ಕರ್ನಾಟಕದ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ
Update: 2020-05-27 11:47 GMT
ಉಡುಪಿ, ಮೇ 27: ಅರಬಿ ಸಮುದ್ರದ ದಕ್ಷಿಣಪೂರ್ವ ಭಾಗ ಹಾಗೂ ಅದರ ಪಕ್ಕದ ಪ್ರದೇಶಗಳಲ್ಲಿ ನಿಮ್ನ ಒತ್ತಡ ಪ್ರದೇಶದ ಸೃಷ್ಟಿಯಾಗುವ ಸಂಭವವಿದ್ದು, ಇದರಿಂದಾಗಿ ಕರ್ನಾಟಕ, ಕೇರಳ ಹಾಗೂ ಲಕ್ಷದ್ವೀಪಗಳ ಮೀನುಗಾರರು ಮೇ 31ರಿಂದ ಜೂನ್ 4ರ ನಡುವಿನ ಅವಧಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇಲಾಖೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತಿದ್ದು, ಮುಂದಿನ ಬೆಳವಣಿಗೆಗಳ ಕುರಿತು ಮಾಹಿತಿಗಳನ್ನು ನೀಡಲಿದೆ. ನೀಡಿರುವ ಹವಾಮಾನ ಮುನ್ಸೂಚನೆಯ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಪಶ್ಚಿಮ ಕರಾವಳಿಯ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸಲಹೆ ನೀಡಿದೆಯಲ್ಲದೇ, ಈಗಾಗಲೇ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿರುವ ಬೋಟುಗಳು, ಮುಂಗಾರು ಆರಂಭಕ್ಕೆ ಪೂರ್ವಭಾವಿಯಾಗಿ ವಿಧಿಸಿರುವ ಮೀನುಗಾರಿಕಾ ನಿಷೇಧದಂತೆ ಬಂದರುಗಳಿಗೆ ಹಿಂದಿರುಗುವಂತೆಯೂ ಇಲಾಖೆ ಸಲಹೆ ನೀಡಿದೆ.