‘ಹೂ ನಷ್ಟ ಪರಿಹಾರಕ್ಕೆ ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ’

Update: 2020-05-28 13:00 GMT

ಉಡುಪಿ, ಮೇ 28: ಲಾಕ್‌ಡೌನ್‌ನಿಂದ ಹೂವಿನ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಹೆಕ್ಟೇರ್‌ಗೆ 25,000ರೂ. ಪರಿಹಾರವನ್ನು ಗರಿಷ್ಟ ಒಂದು ಹೆಕ್ಟೇರ್ ವಿಸ್ತೀರ್ಣಕ್ಕೆ ಪಾವತಿಸಲಾಗುತ್ತಿದೆ. ಇದಕ್ಕಾಗಿ ಬೆಳೆ ಸಮೀಕ್ಷೆಯಲ್ಲಿ ಬೆಳೆ ನಮೂ ದಾಗದೆ ಇರುವ ರೈತರಿಂದ ಅರ್ಜಿಗಳನ್ನು ತಾಲೂಕು ತೋಟಗಾರಿಕೆ ಇಲಾಖೆ ಕಚೇರಿಗಳಲ್ಲಿ ಸ್ವೀಕರಿಸಲಾಗುತ್ತಿದೆ.

ಈ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ರೈತರಿಂದ ಬೇರೆ ಜಿಲ್ಲೆಯಲ್ಲಿ ಹಣ ವಸೂಲಿಯನ್ನು ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಮಾಡುತ್ತಿರುವ ವರದಿಗಳು ಬರುತಿದ್ದು, ಜಿಲ್ಲೆಯ ರೈತರು ಯಾವುದೇ ಪರಿಹಾರ ಪಾವತಿಗಾಗಿ ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಇಲಾಖಾ ಅಧಿಕಾರಿ ಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಸದರಿ ಬೆಳೆ ಇರುವ ಅರ್ಜಿದಾರರ ತಾಕುಗಳಿಗೆ ಹೋಬಳಿ ಮಟ್ಟದ ಸಮಿತಿ ಭೇಟಿ ನೀಡಿ ಬೆಳೆ ಇರುವ ಬಗ್ಗೆ ಖಚಿತಪಡಿಸಿಕೊಂಡು ಪರಿಹಾರ ಪಾವತಿಸಲು ಕ್ರಮವಹಿಸಲಾಗುವುದು. ಈ ಬಗ್ಗೆ ರೈತ-ಬಾಂಧವರು ಯಾವುದೇ ಗೊಂದಲಕ್ಕೆ ಒಳಗಾಗಬಾರದೆಂದು ತೋಟಗಾರಿಕಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ತೋಟಗಾರಿಕೆ ಉಪನಿರ್ದೇಶಕರು (ಜಿಪಂ), ಉಡುಪಿ ಜಿಲ್ಲೆ: 0820-2531950, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಉಡುಪಿ ತಾಲೂಕು: 0820- 2522837, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಕುಂದಾಪುರ ತಾಲೂಕು:08254-230813 ಇವರನ್ನು ಸಂಪರ್ಕಿಸುವಂತೆ ಉಡುಪಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಭುವನೇಶ್ವರಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News