ಹೆಜಮಾಡಿ ಗ್ರಾಪಂ ಉಪಾಧ್ಯಕ್ಷ ವಿರುದ್ಧ ಪ್ರಕರಣ ದಾಖಲು
Update: 2020-05-26 17:41 GMT
ಪಡುಬಿದ್ರಿ : ಹೆಜಮಾಡಿ ಗ್ರಾಮ ಪಂಚಾಯಿತಿಯ ಅಂಗಡಿ ಕೋಣೆ ಏಲಂಗೆ ಸಂಬಂಧಿಸಿ ಪಂಚಾಯತ್ ಉಪಾಧ್ಯಕ್ಷರ ಮೇಲೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಪ್ರಕರಣ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.
ಪರಿಶಿಷ್ಠ ಜಾತಿಯ ಮುಂಡಾಳ ಸಮುದಾಯದ ಸುಧಾಕರ ಕೆ ಎಂಬವರು ಮೇ 20ರಂದು ಹೆಜಮಾಡಿ ಗ್ರಾಮದ ಗ್ರಾಮ ಪಂಚಾಯತಿಗೆ ಒಳಪಟ್ಟ ಅಂಗಡಿಯ ಕೋಣೆಯ ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ ಕರ್ಕೆರ ಎಂಬುವವರು ಸಾರ್ವಜನಿಕವಾಗಿ ಅವಾಚ್ಯ ಶಬ್ಧಗಳಿಂದ ಬೈದು, ನಿಂದಿಸಿ, ನೀನು ಏಲಂನಲ್ಲಿ ಭಾಗವಹಿಸಬಾರದು, ನೀನು ಈಗಲೇ ಸಭಾ ಭವನದಿಂದ ಹೊರನಡೆಯಬೇಕು, ನೀನು ಅಂಗಡಿ ಕೋಣೆ ಕೊಂಡರೆ ನಿನ್ನ ಅಂಗಡಿಗೆ ಯಾರು ಬರುತ್ತಾರೆ ಎಂದು ಅವಮಾನಿಸಿ ಬಲಾತ್ಕಾರವಾಗಿ ಸಭಾ ಭವನದಿಂದ ಹೊರಹಾಕಿ ಜೀವ ಬೆದರಿಕೆಯನ್ನು ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ಪಡುಬಿದ್ರಿ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದೆ.