ ಮುಕ್ತೇಸರ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News