ಬಾಲಕನಿಗೆ ಹಲ್ಲೆ ನಡೆಸಿ, ‘ಜೈ ಶ್ರೀರಾಂ’ ಹೇಳಲು ಬಲವಂತ: ದುಷ್ಕರ್ಮಿಯ ವಿರುದ್ಧ ಪ್ರಕರಣ ದಾಖಲು
ಬಂಟ್ವಾಳ, ಮೇ 27: ಬಾಲಕನೊಬ್ಬನಿಗೆ ಹಲ್ಲೆ ನಡೆಸಿ, ಜೈ ಶ್ರೀರಾಂ ಎಂದು ಹೇಳಲು ಬಲವಂತಪಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಹಲ್ಲೆ ನಡೆಸಿದ ದುಷ್ಕರ್ಮಿಯ ವಿರುದ್ಧ ಮೆಲ್ಕಾರ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ನಡೆಸಿದ ದುಷ್ಕರ್ಮಿಯನ್ನು ದಿನೇಶ್ ಕನ್ಯಾನ ಎಂದು ಗುರುತಿಸಲಾಗಿದೆ. ಕುಡ್ತಮುಗೇರುವಿನ ಬಾಲಕನೊಬ್ಬನಿಗೆ ಈತ ಶಾಲೆಯ ಮೈದಾನವೊಂದರಲ್ಲಿ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇಂದು ವೈರಲ್ ಆಗಿದೆ. ಹಲ್ಲೆ ನಡೆಸಿದ ಮೂವರಲ್ಲಿ ಒಬ್ಬ ಹಲ್ಲೆಗೊಳಗಾದ ಬಾಲಕನ ಸ್ನೇಹಿತನಾಗಿದ್ದು, ಈತನೇ ಇನ್ನಿಬ್ಬರನ್ನು ಸ್ಥಳಕ್ಕೆ ಕರೆಸಿ ಹಲ್ಲೆ ನಡೆಸಲು ಹೇಳಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ದುಷ್ಕರ್ಮಿಯನ್ನು ಬಂಧಿಸುವಂತೆ ಆಗ್ರಹ ಕೇಳಿಬಂದಿದೆ.
ಸೂಕ್ಷ್ಮ ಪ್ರದೇಶವಾಗಿರುವ ಬಂಟ್ವಾಳ ತಾಲೂಕಿನಲ್ಲಿ ಇಂತಹ ಘಟನೆ ನಡೆದಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ದುಷ್ಕರ್ಮಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.