ಮಸೀದಿ ಪ್ರವೇಶ: ದೇಶಾದ್ಯಂತ ಏಕ ರೀತಿಯ ನಿಯಮ ರೂಪಿಸಲು ಖಾಝಿ ಬೇಕಲ ಉಸ್ತಾದ್ ಆಗ್ರಹ

Update: 2020-05-30 13:42 GMT

ಮಂಗಳೂರು, ಮೇ 30: ಕೊರೋನ ತಡೆಗಟ್ಟುವ ಸಲುವಾಗಿ ವಿಧಿಸಲಾಗಿದ್ದ ಲಾಕ್‌ಡೌನ್‌ನಲ್ಲಿ ಜೂ.8ರಿಂದ ವಿನಾಯಿತಿ ನೀಡಿ ಮಂದಿರ, ಚರ್ಚ್ ಹಾಗು ಮಸೀದಿಗಳಿಗೆ ಪ್ರವೇಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಘೋಷಿಸಿರುವುದು ಸ್ವಾಗತಾರ್ಹ. ಆದರೆ ಈ ಬಗ್ಗೆ ಇನ್ನೂ ಯಾವುದೇ ಮಾರ್ಗಸೂಚಿಯನ್ನು ಸರಕಾರ ಪ್ರಕಟಿಸಿಲ್ಲ. ಸಮಾಜದ, ಜನರ ಆರೋಗ್ಯದ ಹಿತದೃಷ್ಟಿಯಿಂದ ಕೇಂದ್ರ ಸರಕಾರವು ಮಸೀದಿ ಪ್ರವೇಶಕ್ಕೆ ಸಂಬಂಧಿಸಿದಂತೆ ದೇಶಕ್ಕೆ ಅನ್ವಯಿಸುವಂತೆ ಏಕ ರೀತಿಯ ನಿಯಮ ರೂಪಿಸಬೇಕಿದೆ ಎಂದು ಸಂಯುಕ್ತ ಖಾಝಿ ಅಲ್ಹಾಜ್ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಆಗ್ರಹಿಸಿದ್ದಾರೆ.

ಕೊರೋನ ವೈರಸ್ ರೋಗವು ಒಂದು ರಾಜ್ಯಕ್ಕೆ ಸೀಮಿತವಾಗಿಲ್ಲ. ವಿಶ್ವಕ್ಕೆ ಇದು ಹಬ್ಬಿದೆ. ಭಾರತದಲ್ಲಿ ಇದರ ನಿಗ್ರಹಕ್ಕೆ ಆಡಳಿತ ವರ್ಗವು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುತ್ತಿವೆ. ಅದರಲ್ಲೂ ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರವಾದ ರಮಝಾನ್‌ನಲ್ಲೂ ಸರಕಾರದ ನಿರ್ಬಂಧಗಳನ್ನೆಲ್ಲಾ ಅವರು ಪಾಲಿಸಿದ್ದಾರೆ. ಮಸೀದಿಗೆ ಹೋಗದೆ ಮನೆಯಲ್ಲೇ ನಮಾಝ್ ನಿರ್ವಹಿಸಿದ್ದಾರೆ. ನಮ್ಮ ಜೀವನದಲ್ಲಿ ಸತತ 10 ಶುಕ್ರವಾರ ಜುಮಾ ನಮಾಝ್ ಇಲ್ಲದೆ ಕಳೆದಿರುವುದು ಕೂಡ ಅತ್ಯಂತ ನೋವಿನ ಸಂಗತಿಯಾಗಿದೆ. ಇದೀಗ ಜೂ.8ರಿಂದ ಮಸೀದಿ ಪ್ರವೇಶಕ್ಕೆ ಅನುಮತಿ ನೀಡುವುದಾದರೂ ಕೂಡ ದೇಶಕ್ಕೆ ಅನ್ವಯಿಸುವಂತಹ ನಿಯಮಾವಳಿಯನ್ನು ಕೇಂದ್ರ ಸರಕಾರ ರೂಪಿಸಬೇಕಿದೆ. ಸರಕಾರ ಅನುಮತಿ ನೀಡಿದ್ದರೂ ಈಗ ಮಸೀದಿಗೆ ಮೊದಲಿನಂತೆ ಹೋಗುವ ಪರಿಸ್ಥಿತಿ ಇಲ್ಲ. ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಮಸೀದಿಯಲ್ಲಿ ಸದಾ ಧಾರ್ಮಿಕ ಚಟುವಟಿಕೆ ನಡೆಯುತ್ತಿರುತ್ತದೆ. ಅಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅಷ್ಟು ಸುಲಭವಲ್ಲ. ಶುಕ್ರವಾರವಂತೂ ಸುರಕ್ಷಿತ ಅಂತರ ಕಾಪಾಡಲು ತೀರಾ ಕಷ್ಟವಾಗಬಹುದು. ಯಾಕೆಂದರೆ ಕನಿಷ್ಟ 1 ಮೀಟರ್ ಅಂತರದಲ್ಲಿ ನಿಂತು ನಮಾಝ್ ನಿರ್ವಹಿಸಲು ಮುಂದಾದರೆ ಸ್ಥಳಾವಕಾಶ ಸಾಕಾಗದು. ಇನ್ನು ಎಲ್ಲ ಮಸೀದಿಗಳಲ್ಲಿ ಕಾರ್ಪೆಟ್ ಗಳನ್ನು ತೆಗೆಯುವುದೂ ಅಷ್ಟು ಸುಲಭವಿಲ್ಲ. ಈ ನಿಟ್ಟಿನಲ್ಲಿ ಮಸೀದಿ ಆಡಳಿತ ವ್ಯವಸ್ಥೆಯೊಂದಿಗೆ ಸಹಕರಿಸುವುದು ಕೂಡ ನಮ್ಮ ಕರ್ತವ್ಯವಾಗಿದೆ. ಅಂದರೆ ಬಾಂಗ್ ಆದ ತಕ್ಷಣ ಸಾಮೂಹಿಕ ನಮಾಝ್ ಮಾಡುವುದು. ನಮಾಝ್ ಆದ ತಕ್ಷಣ ಮಸೀದಿಯಿಂದ ಹೊರ ಹೋಗುವುದು. ಇನ್ನು ಸಣ್ಣ ಮಕ್ಕಳು, ಹಿರಿಯರು, ಅನಾರೋಗ್ಯ ಪೀಡಿತರು ಸದ್ಯದ ಪರಿಸ್ಥಿತಿಯಲ್ಲಿ ಮಸೀದಿಯ ಬದಲು ಮನೆಯಲ್ಲೇ ನಮಾಝ್ ಮಾಡುವುದು ಉತ್ತಮ. ಮನೆಯಲ್ಲೇ ವೂಝು ಮಾಡಿ ಹೋಗುವುದು, ಮಸೀದಿಯ ಶೌಚಾಲಯ ಬಳಸದೇ ಇರುವುದು, ಸುನ್ನತ್ ನಮಾಝ್‌ಗಳನ್ನು ಮನೆಯಲ್ಲೇ ನಿರ್ವಹಿಸುವುದು, ದಿಕ್ರ್ ಮಜ್ಲಿಸ್‌ಗಳನ್ನು ಸದ್ಯಕ್ಕೆ ಮಸೀದಿಯಲ್ಲಿ ನಡೆಸದೇ ಇರುವುದು ಇತ್ಯಾದಿಗಳನ್ನು ಮಾಡುವುದು ಉತ್ತಮ. ಮಸೀದಿ ಪ್ರವೇಶಿಸಲು ಅವಕಾಶ ಸಿಕ್ಕಿತೆಂದು ಅದರ ದುರುಪಯೋಗ ಮಾಡುವುದಾಗಲಿ, ಸುರಕ್ಷಿತ ಅಂತರ ಕಾಪಾಡುವುದನ್ನು ಮರೆಯುವುದಾಗಲೀ ಮಾಡಬಾರದು. ಎಲ್ಲರೂ ಸಂಯಮದಿಂದ ವರ್ತಿಸಬೇಕು ಎಂದು ಖಾಝಿ ಬೇಕಲ ಉಸ್ತಾದ್ ಕರೆ ನೀಡಿದ್ದಾರೆ.

ಸರಕಾರ ಅನುಮತಿ ನೀಡಿದ್ದರೂ ಸದ್ಯದ ಸ್ಥಿತಿಯಲ್ಲಿ ಮಸೀದಿಗೆ ಮೊದಲಿನಂತೆ ಸಹಜವಾಗಿ ಹೋಗಲು, ನಮಾಝ್ ಮಾಡಲು, ಸಾಕಷ್ಟು ಸಮಯ ಅಲ್ಲಿ ಕಳೆಯಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಕೇಂದ್ರ ಮತ್ತು ರಾಜ್ಯ ವಕ್ಫ್ ಬೋರ್ಡ್ ಪರಸ್ಪರ ಸಮಲೋಚನೆ ಮಾಡಿ ಈ ಬಗ್ಗೆ ನಿಯಮಾವಳಿಯನ್ನು ರೂಪಿಸಬೇಕು. ಅದರ ಆಧಾರದ ಮೇಲೆ ಉಲಮಾ ವರ್ಗವು ಚರ್ಚೆ ನಡೆಸಿ ಮಸೀದಿ ಪ್ರವೇಶಕ್ಕೆ ಸಂಬಂಧಿಸಿ ಮಾರ್ಗದರ್ಶನ ನೀಡಲು ಬದ್ಧವಾಗಿದೆ ಎಂದು ಬೇಕಲ ಉಸ್ತಾದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News