ರೈಲಿನಲ್ಲಿ ಇಬ್ಬರು ವಲಸೆ ಕಾರ್ಮಿಕರ ಶವ ಪತ್ತೆ
ವಾರಣಾಸಿ, ಮೇ 26: ಕೋವಿಡ್-19 ಲಾಕ್ಡೌನ್ ಹಿನ್ನೆಲೆಯಲ್ಲಿ ವಸತಿ, ಅನ್ನ, ನೀರಿಲ್ಲದೆ ಕಂಗಾಲಾಗಿರುವ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು ರೈಲುಗಳಲ್ಲಿ ತಮ್ಮ ಊರುಗಳಿಗೆ ವಾಪಸಾಗುತ್ತಿರುವಂತೆಯೇ, ಬುಧವಾರ ಮುಂಬೈಯಿಂದ ವಾರಣಾಸಿಗೆ ಆಗಮಿಸಿದ್ದ ರೈಲಿನಲ್ಲಿ ಇಬ್ಬರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮುಂಬೈಯಿಂದ ಎರಡು ದಿನಗಳ ಹಿಂದೆ ನಿರ್ಗಮಿಸಿದ್ದ ಶ್ರಮಿಕ್ ವಿಶೇಷ ರೈಲು ಉತ್ತರಪ್ರದೇಶದ ಮಂಡುವಾದಿ ನಿಲ್ದಾಣಕ್ಕೆ ಬುಧವಾರ ಆಗಮಿಸಿತ್ತು. ರೈಲಿನಲ್ಲಿ ಸುಮಾರು 1500 ಪ್ರಯಾಣಿಕರಿದ್ದರು.
‘‘ಮುಂಬೈನ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಇಂದು ಬೆಳಗ್ಗೆ 8:20ಕ್ಕೆ ರೈಲು ವಾರಾಣಸಿಗೆ ಆಗಮಿಸಿತ್ತು. ಎಲ್ಲ ಪ್ರಯಾಣಿಕರು ಇಳಿದ ಬಳಿಕ, ರೈಲಿನಲ್ಲಿ ಇಬ್ಬರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ರೈಲ್ವೆ ಪೊಲೀಸರು ಪ್ರಕರಣದ ಬಗ್ಗೆ ವಿವರಗಳನ್ನು ಕಲೆಹಾಕುತ್ತಿದ್ದಾರೆ ಎಂದು ವಾರಣಾಸಿ ಸ್ಟೇಶನ್ ಮಾಸ್ಟರ್ ಅರುಣ್ ಕುಮಾರ್ ತಿಳಿಸಿದ್ದಾರೆ.
ಮೃತಪಟ್ಟವರಲ್ಲೊಬ್ಬ ದಿವ್ಯಾಂಗನೆಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಹಲವರು ದಿನಗಳಿಂದ ಆತ ಅಸ್ವಸ್ಥನಾಗಿದ್ದನೆಂದು ಆತನ ಕುಟುಂಬಿಕರು ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಬೇರೊಂದು ಬೋಗಿಯಲ್ಲಿ ಪತ್ತೆಯಾದ ಇನ್ನೋರ್ವ ವ್ಯಕ್ತಿಯ ಮೃತದೇಹವನ್ನು ಈವರೆಗೆ ಗುರುತಿಸಲಾಗಿಲ್ಲ. ಆತ ಏಕಾಂಗಿಯಾಗಿ ಪ್ರಯಾಣಿಸಿದ್ದನೆಂದು ಅವರು ಹೇಳಿದ್ದಾರೆ. ಪೊಲೀಸರು ಎರಡೂ ಮೃತದೇಹಗಳನ್ನು ಮರಣೋತ್ಚರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.